ಚಿತ್ರದುರ್ಗದಲ್ಲಿ ತ್ವರಿತ ಕೋವಿಡ್ ಪತ್ತೆಗಾಗಿ ಹೆಚ್ಚುವರಿ ಲ್ಯಾಬ್ ಸ್ಥಾಪನೆ; ಬಿ.ಶ್ರೀರಾಮುಲು
ಚಿತ್ರದುರ್ಗ, ಮೇ 6: ಕೋವಿಡ್ 2ನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ತ್ವರಿತಗತಿಯಲ್ಲಿ ರೋಗ ಪತ್ತೆ ಮಾಡಲು ಚಿತ್ರದುರ್ಗ ಜಿಲ್ಲೆಗೆ ಹೆಚ್ಚುವರಿ ಆರ್.ಟಿ-ಪಿಸಿಆರ್ ಲ್ಯಾಬ್ ಸ್ಥಾಪನೆ ಸೇರಿದಂತೆ ಕೋವಿಡ್ ಪಾಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆಯ ಕುರಿತಂತೆ ಬುಧವಾರ ನಡೆಸಿದ ಸಭೆಯಲ್ಲಿ ನಿರ್ದೇಶನ ನೀಡಿದರು.

ಪರೀಕ್ಷಾ ವರದಿ ವಿಳಂಬ
ಎರಡನೇ ಅಲೆ ತೀವ್ರತರನಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪರೀಕ್ಷಾ ವರದಿ ವಿಳಂಬವಾದಾಗ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿರುವ ಬದಲು ಎಲ್ಲರೊಂದಿಗೆ ಹಾಗೂ ಹೊರಗಡೆ ಓಡಾಟ ಮಾಡುತ್ತಿರುವುದರಿಂದ ಬೇರೆಯವರಿಗೆ ಇದು ಹರಡುತ್ತಿದೆ. ಹಾಗೂ ಒಂದೇ ಮನೆಯಲ್ಲಿಯೇ ನಾಲ್ಕೈದು ಜನ ಒಂದೇ ಕುಟುಂಬದ ಸದಸ್ಯರೇ ಮರಣ ಹೊಂದುತ್ತಿರುವುದರಿಂದ ಈಗಿರುವ ಹಾಸ್ಟೆಲ್ಗಳನ್ನು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಪರಿವರ್ತಿಸಿ, ಮನೆಯ ಬದಲಾಗಿ ರೋಗ ಲಕ್ಷಣ ಹಾಗೂ ತೀವ್ರತೆಯನ್ನಾಧರಿಸಿ ಕೋವಿಡ್ ಕೇರ್ ಸೆಂಟರ್, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್.ಟಿ-ಪಿಸಿಆರ್ ಲ್ಯಾಬ್ 3 ಕೋಟಿ ರೂ.
ರೋಗದ ಹರಡುವಿಕೆಗೆ ಬ್ರೇಕ್ ಹಾಕಲು ಜಿಲ್ಲೆಗೆ ಇನ್ನೊಂದು ಹೆಚ್ಚುವರಿಯಾಗಿ ಆರ್.ಟಿ-ಪಿಸಿಆರ್ ಲ್ಯಾಬ್ 3 ಕೋಟಿ ರೂ. ಇದಕ್ಕೆ ಬೇಕಾದ ಲ್ಯಾಬ್ ಪರಿಕರ, ಉಪಯೋಗಿಸುವ ಸಾಮಗ್ರಿ 4 ಕೋಟಿ ರೂ., ಕೋವಿಡ್ ಆಸ್ಪತ್ರೆಗಳ ನಿರ್ವಹಣೆ 5 ಕೋಟಿ ರೂ., ವೈದ್ಯಕೀಯ ರಕ್ಷಣಾ ಪರಿಕರ, ಗೃಹ ರಕ್ಷಕ ಸಿಬ್ಬಂದಿ ವೇತನ, ವಾಹನಗಳು ಸೇರಿದಂತೆ 6.8 ಕೋಟಿ ಹಾಗೂ ಎಚ್.ಎಫ್.ಎನ್.ಸಿ ಮಸಿನ್ಗಾಗಿ 1.20 ಕೋಟಿ ಸೇರಿದಂತೆ 20 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಆರೋಗ್ಯ ಇಲಾಖೆ ಆಯುಕ್ತರು ಅನುಮೋದನೆ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದರು.

ಹೆಚ್ಚುವರಿ 200 ಬೆಡ್
ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 175 ಆಕ್ಸಿಜನ್ನೆಟೆಡ್ ಬೆಡ್ಗಳಿದ್ದು, ಇದರೊಂದಿಗೆ ಇನ್ನೂ 200 ಆಕ್ಸಿಜನ್ನೆಟೆಡ್ ಬೆಡ್ಗಳ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಬೇಕಾದ ಆಕ್ಸಿಜನ್ನ್ನು ಪ್ರತ್ಯೇಕ ಯುನಿಟ್ ಮೂಲಕ ಪೂರೈಕೆ ಮಾಡಲು ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೆ ಅನುಮೋದನೆ ನೀಡಿದ್ದು ತಕ್ಷಣವೇ ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗೆ ತಿಳಿಸಿದ ಸಚಿವರು, ಪ್ರತಿನಿತ್ಯ ಈಗಿರುವ ಬೇಡಿಕೆಯನ್ವಯ 7 ಕ್ವಿಂಟಾಲ್ ಆಕ್ಸಿಜನ್ ಬೇಕಾಗಿದ್ದು, ಇದರ ಪೂರೈಕೆಗೆ ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಒಪ್ಪಿಗೆ ನೀಡಿದ್ದು, ಒಂದೆರಡು ದಿನಗಳಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಲು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಔಷಧಗಳ ಪೂರೈಕೆಗೆ ಕ್ರಮ
ಚಿತ್ರದುರ್ಗ ಜಿಲ್ಲೆಗೆ ಪ್ರತಿನಿತ್ಯ ಬೇಕಾಗುವ ರೆಮ್ಡಿಸೀವರ್ ಹಾಗೂ ಇತರೆ ಜೀವ ರಕ್ಷಕ ಔಷಧಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಉಪ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಬೇಡಿಕೆಯಷ್ಟು ಔಷಧಗಳನ್ನು ಸಹ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಆದರೆ ಈಗಿರುವ ರೋಗಿಗಳಿಗೆ ಯಾವುದೇ ಔಷಧ, ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿ. ಅಗತ್ಯ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ವಿಶೇಷ ಜಾಗೃತ ದಳವನ್ನು ನೇಮಕ ಮಾಡಿ, ಪ್ರತಿ ತಾಲ್ಲೂಕಿಗೆ ಹಾಗೂ ಪ್ರತ್ಯೇಕ ವ್ಯವಸ್ಥೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ರೆಮ್ಡಿಸೀವರ್ ಕಾಳಸಂತೆಯಲ್ಲಿ ಮಾರಾಟ
ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿಯವರು ಮಾತನಾಡಿ, ಜನರಿಗೆ ಬೆಡ್ ಸಿಗುತ್ತಿಲ್ಲ, ಔಷಧ ಹಾಗೂ ಆಕ್ಸಿಜನ್ ಸಿಗುತ್ತಿಲ್ಲ, ಪ್ರತಿನಿತ್ಯ ಮರಣ ಹೊಂದುತ್ತಿದ್ದಾರೆ. ಆದರೆ ಇದನ್ನು ತಡೆಯಲು ತುರ್ತು ಕ್ರಮ ವಹಿಸಬೇಕಾಗಿದ್ದು, ಇದಕ್ಕೆ ಬೇಕಾದ ಔಷಧ, ಆಕ್ಸಿಜನ್ ಸೇರಿದಂತೆ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಲ್ಲದೆ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವುದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಶಾಸಕರು ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಾದ ಎಂ.ಚಂದ್ರಪ್ಪನವರು ಮಾತನಾಡಿ, ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ, ಬಿ.ದುರ್ಗ 30 ಹಾಸಿಗೆಯನ್ನು ಕೋವಿಡ್ಗಾಗಿ ಮೀಸಲಿರಿಸಿದ್ದು, ಇದಕ್ಕೆ ಬೇಕಾದ ಆಕ್ಸಿಜನ್ ಪೂರೈಕೆ ಮಾಡಲು ತಿಳಿಸಿ. ರೆಮ್ಡಿಸೀವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು ಇದನ್ನು ತಡೆಗಟ್ಟಲು ಹೇಳಿದರು.
Recommended Video

ರೆಮ್ಡಿಸಿವಿರ್ ಪೂರೈಕೆಯಾಗುತ್ತಿಲ್ಲ
ಶಾಸಕರಾದ ಟಿ.ರಘುಮೂರ್ತಿಯವರು ಮಾತನಾಡಿ, ರೆಮ್ಡಿಸಿವಿರ್ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿಲ್ಲ, ಇದನ್ನು ಎಷ್ಟು ಬೇಡಿಕೆ ಇದೆ ಅಷ್ಟೂ ಪೂರೈಕೆಗೆ ಔಷಧ ನಿಯಂತ್ರಕರು ಬೇಡಿಕೆ ಕಳುಹಿಸಿ ತರಿಸಿಕೊಳ್ಳಬೇಕೆಂದು ತಿಳಿಸಿದರು. ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಹೊಸದುರ್ಗದಲ್ಲಿ ಸಾಕಷ್ಟು ರೋಗಿಗಳಿದ್ದು, ಇವರಿಗೆ ಬೇಕಾದ ಔಷಧವನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಪೂರೈಕೆಯಾಗುತ್ತಿಲ್ಲ, ಆಕ್ಸಿಜನ್ ಸಿಲಿಂಡರ್ಗಳ ಕೊರತೆಯು ಇದ್ದು, ಇದನ್ನು ಸಹ ಸಮರ್ಪಕವಾಗಿ ಪೂರೈಕೆ ಮಾಡಲು ಮನವಿ ಮಾಡಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಹಾಗೂ ಅಗತ್ಯ ಇರುವ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಹಂತದಲ್ಲಿಯೂ ಮೇಲ್ವಿಚಾರಣೆ ಮಾಡುತ್ತಿದ್ದು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.












Click it and Unblock the Notifications