ವಯಸ್ಸಾದ ಪೋಷಕರಿಗಾಗಿ ಅಮೆರಿಕದ ಐಷಾರಾಮಿ ಬದುಕು ತೊರೆದು 18 ವರ್ಷಗಳ ನಂತರ ಬೆಂಗಳೂರಿಗೆ ಬಂದ ಮೆಟಾ ಉದ್ಯೋಗಿ
ಹೆತ್ತ ತಂದೆ-ತಾಯಿಯನ್ನ ಮತ್ತು ಪ್ರೀತಿಪಾತ್ರರನ್ನ ಬಿಟ್ಟು ಉದ್ಯೋಗಕ್ಕಾಗಿ ಭಾರತದಿಂದ ವಿದೇಶಕಕ್ಕೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಅಲ್ಲಿ ಎಷ್ಟೇ ಹಣ ಸಂಪಾದಿಸಿದರೂ ಕೂಡ ತಾಯ್ನಾಡಿನ ಸೆಳೆತ, ಪೋಷಕರ ಮೇಲಿನ ಪ್ರೀತಿ ಅವರನ್ನು ಮತ್ತೆ ಇಲ್ಲಿಗೆ ಕರೆತರುತ್ತದೆ.
ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಇತ್ತೀಚೆಗೆ ಮೆಟಾ ಕಂಪನಿಯ ಹಿರಿಯ ಎಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಬಾಲಾಜಿ ಗುರುರಾಜನ್ ಅವರು ತಮ್ಮ ವಯಸ್ಸಾದ ಪೋಷಕರ ಜೊತೆ ಕಾಲ ಕಳೆಯುವ ಉದ್ದೇಶದಿಂದ ಬರೋಬ್ಬರಿ 18 ವರ್ಷಗಳ ನಂತರ ಅಮೆರಿಕ ಬಿಟ್ಟು ತಮ್ಮ ಕುಟುಂಬ ಸಮೇತ ಬೆಂಗಳೂರಿಗೆ ಮರಳಿದ್ದಾರೆ.

ತಿರುಚಿನಾಪಳ್ಳಿಯ ಎನ್ಐಟಿಯಲ್ಲಿ ಪದವಿ ಪಡೆದಿರುವ ಬಾಲಾಜಿ ಗುರುರಾಜನ್, ಮೈಕ್ರೋಸಾಫ್ಟ್ ಮತ್ತು ಲಿಂಕ್ಡ್ಇನ್ನಂತಹ ಟೆಕ್ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಲಗೇಜ್ ಬ್ಯಾಗ್ಗಳಿಂದ ತುಂಬಿದ ಟ್ರಾಲಿಗಳ ಫೋಟೋ ಹಂಚಿಕೊಂಡಿದ್ದ ಅವರು, ಭಾರತಕ್ಕೆ ಬರಲು ಕಾರಣವೇನು ಎನ್ನುವುದನ್ನಾ ತಿಳಿಸಿದ್ದಾರೆ. " ವಯಸ್ಸಾದ ಪೋಷಕರು ಮತ್ತು ನನ್ನ ಮಕ್ಕಳ ಜೊತೆ ಕಾಲ ಕಳೆಯಬೇಕು. ಹಾಗಾಗಿ 18 ವರ್ಷಗಳ ಯುಎಸ್ ಜೀವನವನ್ನು ಮುಗಿಸಿ ಒಂದು ತಿಂಗಳ ಹಿಂದಷ್ಟೆ ಬೆಂಗಳೂರಿಗೆ ಬಂದೆವು ಎಂದು ಬರೆದುಕೊಂಡಿದ್ದಾರೆ.
ಹೊಸ ಆರಂಭದ ಸವಾಲುಗಳು
ಸುಮಾರು ಎರಡು ದಶಕಗಳ ಕಾಲ ಕ್ಯಾಲಿಫೋರ್ನಿಯಾದ 'ಬೇ ಏರಿಯಾ'ದಲ್ಲಿ ಕಳೆದ ದಿನಗಳು ಬಾಲಾಜಿ ಅವರ ವೃತ್ತಿಜೀವನಕ್ಕೆ ದೊಡ್ಡ ಉತೇಜನ ನೀಡಿದೆ. ತಮಗೆ ಉತ್ತಮ ಸ್ನೇಹಿತರನ್ನು ಹಾಗೂ ಬದುಕಿನ ಪಾಠವನ್ನು ಹೇಳಿ ಕೊಟ್ಟ ಆ ಜಾಗಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, 18 ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಹೊಸದಾಗಿ ಬದುಕು ಕಟ್ಟಿಕೊಳ್ಳುವುದು ಅವರಿಗೆ ಒಂದು ಪ್ರಾಜೆಕ್ಟ್ನಂತೆಯೇ ಅನಿಸುತ್ತಿದೆ. ಮಕ್ಕಳಿಗೆ ಶಾಲೆಯ ಹುಡುಕಾಟ, ಮನೆ ಸೆಟಪ್ ಮಾಡೋದು ಮತ್ತು ದಿನನಿತ್ಯದ ಕೆಲಸಗಳ ನಡುವೆ ಅವರು ಮತ್ತೆ ತಮ್ಮ ಹಳೆಯ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಅನಿವಾಸಿ ಭಾರತೀಯರಿಗಾಗಿ ಹೊಸ ಆ್ಯಪ್
ಬೆಂಗಳೂರಿಗೆ ಮರಳಿದಾಗ ಎದುರಾಗುವ ಆರ್ಥಿಕ ಸವಾಲುಗಳನ್ನೇ ಇಟ್ಟುಕೊಂಡು ಬಾಲಾಜಿ ಅವರು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಭಾರತಕ್ಕೆ ಮರಳುವ ಅನಿವಾಸಿ ಭಾರತೀಯರ ಆರ್ಥಿಕ ಲೆಕ್ಕಾಚಾರಗಳನ್ನು ಸುಲಭಗೊಳಿಸುವ ಉದ್ದೇಶದಿಂದ 'ಭಾವಿತ್ತ' ( Bhavitta ) ಎಂಬ ಹೊಸ ಎಐ ಪ್ರಾಜೆಕ್ಟ್ ಆರಂಭಿಸಿದ್ದಾರೆ. ಆಂಥ್ರೋಪಿಕ್ನ 'ಕ್ಲೌಡ್ ಎಐ' ಬಳಸಿ ಅಭಿವೃದ್ಧಿಪಡಿಸಲಾಗಿರುವ ಈ ಅಪ್ಲಿಕೇಶನ್, ಎರಡು ದೇಶಗಳ ನಡುವಿನ ಆರ್ಥಿಕ ವ್ಯವಹಾರಗಳು, ಕರೆನ್ಸಿ, ತೆರಿಗೆ ವ್ಯವಸ್ಥೆಗಳನ್ನಾ ಸುಲಭವಾಗಿ ನೋಡಿಕೊಳ್ಳಲು ಜನರಿಗೆ ಸಹಾಯ ಮಾಡಲಿದೆ.
ನೆಟ್ಟಿಗರ ಪರ-ವಿರೋಧ ಚರ್ಚೆ
ಬಾಲಾಜಿ ಗುರುರಾಜನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಶೋಬಿತಮ್ ಸಿಇಒ ರಘು ಸೇತುರಾಮನ್ ಸೇರಿದಂತೆ ಅನೇಕ ವೃತ್ತಿಪರರು ಇವರ ನಿರ್ಧಾರವನ್ನು ಸ್ವಾಗತಿಸಿದ್ದು, ತಾವು ಕೂಡ ಇದೇ ಕಾರಣಕ್ಕಾಗಿ ಭಾರತಕ್ಕೆ ಮರಳಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆದಿವೆ. ಟ್ಯಾಲೆಂಟ್ ಅಕ್ವಿಸಿಷನ್ ಸ್ಪೆಷಲಿಸ್ಟ್ ಅನಂತ್ ನಾರಾಯಣನ್ ಎಂಬುವವರು ಟೆಕ್ಕಿಗಳ ಈ ನಿರ್ಧಾರವನ್ನು ಪ್ರಶ್ನಿಸಿದ್ದು, "ಪೋಷಕರಿಗೆ ನಿಜವಾಗಿಯೂ ಅಗತ್ಯವಿದ್ದಾಗ ಯಾರೂ ಅವರ ಹತ್ತಿರ ಸುಳಿಯುವುದಿಲ್ಲ. ಆದರೆ, ಅವರ ಜೀವನದ ಕೊನೆಯ ದಿನಗಳಲ್ಲಿ ಕ್ವಾಲಿಟಿ ಸಮಯ ಕಳೆಯುತ್ತೇವೆ ಎಂದು ಬರುತ್ತಾರೆ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.














Click it and Unblock the Notifications