ತರೀಕೆರೆ: ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ, ಭಾರೀ ಮೆಚ್ಚುಗೆ
ಚಿಕ್ಕಮಗಳೂರು, ಜೂನ್, 27: ರಸ್ತೆ ಬದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ ವೈದ್ಯರೊಬ್ಬರು ಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ಮೂಲತಃ ಅಜ್ಜಂಪುರ ತಾಲೂಕಿನ ಗಡಿರಂಗಾಪುರ ಗ್ರಾಮದ ಯಶೋಧ ಎಂಬ ಮಹಿಳೆಗೆ 9 ತಿಂಗಳು ತುಂಬಿತ್ತು. ಬಿ ನೆಗೆಟಿವ್ ರಕ್ತದ ಗುಂಪು ಹೊಂದಿರುವ ಗರ್ಭಿಣಿ ಮಹಿಳೆ ಯಶೋಧ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ಹೊರಟಿದ್ದರು. ಆಕೆ ಜೊತೆ ಬೇರೊಬ್ಬ ಮಹಿಳೆ ಕೂಡ ಇದ್ದರು. ಅಜ್ಜಂಪುರದಿಂದ ತರೀಕೆರೆಗೆ ಬಂದು ಶಿವಮೊಗ್ಗಕ್ಕೆ ತೆರುಳಲು ಬಸ್ ಕಾಯುವಾಗ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಸ್ಥಳದಲ್ಲಿದ್ದ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.

ನಂತರ ಆಸ್ಪತ್ರೆ ಮುಟ್ಟುವ ಮುನ್ನವೇ ತುಸು ದೂರದಲ್ಲಿ ಗರ್ಭಿಣಿ ಮಹಿಳೆ ತೀವ್ರವಾದ ನೋವಿನಿಂದ ಬಳಲುತ್ತಿದ್ದಳು. ಆಗ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ತಾಲೂಕು ವೈದ್ಯಾಧಿಕಾರಿ ಆರ್. ದೇವರಾಜ್ ಎಂಬುವವರು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಪ್ರಸೂತಿ ವೈದ್ಯರ ಮೂಲಕ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಗರ್ಭಿಣಿ ಮಹಿಳೆ ಯಶೋಧ ಬಿ ನೆಗೆಟಿವ್ ರಕ್ತಕ್ಕಾಗಿಯೇ ಶಿವಮೊಗ್ಗ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ವೈದ್ಯರು ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಧೈರ್ಯ ತುಂಬಿ ಹೆರಿಗೆ ಮಾಡಿಸಿದ್ದಾರೆ.
ಆರಂಭದ ಮೂರು ತಿಂಗಳು ಖಾಸಗಿ ಆಸ್ಪತ್ರೆಗೆ ತೋರಿಸಿದ್ದ ಗರ್ಭಿಣಿ ಯಶೋಧ ಅಲ್ಲಿ ಹೆರಿಗೆಗೆ 30,000 ರೂಪಾಯಿ ಹಣ ಕೇಳಿದರು ಅಂತಾ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಸರ್ಕಾರಿ ಆಸ್ಪತ್ರೆ ವೈದ್ಯರ ಮಾನವೀಯ ಕೆಲಸಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ನಲ್ಲೇ ಹೆರಿಗೆ
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಾರ್ಗ ಮಧ್ಯದಲ್ಲಿಯೇ ಮಹಿಳಾ ನಿರ್ವಾಹಕಿಯು ಅವರಿಗೆ ಹೆರಿಗೆ ಮಾಡಿಸಿದ ಘಟನೆ ಉದಯಪುರ ಸಮೀಪದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.
KA-18-F-0865 ನಂಬರ್ನ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ ಬಸ್ ಬರುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಇನ್ನು ಹೆಚ್ಚಾಗಿದೆ. ಇದನ್ನು ಗಮನಿಸಿದ ಮಹಿಳಾ ನಿರ್ವಾಹಕಿಯು ಬಸ್ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸುವಂತೆ ಡ್ರೈವರ್ಗೆ ಸೂಚಿಸಿದ್ದರು.
ಹತ್ತಿರ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಹಾಗೂ ಅವರಿಗೆ ಸಹಾಯದ ಅಗತ್ಯವಿರುತ್ತದೆ ಎಂದು ಮನಗಂಡು ತಕ್ಷಣ ಮಹಿಳಾ ನಿರ್ವಾಹಕಿ ವಸಂತಮ್ಮ ಎಂಬುವವರು ಬಸ್ ನಿಲ್ಲಿಸಿದ್ದಾರೆ. ನಂತರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 45 ಜನ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿದ್ದು, ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನಿಯ ಸುರಿಮಳೆಯೇ ಹರಿದುಬಂದಿತ್ತು.
ಹೆರಿಗೆ ನೋವಿಗೆ ಒಳಗಾಗಿದ್ದ ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ, ನಿಗಮದ ಚಾಲನಾ ಸಿಬ್ಬಂದಿಗಳು ಎಲ್ಲಾ ಪ್ರಯಾಣಿಕರಿಂದ ಸೇರಿ ಒಟ್ಟು 1,50,000 ರೂಪಾಯಿಗಳನ್ನು ಸಂಗ್ರಹಿಸಿ ತುರ್ತು ಖರ್ಚಿಗಾಗಿ ಮಹಿಳೆಗೆ ನೀಡಿದ್ದರು.
ಬಳಿಕ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿದ್ದರು. ಈಗ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗೆ ಸಕಾಲದಲ್ಲಿ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿಗೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಜಿ.ಸತ್ಯವತಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದರು.












Click it and Unblock the Notifications