ಚಿಕ್ಕಮಗಳೂರು; ಆಂಬ್ಯುಲೆನ್ಸ್ ಅವ್ಯವಸ್ಥೆಗೆ ಶಾಸಕರ ಅಸಮಾಧಾನ
ಚಿಕ್ಕಮಗಳೂರು, ಏಪ್ರಿಲ್ 19; ಕೊಪ್ಪ ತಾಲೂಕು ಆಸ್ಪತ್ರೆಗೆ ಬಂದಿದ್ದ ಅಡ್ವಾನ್ಸ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ನಲ್ಲಿ ರೋಗಿಗೆ ಪೂರಕವಾದ ಪರಿಕರಗಳು ಸಮರ್ಪಕವಾಗಿಲ್ಲ, ಕಳಪೆಯಾಗಿವೆ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಆಂಬ್ಯುಲೆನ್ಸ್ ಅನ್ನು ಸೋಮವಾರ ಪರಿಶೀಲಿಸಿದ ಅವರು, ಪರಿಕರಗಳು ಸಮರ್ಪಕವಾಗಿ ಜೋಡಿಸಿಲ್ಲದ ಕಾರಣ ಅವುಗಳು ರೋಗಿ ಮೇಲೆ ಬಿದ್ದು, ಜೀವಕ್ಕೆ ಕುತ್ತು ತರುವಂತಿದೆ ಎಂದು ಕಿಡಿಕಾರಿದರು.
ರೋಗಿಗೆ ತೊಂದರೆಯಾದಲ್ಲಿ ಪರಿಕರ ಜೋಡಣೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಕುರಿತು ಸರ್ಕಾರದ ಗಮನಕ್ಕೆ ತರುವ ಮೂಲಕ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಆಂಬ್ಯುಲೆನ್ಸ್ ನಲ್ಲಿ ವೆಂಟಿಲೇಟರ್, ಕಾರ್ಡಿಯಾಕ್ ಮಾನಿಟರ್, ಆಕ್ಸಿಜನ್ ಮಾನಿಟರ್, ಡಿ ಫಿಬ್ರಿಲೇಟರ್ ಅನ್ನು ಸಮರ್ಪಕವಾಗಿ ಜೋಡಿಸಿಲ್ಲ. ಜಿಲ್ಲೆಗೆ ಬಂದಿರುವ ಒಟ್ಟು 8 ಆಂಬುಲೆನ್ಸ್ ನಲ್ಲಿ ಕೂಡ ಇದೇ ದುಸ್ಥಿತಿ ಇದೆ ಎಂಬ ಮಾಹಿತಿಯೂ ಸಿಕ್ಕಿದೆ. ಆದ್ದರಿಂದ ಪರಿಕರಗಳನ್ನು ಸಮರ್ಪಕವಾಗಿ ಜೋಡಿಸಿ ಪುನಃ ಕಳುಹಿಸಿಕೊಡಬೇಕು ಎಂದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶೃಂಗೇರಿಗೆ ನನ್ನ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಆಂಬ್ಯುಲೆನ್ಸ್ ಬಂದಿದೆ. ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ. ಕೆ. ಪ್ರಾಣೇಶ್ ಅವರ ಅನುದಾನದಲ್ಲಿ ಕೊಪ್ಪಕ್ಕೆ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಬೋಜೇಗೌಡ ಅವರ ಅನುದಾನದಲ್ಲಿ ಎನ್. ಆರ್. ಪುರಕ್ಕೆ ಆಂಬ್ಯುಲೆನ್ಸ್ ಬಂದಿದೆ.












Click it and Unblock the Notifications