"ಮುನಿರತ್ನ ಕ್ರಿಮಿನಲ್ ಆಗಿದ್ದರೆ ಡಿಕೆಶಿ ಮುಂಬೈಗೆ ಏಕೆ ಹೋಗಿದ್ದರು?''
ಚಿಕ್ಕಮಗಳೂರು, ಅಕ್ಟೋಬರ್ 29: ಬಿಜೆಪಿ ಅಭ್ಯರ್ಥಿ ಮುನಿರತ್ನ ಕ್ರಿಮಿನಲ್ ಹಿನ್ನಲೆಯವರು ಎಂದು ಸಿದ್ದರಾಮಯ್ಯ ಹೇಳಿದ್ದರು. ಹಾಗಾದರೆ ಎರಡು ಬಾರಿ ಟಿಕೆಟ್ ಕೊಟ್ಟು ಶಾಸಕ ಮಾಡಿದ ಪಕ್ಷ ಯಾವುದು? ಅವರ ಪಕ್ಷದಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ಟರೆ ಕ್ರಿಮಿನಲ್ಲಾ ಎಂದು ಸಚಿವ ಸಿ.ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಸಿ.ಟಿ ರವಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರ ಚುನಾವಣೆ: ಉಚಿತ ಕೋವಿಡ್ ಲಸಿಕೆ ವಿಚಾರವನ್ನು ಸಮರ್ಥಿಸಿದ ಸಿ.ಟಿ ರವಿ
2018ರ ಚುನಾವಣೆಯಲ್ಲಿ ಮುನಿರತ್ನ ಇಂದ್ರ, ಚಂದ್ರ, ದೇವೇಂದ್ರ ಎಂದಿದ್ದರು. ಈಗ ಮುನಿರತ್ನ ಪಾರ್ಟಿ ಬಿಟ್ಟ ಕೂಡಲೇ ಬದಲಾಗುತ್ತಾರಾ? ಹಳೇ ವಿಡಿಯೋ ತೆಗೆದು ನೋಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಹೇಗೆ ಮುನಿರತ್ನ ಪರ ಪ್ರಚಾರ ಮಾಡಿದ್ದಾರೆಂದು ನೋಡಿ ಎಂದರು.
"ಡಿ.ಕೆ ಶಿವಕುಮಾರ್ ಬಾಂಬೆಗೆ ಹೋಗಿದ್ದರಲ್ಲಾ ಯಾಕೆ ಹೋಗಿದ್ದರು? ಶಾಸಕರನ್ನು ಮನವೊಲಿಸಿ ಕರೆ ತರುತ್ತೇನೆ ಅಂತ ತಾನೇ ಹೈಡ್ರಾಮ ಮಾಡಿ ಬಾಂಬೆಯಲ್ಲಿ ನಿಂತಿದ್ದು, ಇವರು ಸರಿ ಇಲ್ಲ ಎನ್ನುವುದಾದರೆ ಕರೆತರಲು ಯಾಕೆ ಹೋಗಿದ್ದರು? ಎಂದು ಪ್ರಶ್ನಿಸಿದರು.
ಎಲ್ಲಾ ಒಪ್ಪಿದ್ದಾರೆ ನಿಮ್ಮನ್ನೆ ಮಂತ್ರಿ ಮಾಡುತ್ತೇವೆ ಬನ್ನಿ ಎಂದು ಸಿದ್ದರಾಮಯ್ಯ ಯಾಕೆ ಹೇಳಿದ್ದರು? ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ವಿಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.