ಕೊರೊನಾ ನಡುವೆಯೂ ಮೋಜು; ಜಿಲ್ಲೆಗೆ ಬಂದ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಚಿಕ್ಕಮಗಳೂರು, ಜೂನ್ 30: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಕೊರೊನಾ ಆತಂಕದ ನಡುವೆಯೂ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಡುತ್ತಿದ್ದು, ನಿನ್ನೆಯಷ್ಟೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತಮ್ಮ ಪ್ರವಾಸ ಮೊಟಕುಗೊಳಿಸುವಂತೆ ಸೂಚನೆ ನೀಡಿದ್ದರು.
ಹೀಗಿದ್ದೂ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೊನಾ ಭೀತಿ ನಡುವೆಯೂ ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಜನರು ಪ್ರವಾಸದ ನೆಪದಲ್ಲಿ ಬರುತ್ತಿದ್ದಾರೆ. ಹೀಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಇಂದು ಸ್ಥಳೀಯರೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಮಾಸ್ಕ್ ಹಾಕದೇ ಮೋಜು ಮಸ್ತಿ ಮಾಡಲು ಬಂದಿದ್ದ ಪ್ರವಾಸಿಗರನ್ನು ಸ್ಥಳೀಯರೇ ತರಾಟೆ ತೆಗೆದುಕೊಂಡಿದ್ದಾರೆ.

ಜಿಲ್ಲೆಗೆ ಬರುತ್ತಿದ್ದ ವಾಹನಗಳನ್ನು ತಡೆಹಿಡಿದಿದ್ದಾರೆ. ಅವರಿಗೆ ಏಕೆ ಬರುತ್ತಿದ್ದೀರ ಎಂದು ವಿಚಾರಿಸಿದ್ದಾರೆ. ಮಾಸ್ಕ್ ಯಾಕೆ ಹಾಕಿಲ್ಲ, ಮಕ್ಕಳನ್ನು ಏಕೆ ಕರೆದುಕೊಂಡು ಬಂದಿದ್ದೀರಾ? ಸರ್ಕಾರದ ಆದೇಶ ಏಕೆ ಪಾಲಿಸುತ್ತಿಲ್ಲ, ಸರ್ಕಾರ ನಿಯಮಗಳನ್ನು ಮಾಡಿರುವುದು ಏಕೆ? ಎಂದು ಪ್ರಶ್ನೆಗಳನ್ನು ಹಾಕಿ, ಹಿಂದಿರುಗಿ ಹೋಗುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ದಯವಿಟ್ಟು ಜಿಲ್ಲೆಗೆ ಬರಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ.












Click it and Unblock the Notifications