ಮಳೆಯ ರೌದ್ರ ನರ್ತನ: ಭೂ ಕುಸಿತ ಆತಂಕದಲ್ಲಿ ಮಲೆನಾಡಿಗರು
ಚಿಕ್ಕಮಗಳೂರು ಜುಲೈ 9 : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಬಯಲು ಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಬಹುತೇಕ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸಪೇಟೆ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿಹೋದ ಬಾಲಕಿ ಶೋಧಕಾರ್ಯ 6ನೇ ದಿನವೂ ಮುಂದುವರೆದಿದೆ.
ಮೂಡಿಗೆರೆ, ಕಳಸ ಕೊಟ್ಟಿಗೆಹಾರ, ಕುದುರೆಮುಖ, ಶೃಂಗೇರಿ, ಕೊಪ್ಪ ನರಸಿಂಹರಾಜಪುರ ಸುತ್ತಮುತ್ತ ಐದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಗುರುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ 4 ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆ ಧರೆ ಮತ್ತು ರಸ್ತೆ ಕುಸಿತ ಉಂಟಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯಗೊಂಡಿದೆ.
ನಿರಂತರ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಉರುಳಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಬಯಲುಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಶೀತ, ಮೋಡ ಕವಿದ ವಾತವರಣ ಮುಂದುವರೆದಿದೆ. ನಿರಂತರ ಸುರಿಯುತ್ತಿರುವ ಮಳೆಗೆ ಜನರು ರೋಸಿ ಹೋಗಿದ್ದಾರೆ.
ಇನ್ನೂ ಮಲೆನಾಡ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುರಿಯುತ್ತಿರೋ ಭಾರೀ ಮಳೆಯಿಂದ ಜಿಲ್ಲೆಯ ಎಲ್ಲಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಾರ್ಮಾಡಿ ಫಾಲ್ಸ್, ಹೆಬ್ಬೆ ಜಲಪಾತ, ಕಲ್ಲತ್ತಿಗರಿ ಜಲಪಾತ ಸೇರಿದಂತೆ ಜಿಲ್ಲೆಯ ಎಲ್ಲಾ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ.

ತೋಟಗಳಿಗೆ ನುಗ್ಗಿರುವ ನೀರು, ಮನೆಗೋಡೆಗಳ ಕುಸಿತ
ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿಪಾತ್ರದ ಅಡಕೆತೋಟ ಮತ್ತು ಕಾಫಿ ತೋಟಗಳಿಗೆ ನೀರು ನುಗ್ಗಿದೆ. ಭಾರಿ ಮಳೆಯಿಂದ ಬೆಳೆಗಾರರು ಕೊಳೆ ರೋಗದ ಬೀತಿ ಎದುರಿಸುತ್ತಿದ್ದಾರೆ. ಕೊಪ್ಪ ತಾಲ್ಲೂಕು ಗುಡ್ಡೇತೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೈಟ್ ಐತಪ್ಪ ಎಂಬುವರ ಮನೆ ಮುಂಭಾಗ ಧರೆ ಕುಸಿದಿದೆ. ಮನೆಯೂ ಕುಸಿಯುವ ಹಂತದಲ್ಲಿದೆ. ಮೂಡಿಗೆರೆಯ ದುರ್ಗದಹಳ್ಳಿಯಲ್ಲಿ ಮನೆಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಇನ್ನೂ ಗುಡ್ಡೆತೋಟ ಗ್ರಾಮದಲ್ಲೂ ನಾರಾಯಣ್ ಎಂಬುವರ ಮನೆಯ ಬಳಿ ಭೂಕುಸಿತ ಉಂಟಾಗಿದ್ದು ಅವರು ಎಲ್ಲಿ ಮನೆ ಬಿದ್ದು ಹೋಗುತ್ತೋ ಎಂಬ ಆತಂಕದಿಂದ ಕೂಲಿಗೆ ಹೋಗದೆ ಮನೆ ಕಾಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಸಂಚಾರ, ವಿದ್ಯುತ್ ಸೇವೆಯಲ್ಲಿ ವ್ಯತ್ಯಯ
ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಕೂಡಿಗೆ, ಶುಂಠಿಕೂಡಿಗೆ ಗ್ರಾಮದ ರಸ್ತೆ ಅರ್ಧಕ್ಕೆ ಕಟ್ ಆಗಿ ಬಿದ್ದಿದು ನಗರಕ್ಕೆ ಬರಲು ಬೇರೆ ದಾರಿಯೇ ಇಲ್ಲದ ಕಾರಣ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಸುಮಾರು 100 ಅಡಿ ಕೊಚ್ಚಿ ಹೋಗಿರುವ ರಸ್ತೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ. ಮಣಬೂರಿನಲ್ಲಿ ಭಾರಿ ಮಳೆಗೆ ಕಿರು ಸೇತುವೆ ಕುಸಿತ ಕುಸಿದಿದ್ದು, ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರಿಕಟ್ಟೆ ಸಮೀಪ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕಾಫಿಗಿಡಗಳಿಗೆ ರೋಗ
ಮೂಡಿಗೆರೆ ತಾಲೂಕಿನಲ್ಲೂ ಮಳೆ ಅಬ್ಬರ ಜೋರಾಗಿದ್ದು ಕಾಫಿತೋಟಗಳಿಗೆ ಸಿಂಪಡಿಸಿದ ಔಷಧಿಯನ್ನ ಗಿಡಗಳು ಹೀರೀಕೊಳ್ಳೋದಕ್ಕೂ ವರುಣದೇವ ಬಿಡುವು ನೀಡುತ್ತಿಲ್ಲ. ಔಷಧಿ ಸಿಂಪಡಿಸುತ್ತಿದ್ದಂತೆ ಸುರಿಯೋ ಮಳೆರಾಯ ಕಾಫಿಗಿಡದ ರೋಗಕ್ಕೂ ಕಾರಣಕರ್ತನಾಗಿದ್ದಾನೆ. ಕಾಫಿತೋಟಕ್ಕೆ ಸಿಂಪಡಿಸಿದ ಔಷಧಿ ಮಧ್ಯೆಯೂ ಗಿಡಗಳಿಗೆ ರೋಗ ತಗುಲಿರುವುದರಿಂದ ತೋಟದ ಮಾಲೀಕ ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ತೋಟದ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

ಸುಪ್ರಿತಾಗಾಗಿ ಮುಂದುವರಿದ ಶೋಧಕಾರ್ಯ
ಇನ್ನು ಚಿಕ್ಕಮಗಳೂರು ತಾಲೂಕಿನ ಹೊಸಪೇಟೆಯಲ್ಲಿ ಕಾಲು ತೊಳೆಯಲು ಹೋಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಸುಪ್ರಿತಾ ಇನ್ನೂ ಪತ್ತೆಯಾಗಿಲ್ಲ, ಎಸ್ಡಿಆರ್ಫ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು 5 ದಿನಗಳಿಂದ ಶೋಧಕಾರ್ಯ ತೊಡಗಿದ್ದಾರೆ. ಮಲ್ಪೆಯಿಂದ ಮುಳುಗು ತಜ್ಞರನ್ನು ಕರೆಸಲಾಗಿದ್ದು ಶೋಧಕಾರ್ಯ ಕೈ ಜೋಡಿಸಿದ್ದಾರೆ. ಸುಮಾರು 70 ಸಿಬ್ಬಂದಿಗಳು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಕುಟುಂಬಸ್ಥರು ಮಗಳ ಬದುಕಿ ಬರಲಿದ್ದಾಳೆ ಎನ್ನುವ ಆಶಾಭಾವನೆಯಲ್ಲಿ ಕಾಯುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಹಗಲಲ್ಲಿ ಬಿಡುವ ವರುಣದೇವ ರಾತ್ರಿ ವೇಳೆ ಮನಸ್ಸೋ-ಇಚ್ಛೆ ಸುರಿಯುತ್ತಿದ್ದು ಜನರು ಭವಿಷ್ಯ ಬಗ್ಗೆ ಯೋಚಿಸುವಂತಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಲೆನಾಡಲ್ಲಿ ವರುಣದೇವ ಮಾಡಿದ ಅನಾಹುತಗಳಿಂದ ಜನ ಇನ್ನೂ ಹೊರಬಂದಿಲ್ಲ. ಅದಕ್ಕೆ ಸೂಕ್ತವಾದ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಹೀಗೆ ಸೈತಾನನಂತೆ ಮಳೆ ಸುರಿಯುತ್ತಿರುವುದರಿಂದ ಮಲೆನಾಡಿಗರು ಈ ವರ್ಷವೂ ಮತ್ತಿನ್ನೇನು ಅನಾಹುತ ಸೃಷ್ಠಿಸ್ತಾನೋ ಎಂಬ ಭೀತಿಯಲ್ಲಿದ್ದಾರೆ.












Click it and Unblock the Notifications