ಓಂಕಾರೇಶ್ವರನ ಮೇಲೆ ಆಣೆ ಮಾಡಿ ಶಾಸಕರ ಮೇಲಿನ ಹಲ್ಲೆಗೂ ನನಗೂ ಸಂಬಂಧವಿಲ್ಲ ಎಂದ ದೀಪಕ್ ದೊಡ್ಡಯ್ಯ
ಚಿಕ್ಕಮಗಳೂರು, ನವೆಂಬರ್24 : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೂಡಿಗೆರೆ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಸ್ಪಷ್ಟಪಡಿಸಿದ್ದಾರೆ.
ದೀಪಕ್ ದೊಡ್ಡಯ್ಯ, ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಅಲ್ಲದೇ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ನಡೆದ ಶಾಸಕ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಸತ್ಯಾಸತ್ಯತೆಯನ್ನು ನೀನೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ,ನೀತಿ,ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು ಓಂಕಾರೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕೀಳುಮಟ್ಟದ ರಾಜಕಾರಣವನ್ನು ನಾನು ಮಾಡಲ್ಲ ಎಂದ ದೀಪಕ್ ದೊಡ್ಡಯ್ಯ
ಆನೆ ದಾಳಿಯಿಂದ ಸಾವನ್ನಪ್ಪಿದ ಮಹಿಳೆಯನ್ನು ನೋಡಲು ಹೋದ ಸಂದರ್ಭದಲ್ಲಿ ಸ್ಥಳೀಯರು ಶಾಸಕರ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಗೆ ದೀಪಕ್ ದೊಡ್ಡಯ್ಯನೇ ಕಾರಣ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಆರೋಪಿಸಿದ್ದರು. ಹೀಗಾಗಿ ಬುಧವಾರ ದೀಪಕ್ ದೊಡ್ಡಯ್ಯ ಓಂಕಾರೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿದ್ದಾರೆ.
ಅಮಾವಾಸ್ಯೆಯ ದಿನ ಈಶ್ವರನ ಎದುರು ಪ್ರಮಾಣ ಮಾಡಿದ ಬಳಿಕ ಮಾತನಾಡಿದ ಅವರು, "ಶಾಸಕರ ಮೇಲಿನ ಹಲ್ಲೆಯ ಕುರಿತು ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಒಳ್ಳೆಯ ಸಂಸ್ಕೃತಿಯಿಂದ ಬಂದವನು. ಅಷ್ಟು ಕೀಳುಮಟ್ಟದ ರಾಜಕಾರಣವನ್ನು ನಾನು ಮಾಡಲ್ಲ ಎಂದಿದ್ದಾರೆ. ನನ್ನ ಮೇಲೆ ಆರೋಪ ಮಾಡಿದವರು ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಬೇಕು. ನನ್ನ ಕೈವಾಡವಿಲ್ಲ ಎಂದು ನಾನೂ ಕೂಡಾ ಪ್ರಮಾಣ ಮಾಡುತ್ತೇನೆ," ಎಂದು ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೀಪಕ್ ದೊಡ್ಡಯ್ಯ, "ಭಾನುವಾರ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಶಾಸಕರ ಮೇಲೆ ನಡೆದಿರುವ ಹಲ್ಲೆಗೂ ನನಗೂ ಸಂಬಂಧವಿಲ್ಲ. ಶಾಸಕ ಕುಮಾರಸ್ವಾಮಿಯವರು ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರ ಮೇಲೆ ಗಲಾಟೆ ಮಾಡಿಸುವಂತಹ, ಅದಕ್ಕೆ ಕುಮ್ಮಕ್ಕು ಕೊಡುವ ವ್ಯಕ್ತಿ ನಾನಲ್ಲ. ಅದರಲ್ಲಿ ಯಾವುದೇ ರೀತಿಯಲ್ಲೂ ನನ್ನ ಕೈವಾಡವಿಲ್ಲ. ನಾನೊಬ್ಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ. ಹತ್ತಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಲಕ್ಷಾಂತರ ಜನರಿಗೆ ಪಾಠ ಮಾಡಿದ್ದೇನೆ. ನನ್ನ ಬಳಿ ಪಾಠ ಕಲಿತ ಸಾವಿರಾರು ಜನ ದೇಶದ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ," ಎಂದು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನಾನೂ ಕೂಡಾ ಪ್ರಮಾಣ ಮಾಡುತ್ತೇನೆ
ಮಾತು ಮುಂದುವರಿಸಿದ ಅವರು, "ನನಗೆ ನನ್ನದೇ ಆದ ವ್ಯಕ್ತಿತ್ವ, ಸಂಸ್ಕಾರ ಇದೆ. ಹೀಗಾಗಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ಹತ್ತಿರವಿಲ್ಲ. ಅದು ಸಂಪೂರ್ಣ ಸುಳ್ಳು. ನನ್ನ ಮೇಲೆ ಆರೋಪ ಮಾಡಿದವರು ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಬೇಕು. ನನ್ನ ಕೈವಾಡವಿಲ್ಲ ಎಂದು, ನಾನೂ ಕೂಡಾ ಪ್ರಮಾಣ ಮಾಡುತ್ತೇನೆ. ಇಂದು ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಮಾಡಿಸಿದ್ದೇನೆ. ಆ ಘಟನೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಆ ಸಮಯದಲ್ಲಿ ಹೇಳಿದ್ದೇನೆ. ನನ್ನ ಬಗ್ಗೆ ಯಾರು ಆ ರೀತಿ ಆರೋಪ ಮಾಡಿದ್ದಾರೆ, ಅವರಿಗೆ ಅದರ ಸತ್ಯಾಸತ್ಯತೆ ತಿಳಿಯಲಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ತೆರಳಿದ ಶಾಸಕರ ಮೇಲೆ ಹಲ್ಲೆ
ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಭಾನುವಾರ(ನವೆಂಬರ್ 20)ರಂದು ರೈತ ಮಹಿಳೆ ಶೋಭಾ (45 ವರ್ಷ) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಹುಲ್ಲೇಮನೆ ಕುಂದೂರು ಮತ್ತು ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಎಂ.ಪಿ ಕುಮಾರಸ್ವಾಮಿ ಮೇಲೆ ಕೆಲ ಸ್ಥಳೀಯರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಯಿಸಿದ್ದ ಎಂ.ಪಿ ಕುಮಾರಸ್ವಾಮಿ ಸಂಚು ಮಾಡಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.












Click it and Unblock the Notifications