ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು
ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನು ನೆನಪು ಮಾಡಿಕೊಂಡಾಗ ವಿಧುರಾಶ್ವತ್ಥದಲ್ಲಿ ನಡೆದ ಹೋರಾಟವನ್ನು ಮರೆಯುವಂತಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದ 30ಕ್ಕೂ ಹೆಚ್ಚು ಜನರು ಇಲ್ಲಿ ಬಲಿದಾನವನ್ನು ಮಾಡಿದ್ದಾರೆ.
ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಧುರಾಶ್ವತ್ಥದ ಹೋರಾಟವನ್ನು 'ಕರ್ನಾಟಕದ ಜಲಿಯಾನ್ ವಾಲಾ ಬಾಗ್' ಎಂದೇ ಕರೆಯಲಾಗುತ್ತದೆ. ಅಂದು ಬಲಿದಾನ ಮಾಡಿದ ಜನರ ನೆನಪಿನಲ್ಲಿ ವೀರಸೌಧ, ವೀರಗಲ್ಲು, ಸ್ಥೂಪವನ್ನು ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪುಟ್ಟ ಗ್ರಾಮ ವಿಧುರಾಶ್ವತ್ಥ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿದ್ದ ಸಂದರ್ಭದಲ್ಲಿ ವಿಧುರಾಶ್ವತ್ಥದಲ್ಲಿ ಕಾಂಗ್ರೆಸ್ ಸಮಿತಿಯು ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು.

1938ರ ಏಪ್ರಿಲ್ 25ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಹೇರಿತು. ಇದನ್ನು ಉಲ್ಲಂಘನೆ ಮಾಡಿದ ಧ್ವಜಾರೋಹಣ ಮಾಡಿ, ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಬ್ರಿಟಿಷರು ಗುಂಡಿನ ದಾಳಿ ನಡೆಸಿದರು.
96 ಸುತ್ತುಗಳ ಗುಂಡಿನ ದಾಳಿಯಲ್ಲಿ 32ಕ್ಕೂ ಹೆಚ್ಚು ಜನರು ಮೃತಪಟ್ಟರು, ಹಲವರು ಗಾಯಗೊಂಡರು. ಬಲಿದಾನ ಮಾಡಿದವರಲ್ಲಿ 10 ದೇಹಗಳು ಮಾತ್ರ ಪತ್ತೆಯಾದವು. ಈ ಹೋರಾಟವನ್ನು ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ.

ವಿಧುರಾಶ್ವತ್ಥದ ಹೋರಾಟ ಮಹಾತ್ಮಾ ಗಾಂಧಿ ಅವರ ಕಿವಿಗೂ ಮುಟ್ಟಿತ್ತು. ಅವರ ಆದೇಶದಂತೆ ಸರ್ದಾರ್ ಪಟೇಲ್ ಮತ್ತು ಆಚಾರ್ಯ ಕೃಪಲಾನಿ ಅವರು ವಿಧುರಾಶ್ವತ್ಥಕ್ಕೆ ಭೇಟಿ ನೀಡಿದ್ದರು. ಈ ಹೋರಾಟದಲ್ಲಿ ಮೃತಪಟ್ಟವರ ಸ್ಮರಣಾರ್ಥ 1973ರಲ್ಲಿ ಸ್ಮಾರಕ ಶಿಲೆ, 2004ರಲ್ಲಿ ಸ್ಥೂಪ ಮತ್ತು ವೀರಸೌಧವನ್ನು ನಿರ್ಮಿಸಲಾಗಿದೆ.
ಸ್ವಾತಂತ್ರ್ಯ ಸಂಗ್ರಾಮದ ಹೊರತಾಗಿ ವಿಧುರಾಶ್ವಾತಕ್ಕೆ ಪುರಾಣದ ಕಥೆಯೂ ಇದೆ. ಮಹಾಭಾರತದಲ್ಲಿ ವಿಧುರ ಇಲ್ಲಿ ನೆಟ್ಟಿರುವ ಅಶ್ವತ್ಥ ವೃಕ್ಷದಿಂದ ಈ ಗ್ರಾಮಕ್ಕೆ ವಿಧುರಾಶ್ವತ್ಥ ಎಂಬ ಹೆಸರು ಬಂದು ಎಂಬ ನಂಬಿಕೆಯೂ ಇದೆ. ಈಗ ಇಲ್ಲಿನ ಅಶ್ವತ್ಥ ವೃಕ್ಷದ ಸುತ್ತಲೂ ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.












Click it and Unblock the Notifications