ಮೇಕೆದಾಟು ಯೋಜನೆ ನೆರವೇರಲು ಬಿಡುವುದಿಲ್ಲ: ತಮಿಳುನಾಡು ಹಠ
ಚೆನ್ನೈ, ಏ. 7: ಮಹಾನಗರಿ ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಮುಖ್ಯ ಉದ್ದೇಶ ಹೊಂದಿರುವ ಮೇಕೆದಾಟು ಯೋಜನೆ ಜಾರಿಗೆ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಮುಂದಡಿ ಇಡುತ್ತಿವೆ. ಆದರೆ, ಮೇಕೆದಾಟು ಯೋಜನೆ ಜಾರಿಗೆ ತಡೆಯಾಗಿ ನಿಲ್ಲುವ ಹಠವನ್ನು ತಮಿಳುನಾಡು ಮುಂದುವರಿಸಿದೆ. ಕರ್ನಾಟಕ ಮೇಕೆದಾಟು ಯೋಜನೆ ಜಾರಿ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಪುನರುಚ್ಚರಿಸಿದೆ. ಮೇಕೆದಾಟು ಯೋಜನೆ ಮೂಲಕ ಕರ್ನಾಟಕವು ಕಾವೇರಿ ನೀರು ವಿವಾದಗಳ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಮತ್ತು ಸುಪ್ರೀಂ ಕೋರ್ಟ್ನ ಆದೇಶಗಳನ್ನು ಉಲ್ಲಂಘಿಸುತ್ತಿದೆ ಎಂದು ತಮಿಳುನಾಡು ಮತ್ತೊಮ್ಮೆ ಆರೋಪ ಮಾಡಿದೆ.
ವಿಧಾನಸಭೆ ಚರ್ಚೆಯ ವೇಳೆ ಮಾತನಾಡುತ್ತಿದ್ದ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು ಅಂತರರಾಜ್ಯ ಜಲವಿವಾದಗಳ ವಿಚಾರದಲ್ಲಿ ರಾಜ್ಯದ ಹಕ್ಕಿಗಾಗಿ ಹೋರಾಡಲು ಡಿಎಂಕೆ ಸರಕಾರ ಕಟಿಬದ್ಧವಾಗಿದೆ ಎಂದು ಹೇಳಿದರು. ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ಕ್ರಮಗಳಿಗೆ ವಿರೋಧವಾಗಿ ತಮಿಳುನಾಡು ತೆಗೆದುಕೊಂಡಿರುವ ಕ್ರಮಗಳ ಪಟ್ಟಿಯನ್ನು ಇದೇ ವೇಳೆ ಸಚಿವರು ವಿಧಾನಸಭೆ ಗಮನಕ್ಕೆ ತಂದರು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು 2021 ಜೂನ್ ಮತ್ತು 2022 ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಮೇಕೆದಾಟು ಯೋಜನೆಗೆ ಯಾವುದೇ ಸಮ್ಮತಿ ನೀಡಬಾರದೆಂದು ಪ್ರಧಾನಿಗೆ ಮನವಿ ಮಾಡಿದ್ದಾರೆ ಎಂದು ಸಚಿವ ದುರೈ ಮುರುಗನ್ ಮಾಹಿತಿ ನೀಡಿದರು.

"ಕರ್ನಾಟಕದಲ್ಲಿ ಮೇಕೆದಾಟು ಆಗಲಿ ಅಥವಾ ಕಾವೇರಿ ಜಲಾನಯನದ ಯಾವುದೇ ಜಾಗದಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ನ್ಯಾಯಮಂಡಳಿ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಉಲ್ಲಂಘನೆ ಆಗುತ್ತದೆ. ಇದನ್ನ ಮಾಡದಂತೆ ಕರ್ನಾಟಕವನ್ನು ತಡೆಯಲು ತಮಿಳುನಾಡು ಸರಕಾರ ಕಾನೂನು ಕ್ರಮ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುತ್ತದೆ" ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವರು ತಿಳಿಸಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಯಾಕೆ ವಿರೋಧ?
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಯಾವುದೇ ಅನುಮತಿ ಬೇಕಿಲ್ಲ ಎಂಬುದು ಕರ್ನಾಟಕ ನಿಲುವು. ಆದರೆ, ತಮಿಳುನಾಡು ಆಕ್ಷೇಪ ಎಂದರೆ ಸದ್ಯ ನದಿ ಜಲಾನಯನ ಪ್ರದೇಶದಲ್ಲಿ ಹೊಸ ಅಣೆಕಟ್ಟು ನಿರ್ಮಾಣ ಮಾಡಿದರೆ ಕರ್ನಾಟಕದಿಂದ ತಮಿಳುನಾಡಿಗೆ ಹರಿದುಬರುವ ಕಾವೇರಿ ನೀರಿಗೆ ತಡೆಬಿದ್ದಂತಾಗಬಹುದು ಎಂಬುದು.

ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗದ ಬಳಿ ಕಾವೇರಿ ಹಾಗು ಪೆಣ್ಣೈಯಾರ್ ನದಿಗಳಿಂದ ನೀರಿನ ಮಾದರಿಗಳನ್ನು ತಮ್ಮ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿ, ನೀರಿನ ಗುಣಮಟ್ಟದ ಬಗ್ಗೆ ನಿಗಾ ಇಡುತ್ತಿದೆ. ಹಾಗೆಯೇ ಬಿಳಿಗುಂಡ್ಲು ಬಳಿ ಕಾವೇರಿ ನೀರಿನ ಗುಣಮಟ್ಟವನ್ನು ಕೇಂದ್ರ ಜಲ ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು ವಿಧಾನಸಭೆಗೆ ಮಾಹಿತಿ ನೀಡಿದರು.
ತಮಿಳುನಾಡು ಸರಕಾರ ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೃಷ್ಣಗಿರಿ ಜಿಲ್ಲೆಯ ಬಿಳಿಗುಂಡ್ಲು ಬಳಿ ಪೆಣ್ಣೈಯಾರ್ ನದಿಗೆ ಅಣೆಕಟ್ಟು ಕಟ್ಟುತ್ತಿದೆ.

"ಕಾವೇರಿ ಮತ್ತು ಪೆಣ್ಣೈಯಾರ್ ನದಿಗಳು ಮಲಿನವಾಗದಂತೆ ನಿಯಂತ್ರಿಸಲು ತಮಿಳುನಾಡು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಕಾವೇರಿ ಜಲಾನಯನದ 4 ಸಾವಿರ ಕಿಮೀ ಭಾಗದಲ್ಲಿ ವಿವಿಧೆಡೆ ಹೂಳೆತ್ತುವ ಕಾರ್ಯ ಸಾಗುತ್ತಿದೆ" ಎಂದು ದುರೈ ಮುರುಗನ್ ಹೇಳಿದರು.
ಇದೇ ವೇಳೆ ತಮಿಳುನಾಡು ಜಲಸಂಪನ್ಮೂಲ ಸಚಿವರು ಕೇರಳ ಗಡಿಭಾಗ ಬಳಿ ಇರುವ ಮುಲ್ಲಪೆರಿಯಾರ್ ಅಣೆಕಟ್ಟು ವಿಚಾರದ ಬಗ್ಗೆಯೂ ಮಾತನಾಡಿ ತಮಿಳುನಾಡು ಹಕ್ಕನ್ನು ಕಾಪಾಡಿಕೊಳ್ಳುವುದು ಸರಕಾರಕ್ಕೆ ಆದ್ಯತೆ ಆಗಿದೆ ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications