ನಟ ಶರತ್ ಕುಮಾರ್ ಅವರ ಎಐಎಸ್ಎಂಕೆ ಪಕ್ಷದೊಂದಿಗೆ ಕಮಲ್ ಹಾಸನ್ ಮೈತ್ರಿ
ಚೆನ್ನೈ, ಮಾರ್ಚ್ 04: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಭಾವ್ಯ ಮೈತ್ರಿಗಾಗಿ 'ಸಮಾನ ಮನಸ್ಕ' ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಏಪ್ರಿಲ್ 6 ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ರಾಜ್ಯದ ಹಿತವನ್ನು ಬಯಸುವ ಒಳ್ಳೆಯ ಜನರ ಪಕ್ಷಗಳೊಂದಿಗೆ ಮೈತ್ರಿಗಾಗಿ ಎಂಎನ್ಎಂ ಸಿದ್ಧವಿದೆ. ಇದಕ್ಕಾಗಿ ಸಾಕಷ್ಟು ಪಕ್ಷಗಳ ಜತೆ ಮಾತುಕತೆಯೂ ನಡೆದಿದೆ, ಈಗಾಗಲೇ ಶರತ್ ಕುಮಾರ್ ಅವರ ಎಐಎಸ್ಎಂಕೆ ಪಕ್ಷದೊಂದಿಗೆ ಯಶಸ್ವಿ ಮಾತುಕತೆ ಅಂತ್ಯಗೊಂಡಿದೆ.
ಈಗ ಆ ಪಕ್ಷದೊಂದಿಗೆ ಟಿಕೆಟ್ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಶರತ್ ಕುಮಾರ್ ಕೂಡಾ ಖಾತರಿಪಡಿಸಿದ್ದಾರೆ.

ಹಾಗೆಯೇ ನಮ್ಮ ಮೈತ್ರಿಕೂಟಕ್ಕೆ ಕಮಲ್ ಹಾಸನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಕೂಡಾ ತಿಳಿಸಿದ್ದಾರೆ. ಇನ್ನೊಂದೆಡೆ ಎಂಎನ್ಎಂಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವೈಜ್ಞಾನಿಕ ಸಲಹೆಗಾರ ವಿ ಪೊನ್ರಾಜ್ ಸೇರ್ಪಡೆಯಾಗಿದ್ದಾರೆ. ಅವರು ಪಕ್ಷದ ಉಪಾಧ್ಯಕ್ಷರಾಗಿರಲಿದ್ದಾರೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಹಾಸನ್, ತಮಿಳರು ಮಾರಾಟಕ್ಕಿಲ್ಲ, ತಮಿಳುನಾಡು ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಹಾಗೂ ಎಐಡಿಎಂಕೆಯ ವೈಫಲ್ಯವೇ ಚುನಾವಣೆಯ ಪ್ರಮುಖ ವಿಷಯವಾಗಿರಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications