ತಮಿಳುನಾಡಿನಲ್ಲಿ ಲಘು ಭೂಕಂಪ: 3.6 ತೀವ್ರತೆ ದಾಖಲು
ಚೆನ್ನೈ, ನವೆಂಬರ್ 29: ತಮಿಳುನಾಡಿನ ವೆಲ್ಲೂರಿನಲ್ಲಿ ಬೆಳಗಿನ ಜಾವ ಲಘು ಭೂಕಂಪ ಸಂಭವಿಸಿದ್ದು, 3.6 ತೀವ್ರತೆ ದಾಖಲಾಗಿದೆ.
ಇಂದು ಮುಂಜಾನೆ 4.17 ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6 ರಷ್ಟು ತೀವ್ರತೆ ದಾಖಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಇಂದು ಮುಂಜಾನೆ 3.6 ತೀವ್ರತೆಯ ಭೂಕಂಪನವಾಗಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಬೆನ್ನಲ್ಲೇ ಇದೀಗ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಸರಿ ಸುಮಾರು 59 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದೆ. ಕಂಪನದಿಂದಾಗಿ ಈ ವರೆಗೆ ಯಾವುದೇ ಸಾವು - ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಪ್ರಕಾರ, ಈ ಭೂಕಂಪದ ಕೇಂದ್ರಬಿಂದು ವೆಲ್ಲೂರು ಜಿಲ್ಲೆಯಲ್ಲಿದ್ದು, ಸುಮಾರು 25 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಏತನ್ಮಧ್ಯೆ ವೆಲ್ಲೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ಕಟ್ಟುನಿಟ್ಟಿನ ಮುಂಜಾಗ್ರತೆವಹಿಸಲಾಗಿದೆ. ಪಾಲಾರ್ ನದಿಯನ್ನು ದಾಟದಂತೆ ನಿಷೇಧ ವಿಧಿಸಲಾಗಿದ್ದು, ರಾಣಿಪೇಟೆ ಹಾಗೂ ತಿರಪತ್ತೂರು ಜಿಲ್ಲೆಗಳಲ್ಲಿ ಚೆಕ್ ಡ್ಯಾಂಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಸೇತುವೆಗಳನ್ನು ದಾಟದಂತೆ ಸೂಚಿಸಲಾಗಿದೆ.
ಇಂಡೋನೇಷ್ಯಾದಲ್ಲಿ ಭೂಕಂಪ: ಇಂಡೋನೇಷ್ಯಾದ ಪಪುವಾದ ನಬಿರೆ ಬಳಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ದಾಖಲಾಗಿದೆ. ಇಂಡೋನೇಷ್ಯಾದ ಹವಾಮಾನ ಶಾಸ್ತ್ರ ಮತ್ತು ಭೂ ಭೌತಶಾಸ್ತ್ರದ ಏಜೆನ್ಸಿ ಪ್ರಕಾರ, ಭೂಕಂಪನವು ಸೋಮವಾರ ಬೆಳಗ್ಗೆ 8:34 ಕ್ಕೆ ಸಂಭವಿಸಿದ್ದು, 10 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಭೂಮಿ ಕಂಪಿಸಿತ್ತು. ನಗರದಲ್ಲಿ ಭೂಕಂಪ ಆಗಿಲ್ಲ. ಭೂಕಂಪದ ಯಾವುದೇ ಲಕ್ಷಣಗಳು ದಾಖಲಾಗಿಲ್ಲ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಯಿಂದ ಸ್ಪಷ್ಟನೆ ನೀಡಿದೆ. ಆದರೆ ಶಬ್ದ ಹೇಗೆ ಬಂತು ಎಂಬ ಬಗ್ಗೆ ಅಧಿಕಾರಿಗಳಿಗಳು, ತಜ್ಞರಿಗೂ ಸದ್ಯಕ್ಕೆ ಮಾಹಿತಿ ಇಲ್ಲ ಎನ್ನಲಾಗಿದ್ದು, ಈ ಕುರಿತು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ. ಈ ಹಿಂದೆ ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿತ್ತು.
ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಏರಿಯಾದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿತ್ತು. ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಮೊದಲ ಸಲ ಲಘುವಾಗಿ, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಆದರೆ ಇದೀಗ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದ್ದು, ಭೂಮಿ ಕಂಪಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
''ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ ಮೊದಲಾದೆಡೆ 11.50 ರಿಂದ 12.15 ವರೆಗೆ ಭೂಮಿ ಕಂಪಿಸಿದ ವರದಿಗಳನ್ನು ಆಧರಿಸಿ, ಮಾಪಕದಲ್ಲಿ ಮಾಹಿತಿ ಇದೆಯೇ ಎಂದು ಪರಿಶೀಲಿಸಲಾಯಿತು. ಆದರೆ ಯಾವುದೇ ಕಂಪನದ ಅಲೆಗಳು ದಾಖಲಾಗಿಲ್ಲ'' ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ಕೆಎಸ್ಎನ್ಎಮ್ಡಿಸಿ ನೀಡಿರುವ ಸ್ಪಷ್ಟನೆ: ಭೂಕಂಪದ ಕುರಿತು ಸಚಿವ ಬಿಸಿ ಪಾಟೀಲ್ ಹೇಳಿಕೆ: ಇಲಾಖೆಯಿಂದ ಭೂಕಂಪದ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಕಳೆದ ಬಾರ ಕಲಬುರ್ಗಿ ಭಾಗದಲ್ಲಿ ಆದಾಗ ಕಂದಾಯ ಸಚಿವರು ಬಂದು ವಿಚಾರಣೆ ಮಾಡಿದ್ದಾರೆ.
ಇಲಾಖೆಯಿಂದ ಅಗತ್ಯವಿದ್ದರೆ ಪರಿಶೀಲನೆ ಮಾಡಿಸುತ್ತೇವೆ. ಇವತ್ತಿನ ಸದ್ದಿನ ಬಗ್ಗೆ ಮಾಹಿತಿ ಬಂದಿಲ್ಲ. ನಮ್ಮ ಇಲಾಖೆಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications