ಅದೆಂಥಾ ಬರಗಾಲವೇ ಬರಲಿ ಈ ಕೊಳದ ನೀರು ಮಾತ್ರ ಬತ್ತುವುದೇ ಇಲ್ಲ!ವರ್ಷವಿಡೀ ಇಲ್ಲಿ ಹರಿಯುತ್ತದೆ ಶುದ್ಧ ನೀರು
ಇದು ಬೆಟ್ಟಗಳ ನಡುವೆ ಇರುವ ಸಣ್ಣ ಕೊಳ. ನೋಡುವುದಕ್ಕೆ ಸಣ್ಣ ಕೊಳವಾದರೂ ವರ್ಷವಿಡೀ ಇಡೀ ಊರಿಗೆ ನೀರುಣಿಸುತ್ತದೆ ಇದು. ಅದೆಂಥ ಬರಗಾಲ ಬಂದೊದಗಿದರೂ, ಇಡೀ ಊರಿನ ಕೆರೆ, ಕೊಳ, ಕುಂಟೆಗಳು ಬತ್ತಿ ಹೋದರೂ ಈ ಕೊಳದ ನೀರು ಮಾತ್ರ ಬತ್ತುವುದೇ ಇಲ್ಲ. ವರ್ಷ ಪೂರ್ತಿ ಇಲ್ಲಿ ಶುದ್ದವಾದ ನೀರು ಸಿಗುತ್ತದೆ.
ನಾವಿಲ್ಲಿ ಹೇಳುತ್ತಿರುವುದು ರಾಜಸ್ಥಾನದ ಕರೌಲಿ ಜಿಲ್ಲೆಯ ಬೆಟ್ಟಗಳ ನಡುವೆ ನೆಲೆಗೊಂಡಿರುವ ಪಾರ್ವತಿ ಕುಂಡದ ಬಗ್ಗೆ. ಇದು ಇಲ್ಲಿನ ಜನರಿಗೆ ಕೇವಲ ನೀರಿನ ಮೂಲವಲ್ಲ, ಅಚಲ ನಂಬಿಕೆಯ ಸಂಕೇತವಾಗಿದೆ.ಬಿರು ಬೇಸಿಗೆ ಮತ್ತು ಬರಗಾಲದ ಪರಿಸ್ಥಿತಿಗಳಲ್ಲಿಯೂ ಈ ಕೊಳ ಎಂದಿಗೂ ಒಣಗುವುದಿಲ್ಲ. ಮಾತ್ರವಲ್ಲ ವರ್ಷವಿಡೀ ಹಾಲಿನಂತಹ ಶುದ್ಧ ನೀರಿನಿಂದ ತುಂಬಿರುತ್ತದೆ.ಈ ವಿಶೇಷ ಲಕ್ಷಣದಿಂದಾಗಿ, ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರತಿದಿನ ಇಲ್ಲಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತಾರೆ. ಸಾವಿರಾರು ಜನ ಇಲ್ಲಿಗೆ ಪವಿತ್ರ ಸ್ನಾನ ಮಾಡಲು ಬರುತ್ತಾರೆ.

ಬತ್ತುವುದೇ ಇಲ್ಲ ಪಾರ್ವತಿ ಕುಂಡದ ನೀರು:
ಸ್ಥಳೀಯರ ಪ್ರಕಾರ, ಪಾರ್ವತಿ ಕುಂಡದಲ್ಲಿ ನೀರಿನ ಮಟ್ಟ ಯಾವಾಗಲೂ ಒಂದೇ ಮಟ್ಟದಲ್ಲಿರುತ್ತದೆ. ಪ್ರತಿದಿನ ಸಾವಿರಾರು ಜನರು ಇಲ್ಲಿಯ ನೀರನ್ನು ಬಳಸುತ್ತಾರೆ.ಆದರೂ ಇಲ್ಲಿನ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಈ ಕೊಳದಿಂದ ಎಷ್ಟೇ ನೀರು ತೆಗೆದುಕೊಂಡರೂ ಅದು ಸ್ವಾಭಾವಿಕವಾಗಿ ಮತ್ತೆ ತುಂಬುತ್ತದೆ. ಇದೆಲ್ಲವೂ ದೈವೀ ಕೃಪೆ ಎನ್ನುವುದು ಗ್ರಾಮಸ್ಥರ ನಂಬಿಕೆ.
ಅತ್ಯಂತ ಶುದ್ಧ ನೀರು:
ತಮ್ಮ ಬಾಲ್ಯದಿಂದಲೂ ಹಿರಿಯರು ಈ ಕುಂಡದ ಬಗ್ಗೆ ಹೇಳುವ ಅನೇಕ ಅದ್ಭುತ ವಿಷಯಗಳನ್ನು ಕೇಳಿಯೇ ಬೆಳೆದಿರುವುದಾಗಿ ಇಲ್ಲಿ ಗ್ರಾಮಸ್ಥರಾದ ದಿನೇಶ್ ಸೈನಿ ಎನ್ನುವವರು ಹೇಳುತ್ತಾರೆ. ಅವರ ಪ್ರಕಾರ, ಶತಮಾನಗಳಿಂದ ಈ ಕುಂಡದಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಅಲ್ಲದೆ ಈ ಕುಂಡದ ನೀರು ತಿಳಿ ಹಾಲಿನ ಬಣ್ಣದಂತೆ ಕಾಣುತ್ತದೆ. ಇದರ ಶುದ್ಧತೆ ಸಾಮಾನ್ಯವಾಗಿ ಫಿಲ್ಟರ್ ಮಾಡಿದ ನೀರಿಗಿಂತ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಗಂಗಾ ನೀರಿಗೆ ಸಮಾನವೆಂಬ ನಂಬಿಕೆ:
ಪಾರ್ವತಿ ಕುಂಡದ ಸುತ್ತಮುತ್ತಲಿನ ಪ್ರದೇಶವು ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ಕೇಂದ್ರವಾಗಿದೆ ಎಂದು ಸ್ಥಳೀಯ ಸಂತ ರಾಜಾನಂದ ಸರಸ್ವತಿ ವಿವರಿಸಿದ್ದಾರೆ. ಬೆಟ್ಟಗಳಲ್ಲಿರುವ ಗುಹೆಗಳಲ್ಲಿ ಅನೇಕ ಸಂತರು ತಪಸ್ಸು ಮಾಡಿದ್ದಾರೆಯಂತೆ. ಈ ಕುಂಡ ಇಂದಿಗೂ ಆ ಪವಿತ್ರ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳುತ್ತಾರೆ. ಇಲ್ಲಿನ ಭಕ್ತರು ಈ ನೀರನ್ನು ಗಂಗಾ ನೀರಿಗೆ ಸಮಾನವೆಂದು ಪರಿಗಣಿಸುತ್ತಾರೆ. ಅತ್ಯಂತ ಭಕ್ತಿ ಭಾವದಿಂದ ಅದನ್ನು ಬಳಸುತ್ತಾರೆ.
ಈ ಕುಂಡದ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುವುದು ಇಲ್ಲಿನ ಭಕ್ತರ ಬಲವಾದ ನಂಬಿಕೆ. ಈ ನಂಬಿಕೆಯ ಕಾರಣದಿಂದಲೇ ದೂರದ ಸ್ಥಳಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ.ಆದರೆ ಈ ವಿಚಾರ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯವಾಗಿ ಇನ್ನೂ ದೃಢಪಟ್ಟಿಲ್ಲ.
ನೀರಿನ ಪರೀಕ್ಷೆ ನಡೆಸಿದ ಗ್ರಾಮಸ್ಥರು:
ಜೈಪುರದ ಪ್ರಯೋಗಾಲಯದಲ್ಲಿ ಇಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಫಿಲ್ಟರ್ ಮಾಡಿದ ನೀರಿಗಿಂತ ಹೆಚ್ಚು ಶುದ್ಧವಾಗಿದೆ ಎನ್ನುವ ವರದಿ ಬಂದಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಕೆಲವು ನೈಸರ್ಗಿಕ ಖನಿಜಗಳನ್ನು ಸಹ ಇದು ಒಳಗೊಂಡಿದೆ ಎಂದು ಪರೀಕ್ಷೆಯಲ್ಲಿ ಸಾಬೀತಾಗಿವೆಯಂತೆ. ಆದರೆ ಈ ವಿವರಗಳ ಕುರಿತು ವೈಜ್ಞಾನಿಕ ಅಧ್ಯಯನಗಳು ಸಾರ್ವಜನಿಕರಿಗೆ ಲಭ್ಯವಿಲ್ಲ.
ಮತ್ತೊಂದೆಡೆ, ಈ ಪ್ರದೇಶದಲ್ಲಿ 200 ಅಡಿ ಆಳದ ಕೊಳವೆಬಾವಿಗಳನ್ನು ಕೊರೆದರೂ ನೀರು ಸಿಗದೇ ಇರುವ ಅನೇಕ ಪ್ರಕರಣಗಳಿವೆ. ಅಂತಹ ಸಂದರ್ಭಗಳಲ್ಲಿ ಯಾವಾಗಲೂ ನೀರಿನಿಂದ ತುಂಬಿರುವ ಪಾರ್ವತಿ ಕುಂಡ ಗ್ರಾಮಸ್ಥರಿಗೆ ಆಧಾರಸ್ತಂಭವಾಗಿ ಉಳಿದಿದೆ. ಪ್ರಕೃತಿ, ನಂಬಿಕೆ ಮತ್ತು ಸ್ಥಳೀಯ ಕಥೆಗಳು ಸೇರಿ ಈ ಕುಂಡವನ್ನು ವಿಶೇಷ ಸ್ಥಳವನ್ನಾಗಿ ಮಾಡುತ್ತವೆ. ಇದರ ಹಿಂದಿನ ನಿಜವಾದ ರಹಸ್ಯವೇನು ಎಂಬುದು ಇನ್ನೂ ಚರ್ಚೆಯಾಗಿಯೇ ಉಳಿದಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications