ಓಲಾ-ಊಬರ್ ವಿರುದ್ಧ ಕ್ಯಾಬ್ ಚಾಲಕರು ಕೆಂಡ: ಜುಲೈ 13ರಂದು ಬೃಹತ್ ಪ್ರತಿಭಟನೆಗೆ ಕರೆ
ಬೆಂಗಳೂರು: ಆ್ಯಪ್ ಆಧಾರಿತ ಓಲಾ, ಊಬರ್ ಕಂಪನಿಗಳು ಟ್ಯಾಕ್ಸಿ ಚಾಲಕರಿಗೆ ನೀಡುವ ಕಡಿಮೆ ಪಾವತಿ ವಿರೋಧಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕ ಸಂಘಟನೆಗಳಿಂದ ಇದೇ ಜುಲೈ 13ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಅಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಟ್ಯಾಕ್ಸಿ ಹಾಗೂ ಆಟೋಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರಿನಂತಹ ದಟ್ಟಣೆ ಹೆಚ್ಚಿರುವ ನಗರದಲ್ಲಿ ಹಗಲು, ರಾತ್ರಿ ಎನ್ನದೇ ಕ್ಯಾಬ್ ಚಾಲಕರು ಕಾರು ಓಡಿಸುತ್ತಾರೆ. ಆದರೆ ಅವರಿಗೆ ಓಲಾ, ಊಬರ್ ಕಂಪನಿಗಳು ಸರ್ಕಾರದ ನೀತಿ ಉಲ್ಲಂಘಿಸಿ ಪ್ರತಿ ಕಿಲೋ ಮಿಟರ್ಗೆ 24 ರೂಪಾಯಿ ಬದಲಾಗಿ, ಕೇವಲ 17 ರೂಪಾಯಿ ಮಾತ್ರವೇ ಪಾವತಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಕಂಪನಿಗಳ ಈ ನಿರ್ಧಾರದಿಂದಾಗಿ ಚಾಲಕರು ಕಂಗಾಲಾಗಿದ್ದಾರೆ. ಕಷ್ಟಪಟ್ಟು ದುಡಿದರೂ ಸಹಿತ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಷ್ಟಪಟ್ಟು ಚಾಲಕರು ಸಾಲ, ಶೂಲ ಮಾಡಿ ಲಕ್ಷಾಂತರ ರೂಪಾಯಿ ಕೊಟ್ಟು ಹೊಸ ಕಾರು ಇಲ್ಲವೇ, ಸೆಕೆಂಡ್ ಹ್ಯಾಂಡ್ ಗಾಡಿ ಖರೀದಿಸಿರುತ್ತಾರೆ. ಅವುಗಳನ್ನು ಓಲಾ, ಊಬರ್ ಕಂಪನಿಗಳ ಜತೆ ಸಂಯೋಜಿಸಿ ಒಂದಷ್ಟು ಹಣ ದುರಿಯುವ ಬಯಕೆ ಹೊಂದಿರುತ್ತಾರೆ. ಹೀಗಾಗಿಯೇ ಹಗಲು ರಾತ್ರಿ ಎನ್ನದೇ ಕಾರು ಓಡಿಸುತ್ತಿರುತ್ತಾರೆ. ಆದರೂ ಅವರಿಗೆ ಸರಿಯಾದ ಆದಾಯ ಆಗುತ್ತಿಲ್ಲ. ಸದರಿ ಕಂಪನಿಗಳು ಸರ್ಕಾರದ ನೀತಿ ಪಾಲಿಸುವಂತೆ ಆಗ್ರಹಿಸಿ, ಸರಿಯಾದ ಹಣ ಪಾವತಿಗೆ ಆಗ್ರಹಿಸಿ ಕ್ಯಾಬ್ ಚಾಲಕರು ಜುಲೈ 13ರಂದು ಪ್ರತಿಭಟನೆ ನಡೆಸಲಿದ್ದಾರೆ.
ದಿನನಿತ್ಯ ಕ್ಯಾಬ್, ಟ್ಯಾಕ್ಸಿ ನೆಚ್ಚಿಕೊಂಡ ಅನೇಕ ಪ್ರಯಾಣಿಕರು ಅಂದು ಸೇವೆಯಲ್ಲಿ ಅಡಚಣೆ ಎದುರಿಸುವ ಸಾಧ್ಯತೆ ಇರುತ್ತದೆ. ಖಾಸಗಿ ವಾಹನಗಳು ಹೆಚ್ಚಾಗಿ ರಸ್ತೆ ಇಳಿಬಹುದು. ಇಲ್ಲವೇ ನಮ್ಮ ಮೆಟ್ರೋ, ಬಿಎಂಟಿಸಿಎಂಯಂತಹ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರಲಿದೆ.
ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿವೆ ಕಂಪನಿಗಳು?
ಬೆಂಗಳೂರಿನಲ್ಲಿ ಕಾರು, ಟ್ಯಾಕ್ಸಿ ಚಾಲಕರು ಬಹುತೇಕ ಮಧ್ಯಮ ವರ್ಗದವರು. ಇಂದಿನ ದುಬಾರಿ ದಿನಗಳಲ್ಲಿ ವಾಹನದ ಇಎಂಐ, ದೈನಂದಿನ ಖರ್ಚು, ಮನೆ-ಕುಟುಂಬ ನಿರ್ವಹಣೆಗೆ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ನಮಗೆ ಸಿಗಬೇಕಾದ ಪ್ರತಿ ಕಿಲೋ ಮೀಟರ್ಗೆ 24 ರೂ. ಬದಲಾಗಿ 17 ರೂ. ನೀಡಿದರೆ ಸಂಸಾರ ತೂಗಿಸುವುದು ಕಷ್ಟ ಎಂದು ಚಾಲಕರೊಬ್ಬರು ಇತ್ತೀಚೆಗೆ ಮಹಿಳಾ ಪ್ರಯಾಣಿಕರ ಮುಂದೆ ಅಳಲು ತೋಡಿಕೊಂಡಿದ್ದರು.
ಕೆಲವು ಚಾಲಕರು ರೋಸಿಹೋಗಿದ್ದು, ಕ್ಯಾಬ್ ಬುಕ್ ಆದ ಬಳಿಕ ಅವರೇ ಕ್ಯಾನ್ಸಲ್ ಮಾಡುತ್ತಾರೆ. ಜೊತೆಗೆ ವಿಥೌಟ್ ಬುಕಿಂಗ್ ಡ್ರಾಪ್ ಮಾಡುವ ಮೂಲಕ ಬುಕಿಂಗ್ ಹಣ ಪಡೆಯುತ್ತಾರೆ. ಈ ಮೂಲಕ ಕಂಪನಿಗೆ ಹಣ ಹೋಗದಂತೆ ಬುದ್ಧಿ ಕಲಿಸಿದ ಉದಾಹರಣೆಗಳು ಇವೆ. ಪ್ರಯಾಣಿಕರು ಬುಕಿಂಗ್ ಕ್ಯಾನ್ಸ್ ಮಾಡಿದರೆ ಚಾಲಕರಿಂದ ಕಂಪನಿಗಳು 25 ರೂ. ಹಣ ಕಡಿತಗೊಳಿಸುತ್ತವೆ. ಹೀಗಾಗಿ ಚಾಲಕರೇ ಕಡಿತಗೊಳಿಸಿ, ಪ್ರಯಾಣಿಕರಿಗೆ ಬಾಡಿಗೆ ಸೇವೆ ನೀಡುವುದು ವರದಿ ಆಗಿವೆ.
ಪ್ಯಾನಿಕ್ ಬಟನ್-ಜಿಪಿಎಸ್ಗೆ ವಿರೋಧ
ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ ಸಂಘಟನೆಗಳು, ಚಾಲಕರ ಸಂಘಟನೆಗಳು ವಾಹನಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಕೆಗೆ ರಿಚಾರ್ಜ್ ವಿರೋಧ ವ್ಯಕ್ತಪಡಿಸಿವೆ. ಆಲ್ ಇಂಡಿಯಾ ರೋಡ್ ಟ್ರಾನ್ಸ್ಪೋರ್ಟ್ ವತಿಯಿಂದ ಇತ್ತೀಚೆಗೆ ಜುಲೈ 8ರಂದು ಪ್ರತಿಭಟನೆ ನಡೆಯಿತು. ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಹೀಗೆ ಹೊಸ ಹೊಸ ನೀತಿಗಳಿಂದ ಚಾಲಕರಿಗೆ ಆರ್ಥಿಕ ತೊಂದರೆ ಆಗುವುದಕ್ಕೆ ಎಲ್ಲೆಡೆ ಆಟೋ, ಕ್ಯಾಬ್ ಚಾಲಕರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ..













Click it and Unblock the Notifications