ಟ್ವಿಟ್ಟರ್ನಲ್ಲಿ 'ಅಣ್ಣಾಮಲೈ ಅರೆಸ್ಟ್' ಟ್ರೆಂಡಿಂಗ್ ಏನಿದರ ಹಿಂದಿನ ಕಥೆ ?
ಚೆನ್ನೈ, ಜನವರಿ 27: 'ಅಣ್ಣಾಮಲೈ ಅರೆಸ್ಟ್' ಎಂಬುದು ಏಕೆ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಿದೆ.
ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿದ್ಯಾರ್ಥಿನಿ ಪೋಷಕರಿಗೆ ಸೂಕ್ತ ಪರಿಹಾರ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಮತಾಂತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಶಾಲೆಗಳನ್ನು ಮುಚ್ಚಲು ಮತ್ತು ಶಾಲೆಯ ಆಡಳಿತವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಶಾಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಕೇಳಿಬಂದಿದೆ. ಪ್ರಕರಣ ಸಂಬಂಧ ಶಾಲಾ ಹಾಸ್ಟೆಲ್ ವಾರ್ಡನ್ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಮಿಳುನಾಡಿನ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.
ಎನ್ಸಿಪಿಸಿಆರ್ಗೆ ಬಂದ ದೂರಿನ ಪ್ರಕಾರ ತಂಜಾವೂರಿನ ಬಾಲಕಿ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಶಾಲೆಯ ಹಾಸ್ಟೆಲ್ನ ವಾರ್ಡನ್ ಹಿಂದೂ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸುತ್ತಿದ್ದರು. ಮತಾಂತರವಾದರೆ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಗುವ ಆಫರ್ ನೀಡಿದ್ದರು. ಆಕೆ ಒಪ್ಪದಿದ್ದಾಗ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದರು.
ಆಕೆಗೆ ಮನೆಗೆ ತೆರಳಲು ಬಿಡುತ್ತಿರಲಿಲ್ಲ. ಆಕೆಯ ಬಳಿ ಶೌಚಾಲಯ, ಪಾತ್ರೆ ತೊಳೆಸಲಾಗುತ್ತಿತ್ತು. ಇದರಿಂದ ಬೇಸತ್ತು ಆಕೆ ಜ.9 ರಂದು ಆತ್ಮಹತ್ಯೆಗೆ ಪ್ರಯತ್ನಿಸಿ, ಜ.19 ರಂದು ಸಾವನ್ನಪ್ಪಿದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಈ ನಡುವೆ ಪ್ರಕರಣ ಸಂಬಂಧ ಹಾಸ್ಟೆಲ್ ವಾರ್ಡನ್ರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಮತಾಂತರದ ವಿಷಯ ಇಲ್ಲ. ವಾರ್ಡನ್ ತನ್ನ ಮನೆಯಲ್ಲಿ ಮನೆಕೆಲಸ ಮಾಡುವಂತೆ ನನಗೆ ಒತ್ತಾಯಿಸಿದ್ದರು.
ಈ ಕಿರುಕುಳ ತಾಳಲಾಗದೇ ತಾನು ಅತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ದುರಂತಕ್ಕೆ ಮತಾಂತರ ಯತ್ನವೇ ಕಾರಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಅಲ್ಲದೆ ಶಾಲೆಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಾವು ಈ ವಿಚಾರದಲ್ಲಿ ರಾಜಕೀಯ ಮಾಡಿತ್ತಿಲ್ಲ, ಬಾಲಕಿಗೆ ನ್ಯಾಯವನ್ನು ಬಯಸುತ್ತೇವೆ ಎಂದು ಅಣ್ಣಾಮಲೈ ಹೇಳಿದರು. ಸಮಸ್ಯೆಯನ್ನು ರಾಜಕೀಯಗೊಳಿಸಬೇಡಿ ಎಂದು ಜನರಿಗೆ ಕರೆ ನೀಡಿದರು, ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡರು ಭಾಗವಹಸಿದ್ದರು.
ಏತನ್ಮಧ್ಯೆ, ಕೊಯಮತ್ತೂರಿನಲ್ಲಿ ಹಿಂದೂ ಮುನ್ನಾನಿ ಮಹಿಳಾ ವಿಭಾಗದ ಸದಸ್ಯರು ತಮ್ಮ ಕಣ್ಣನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಮಣ್ಣಿನ ದೀಪಗಳನ್ನು ಹಿಡಿದು ಸಿದ್ಧಿವಿನಾಯಕ ದೇವಸ್ಥಾನದ ಎದುರು ಜಮಾಯಿಸಿದರು. ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿ ಶಾಲಾ ಆಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆದರೆ ಟ್ವಿಟ್ಟರ್ ಬಳಕೆದಾರರಾದ ಸಾವುಕ್ಕು ಶಂಕರ್ ಟ್ವೀಟ್ ಒಂದನ್ನು ಮಾಡಿದದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಾಡುತ್ತಿರುವ ಆರೋಪ ಸುಳ್ಳು, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ ಒಂದರಲ್ಲಿ ತಿರುಕಟ್ಟರುಪಲ್ಲೈ ವಿದ್ಯಾರ್ಥಿನಿ ನನಗೆ ಯಾವುದೇ ಕಿರುಕುಳ ಕೊಟ್ಟಿಲ್ಲ ಹಾಗೂ ನನ್ನ ಹಣೆಯ ಮೇಲಿನ ಸಿಂಧೂರ ಅಳಿಸುವಂತೆಯೂ ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಳು.
ಈ ಕುರಿತು ಅಣ್ಣಾಮಲೈ ಎಡಿಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅಣ್ಣಾಮಲೈ ಅವರು ಧಾರ್ಮಿಕ ಗಲಭೆ ಸೃಷ್ಟಿಸುವ ಪಿತೂರಿ ನಡೆಸುತ್ತಿದ್ದಾರೆ. ಅವರನ್ನು ಬಂಧಿಸಬೇಕು ಎನ್ನುವ ಒತ್ತಾಯ ಟ್ವಿಟ್ಟರ್ನಲ್ಲಿ ಕೇಳಿಬರುತ್ತಿದೆ.