ಯಮರಾಜ ಪೊ ಪೊ... ಕಾವೇರಿ ಆಸ್ಪತ್ರೆ ಸುತ್ತ ಅದೇ ಧ್ವನಿ!
Recommended Video

ಚೆನ್ನೈ, ಜುಲೈ 30: ತಮಿಳುನಾಡಿನ ಚೆನ್ನೈನ ಕಾವೇರಿ ಆಸ್ಪತ್ರೆ ಎದುರಲ್ಲಿ ಎಲ್ಲಿ ಕೇಳಿದರಲ್ಲಿ ಅದೇ ಧ್ವನಿ.. 'ಯಮ ರಾಜ ಪೊ ಪೊ...!'(ಹೋಗು ಹೋಗು ಯಮರಾಜ) "ತಲೈವಾ ಬೇಗ ಗುಣಮುಖರಾಗಿ" ಎಂದು ಕರುಣಾನಿಧಿ ಅವರ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ!
ಅನಾರೋಗ್ಯದ ಕಾರಣ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ.
ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರ ರಕ್ತದೊತ್ತಡ ಏಕಾಏಕಿ ಕಡಿಮೆಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 94 ವರ್ಷದ ಕರುಣಾನಿಧಿ ಅವರ ಅನಾರೋಗ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ದು, 'ಯಮ ರಾಜ ಪೊ ಪೊ...!' ಎಂದು ಘೋಷಣೆ ಕೂಗುತ್ತಿದ್ದಾರೆ. ಮೂರು ದಿನಗಳಿಂದ ಊಟ ನಿದ್ದೆ ಬಿಟ್ತು ಆಸ್ಪತ್ರೆ ಎದುರು ಜಮಾಯಿಸಿರುವ ಅಭಿಮಾನಿಗಳನ್ನು ಮನೆಗೆ ಕಳಿಸುವ ಯತ್ನವನ್ನು ಡಿಎಂಕೆ ಮುಖಂಡ, ಕರುಣಾನಿಧಿ ಅವರ ಪುತ್ರ ಎಂ ಕೆ ಸ್ಟಾಲಿನ್ ಮಾಡಿದ್ದರೂ ಅದು ವಿಫಲವಾಗಿದೆ!
ಆಸ್ಪತ್ರೆಯ ಬ್ಯಾರಿಕೇಡ್ ಗಳನ್ನು ಮುರಿದುಕೊಂಡು ಬರಲು ಯತ್ನಿಸಿದ ಕೆಲವು ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆಯೂ ವರದಿಯಾಗಿದೆ.

ಪೊ ಪೊ ಯಮರಾಜ
ವಯೋಸಹಜ ಅನಾರೋಗ್ಯ ಸಾಮಾನ್ಯ. ಆದರೂ ಅಭಿಮಾನಿಗಳಿಗೆ ತಮ್ಮ ನಾಯಕ ಎಷ್ಟು ದಿನ ಬದುಕಿದ್ದರೂ ಖುಷಿಯೇ. ಆದ್ದರಿಂದ ಆಸ್ಪತ್ರೆ ಎದುರಲ್ಲಿ ಜನರು ಕರುಣಾನಿಧಿ ಅವರ ಚಿತ್ರವನ್ನು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮಾಮೂಲೆನ್ನಿಸಿದೆ. ಅದರೊಂದಿಗೆ ಯಮರಾಜ ಪೊ ಪೊ ಎಂದು ಸಾವಿನ ಅಧಿದೇವತೆಯನ್ನೇ ವಾಪಸ್ ಕಳಿಸುವ ಪ್ರಾರ್ಥನೆಯೂ ಕಿವಿಗಪ್ಪಳಿಸುತ್ತಿದೆ.

ಅಭಿಮಾನದ ಪರಾಕಾಷ್ಠೆ!
ಅಭಿಮಾನಿಯೊಬ್ಬ ಕೇಶಮುಂಡನ ಮಾಡಿಸಿಕೊಂಡು ತನ್ನ ಅಭಿಮಾನವನ್ನು ಮೆರೆದ. ಆಸ್ಪತ್ರೆ ಎದುರಲ್ಲಿ ಕರುಣಾನಿಧಿ, ಎಂ.ಕೆ.ಸ್ಟಾಲಿನ್ ಮುಂತಾದ ಡಿಎಂಕೆ ಮುಖಂಡರ ಚಿತ್ರಗಳನ್ನು ಹಿಡಿದು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಿಎಂ, ಡಿಸಿಎಂ ಭೇಟಿ
ಕರುಣಾನಿಧಿ ಅವರನ್ನು ದಾಖಲಿಸಲಾಗಿರುವ ಕಾವೇರಿ ಆಸ್ಪತ್ರೆಗೆ ಎಐಎಡಿಎಂ ಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನೀಸ್ವಾಮಿ ಭೇಟಿ ನೀಡಿದರು. ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರೂ ಜೊತೆಯಲ್ಲಿದ್ದರು. ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ ಅವರೂ ಆಸ್ಪತ್ರೆಗೆ ತೆರಳಿ, ಕರುಣಾನಿಧಿ ಅವರನ್ನು ನೋಡಿ, ನಂತರ ಎಂ.ಕೆ.ಸ್ಟಾಲಿನ್ ಮತ್ತು ಕನ್ನಿಮೋಳಿ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದರು.

ಆಸ್ಪತ್ರೆ ಮುಂದೆ ಬಿಗಿಬಂದೋಬಸ್ತ್
ಆಸ್ಪತ್ರೆ ಮುಂದೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜಮಾಯಿಸಿರುವ ಸಾವಿರಕ್ಕೂ ಹೆಚ್ಚು ಜನರನ್ನು ನಿಯಂತ್ರಿಸುವುದಕ್ಕೆ ಹರಸಾಹಸ ಮಾಡಲಾಗುತ್ತಿದೆ. ಕರುಣಾನಿಧಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ವದಂತಿಗಳು ಹಬ್ಬಿದ್ದರಿಂದ ಅಭಿಮಾನಿಗಳು ಆಕ್ರೋಶಗೊಂಡು ಆಸ್ಪತ್ರೆಯ ಬ್ಯಾರಿಕೇಡ್ಗಳನ್ನು ಮುರಿಯಲು ಪ್ರಯತ್ನಿಸಿದ್ದರು. ಇದರಿಂದ ಲಾಠಿ ಚಾರ್ಜ್ ಸಹ ನಡೆದಿತ್ತು.












Click it and Unblock the Notifications