ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ: ಕಲಾ ವಿಭಾಗ ಸೇರಿ ಬರೋಬ್ಬರಿ 458 ಕೋರ್ಸ್ಗಳು ರದ್ದು
ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದ್ದು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯ ಕಾರಣದಿಂದಾಗಿ ಕಾಲೇಜು ಶಿಕ್ಷಣ ಇಲಾಖೆಯು ಬರೋಬ್ಬರಿ 458 ಕೋರ್ಸ್ಗಳನ್ನು ರದ್ದುಗೊಳಿಸಿದೆ. ಬೇಡಿಕೆ ಇಲ್ಲದ ಕೋರ್ಸ್ಗಳನ್ನು ಮುಂದುವರಿಸುವುದರಿಂದ ಭವಿಷ್ಯದಲ್ಲಿ ಸರ್ಕಾರದ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.
ಪ್ರಮುಖವಾಗಿ ಕಲಾ ವಿಭಾಗದ ಹಲವು ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಂದ ಬೇಡಿಕೆ ಗಣನೀಯವಾಗಿ ಕುಸಿದಿದೆ. ಇಲಾಖೆಯ ಮಾಹಿತಿಯಂತೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ ಹಾಗೂ ಸಮಾಜಶಾಸ್ತ್ರದಂತಹ ಪ್ರಮುಖ ವಿಷಯಗಳ ಸಂಯೋಜನೆಗಳಿಗೆ ಬೇಡಿಕೆ ತುಂಬ ಕಡಿಮೆಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಮೂರನೇ ಹಂತದ (Tier-3) ನಗರಗಳಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ಗೂ ಬೇಡಿಕೆ ಕಡಿಮೆಯಾಗಿರುವುದು ವರದಿಯಿಂದ ತಿಳಿದುಬಂದಿದೆ.

2025-26ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 1,091 ಕೋರ್ಸ್ ಸಂಯೋಜನೆಗಳಿಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ ಹಾಗೂ 190 ಸಂಯೋಜನೆಗಳಿಗೆ ಅತ್ಯಂತ ಕಡಿಮೆ ದಾಖಲಾತಿ ಇತ್ತು. ಕೆಲವು ಕಾಲೇಜುಗಳಲ್ಲಿ ರಸಾಯನ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಭೌತವಿಜ್ಞಾನ ಮತ್ತು ಗಣಿತದಂತಹ ಪ್ರಮುಖ ವಿಜ್ಞಾನ ಕೋರ್ಸ್ಗಳಿಗೂ ದಾಖಲಾತಿ ಶೂನ್ಯವಾಗಿತ್ತು. ಹೀಗಾಗಿ, ಬೇಡಿಕೆ ಇಲ್ಲದ ಕೋರ್ಸ್ಗಳನ್ನು ರದ್ದು ಮಾಡುವ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಹೊಸ ಕೋರ್ಸ್ಗಳಿಗೆ ಅನುಮತಿ
ಒಂದೆಡೆ ಕೋರ್ಸ್ಗಳು ರದ್ದಾಗುತ್ತಿದ್ದರೆ, ಮತ್ತೊಂದೆಡೆ ಬಿ.ಎ, ಬಿ.ಎಸ್ಸಿ, ಸಮಾಜ ಕಾರ್ಯ ಸೇರಿದಂತೆ ಕೌಶಲ ಹಾಗೂ ಉದ್ಯೋಗಾಧಾರಿತ ವಿಷಯಗಳ 230 ಹೊಸ ಕೋರ್ಸ್ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಬೇಡಿಕೆ ಇರುವ 186ಕ್ಕೂ ಹೆಚ್ಚು ಕಾಲೇಜುಗಳನ್ನು ಗುರುತಿಸಿದ್ದು, ಅಲ್ಲಿ ಗರಿಷ್ಠ 100 ವಿದ್ಯಾರ್ಥಿಗಳವರೆಗೆ ಹೆಚ್ಚುವರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, 26 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಿಬಿಎ ಹಾಗೂ ಬಿಸಿಎ ಕೋರ್ಸ್ಗಳನ್ನು ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಪಿಯು ಉಪನ್ಯಾಸಕರಿಗೆ 'ಡಯಟ್' ತರಬೇತಿಗೆ ಆಕ್ಷೇಪ
ಇದೇ ವರದಿಯಲ್ಲಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ವಿಚಾರವೆಂದರೆ, ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಗೆ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (DIET) ಮೂಲಕ ತರಬೇತಿ ನೀಡುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅವರು "ಶಾಲಾ ಶಿಕ್ಷಣ ವ್ಯವಸ್ಥೆಗೆ ಸೀಮಿತವಾಗಿರುವ ಡಯಟ್ ಉಪನ್ಯಾಸಕರಿಂದ ನಮಗೆ ತರಬೇತಿ ನೀಡುವುದು ಅಪಮಾನಕರ ವಿಚಾರ" ಎಂದರು.
"ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸ್ನಾತಕೋತ್ತರ ಪದವೀಧರರು, ಪಿಎಚ್.ಡಿ ಪಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಆದರೆ, ಶಾಲಾ ಶಿಕ್ಷಣಕ್ಕೆ ಸೀಮಿತವಾಗಿರುವ ಡಯಟ್ ಉಪನ್ಯಾಸಕರಿಗೆ ಪದವಿ ಪೂರ್ವ ಪಠ್ಯಕ್ರಮದ ವ್ಯಾಪಕ ಹಿನ್ನೆಲೆ ಹಾಗೂ ವಿಷಯದ ಆಳವಾದ ಅರಿವು ಇರುವುದಿಲ್ಲ. ಹೀಗಿರುವಾಗ ವಿಷಯದ ಅರಿವಿಲ್ಲದವರು ನಮಗೆ ಹೇಗೆ ಬೋಧನೆ ಮತ್ತು ತರಬೇತಿ ನೀಡಲು ಸಾಧ್ಯ?" ಎಂದು ಸಂಘವು ಶಿಕ್ಷಣ ಇಲಾಖೆಯ ಆದೇಶವನ್ನು ಪ್ರಶ್ನಿಸಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.












Click it and Unblock the Notifications