ಕೊನೆಯಿಲ್ಲದ ಪ್ರೀತಿ, ಮರೆಯಲಾಗದ ನೆನಪು: ಪತಿ ಅಂಬರೀಶ್ ಹುಟ್ಟುಹಬ್ಬಕ್ಕೆ ಸುಮಲತಾ ಭಾವುಕ ಪೋಸ್ಟ್
ಇಂದು ಕನ್ನಡ ಚಿತ್ರರಂಗದ ಹೆಮ್ಮೆಯ 'ರೆಬೆಲ್ ಸ್ಟಾರ್' ಅಂಬರೀಶ್ ಅವರ 74ನೇ ಜನ್ಮದಿನ. ಇದರ ಅಂಗವಾಗಿ ಅವರ ಧರ್ಮಪತ್ನಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಾವುಕ ಸಾಲುಗಳ ಪೋಸ್ಟ್ ಮೂಲಕ ತಮ್ಮ ಪ್ರೀತಿಯ ಅಂಬಿಯನ್ನು ನೆನೆದಿದ್ದಾರೆ. ಅಂಬರೀಶ್ ಅವರೊಂದಿಗಿನ ಸುಂದರ ಕ್ಷಣಗಳ ಫೋಟೋವನ್ನು ಹಂಚಿಕೊಂಡಿರುವ ಸುಮಲತಾ, "ಅವರು ಎಂದೆಂದಿಗೂ ನೆನಪಿನಲ್ಲಿರುತ್ತಾರೆ, ಎಂದೆಂದಿಗೂ ಪ್ರೀತಿಸಲ್ಪಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.
ಅಂಬರೀಶ್ ಜೀವನವೇ ಒಂದು ಸಂಭ್ರಮ
ಸುಮಲತಾ ಅಂಬರೀಶ್ ಅವರ ಪೋಸ್ಟ್ನಲ್ಲಿ, "ಪ್ರೀತಿಯ ಅಂಬಿಯ 74ನೇ ಜನ್ಮದಿನದಂದು, ಇಡೀ ಜಗತ್ತು ಕೊಂಡಾಡಿದ ಒಬ್ಬ ಮಹಾನ್ ನಟನನ್ನು ಮಾತ್ರವಲ್ಲ, ಯಾವುದೇ ಮಿತಿಯಿಲ್ಲದ ವಿಶಾಲ ಹೃದಯ ಹೊಂದಿದ್ದ ಅಸಾಮಾನ್ಯ ವ್ಯಕ್ತಿಯನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಅಂಬರೀಶ್ ಅವರ ಜೀವನವೇ ಒಂದು ಸಂಭ್ರಮವಾಗಿತ್ತು. ಅದು ಆತ್ಮೀಯತೆ, ಉದಾರತೆ, ನಗು ಮತ್ತು ಜನರ ಮೇಲಿನ ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು. ಸಾಗರದಷ್ಟೇ ವಿಶಾಲವಾಗಿದ್ದ ಅವರ ಹೃದಯ, ತಮ್ಮ ಹಾದಿಯಲ್ಲಿ ಸಿಕ್ಕ ಪ್ರತಿಯೊಬ್ಬರನ್ನೂ ದಯೆ, ಬೆಳಕು ಮತ್ತು ಅಕ್ಕರೆಯಿಂದ ಬರಮಾಡಿಕೊಳ್ಳುತ್ತಿತ್ತು. ಅವರು ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸಿದರು. ಅವರನ್ನು ತಿಳಿದುಕೊಳ್ಳುವ ಸೌಭಾಗ್ಯ ಪಡೆದ ಪ್ರತಿಯೊಬ್ಬರ ಆತ್ಮವನ್ನೂ ಶ್ರೀಮಂತಗೊಳಿಸಿದರು ಎಂದು ಕೊಂಡಾಡಿದ್ದಾರೆ.

ಇಂದು, ಅವರ ಕುಟುಂಬದವರು ಅವರನ್ನು ಅಪಾರ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ, ಲಕ್ಷಾಂತರ ಅಭಿಮಾನಿಗಳು ಅವರನ್ನು ಆರಾಧಿಸುತ್ತಿದ್ದಾರೆ ಮತ್ತು ಯಾರ ಜೀವನವನ್ನು ಅವರು ಶಾಶ್ವತವಾಗಿ ಬೆಳಗಿಸಿದ್ದರೋ ಅಂತಹ ಅಸಂಖ್ಯಾತ ಸ್ನೇಹಿತರು ಅವರನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಪರಂಪರೆ ಕೇವಲ ಅವರ ಅದ್ಭುತ ಜೀವನದ ಪಯಣದ ಮೂಲಕ ಮಾತ್ರವಲ್ಲ, ಅವರು ನೀಡಿದ ಕೊನೆಯಿಲ್ಲದ ಪ್ರೀತಿ ಮತ್ತು ಬಿಟ್ಟುಹೋದ ನೆನಪುಗಳ ಮೂಲಕ ಎಂದೆಂದಿಗೂ ಜೀವಂತ ಎಂದು ಸುಮಲತಾ ಬರೆದುಕೊಂಡಿದ್ದಾರೆ.
Forever remembered, forever loved.
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) May 28, 2026
On his 74th Birth Anniversary, I remember not just the legend the world celebrated, but the extraordinary man whose heart knew no boundaries.
Ambareesh’s life itself was a celebration — filled with warmth, generosity, laughter and an unmatched… pic.twitter.com/x1gyjmwYGT
ಎಂದೆಂದಿಗೂ ನಮ್ಮ ಹೃದಯದಲ್ಲಿ... ಯಾವಾಗಲೂ ನಮ್ಮ ರೆಬೆಲ್ ಸ್ಟಾರ್
ಅಂಬರೀಶ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನದ ಮಹಾಪೂರ ಹರಿದುಬರುತ್ತಿದೆ. ಸುಮಲತಾ ಅವರ ಈ ಪೋಸ್ಟ್ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸಹ ಕಮೆಂಟ್ ಮಾಡುತ್ತಾ, ಮಂಡ್ಯದ ಗಂಡು, ಕಲಿಯುಗ ಕರ್ಣನಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಅವರ ಭವ್ಯ ಸ್ಮಾರಕಕ್ಕೆ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್ ಹಾಗೂ ಸೊಸೆ ಅವಿವಾ ಬಿದ್ದಪ್ಪ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಂಬಿ ಅಭಿಮಾನಿ ಸಂಘಟನೆಗಳು ಹಾಗೂ ಮಂಡ್ಯದ ಅಭಿಮಾನಿಗಳು ಸ್ಮಾರಕದ ಬಳಿ ಬಂದು ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಅಂಬರೀಶ್ ಕೇವಲ ಬೆಳ್ಳಿತೆರೆಯ ರೆಬೆಲ್ ಸ್ಟಾರ್ ಮಾತ್ರವಾಗಿರಲಿಲ್ಲ, ಚಿತ್ರರಂಗದಲ್ಲಿ ಯಾರೇ ಕಷ್ಟದಲ್ಲಿದ್ದರೂ ಮೊದಲು ಧಾವಿಸುತ್ತಿದ್ದ 'ದಾನಶೂರ'. ಸುಮಲತಾ ಅವರು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿರುವಂತೆ, ಅವರ ಮನೆಗೆ ಹೋದವರು ಯಾರೂ ಖಾಲಿ ಹೊಟ್ಟೆಯಲ್ಲಿ ಹಿಂತಿರುಗುತ್ತಿರಲಿಲ್ಲ. ಚಿತ್ರರಂಗದ ಯಾವುದೇ ದೊಡ್ಡ ಪಂಚಾಯಿತಿ ಇದ್ದರೂ ಅಂಬಿ ಆಡಿದ್ದೇ ಅಂತಿಮ ಮಾತಾಗಿರುತ್ತಿತ್ತು.
ಅಂಬರೀಶ್ ಅವರು ಸಿನಿಮಾದಷ್ಟೇ ರಾಜಕೀಯದಲ್ಲೂ ಯಶಸ್ಸು ಕಂಡವರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಕೇಂದ್ರ ಸಚಿವರಾಗಿಯೂ (ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ) ಸೇವೆ ಸಲ್ಲಿಸಿದ್ದರು. ಕಾವೇರಿ ಹೋರಾಟಕ್ಕಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ 'ಮಂಡ್ಯದ ಗಂಡು' ಎಂಬ ಹೆಸರನ್ನು ಸಾರ್ಥಕಗೊಳಿಸಿಕೊಂಡಿದ್ದರು. ತದನಂತರ ರಾಜ್ಯ ರಾಜಕಾರಣದಲ್ಲೂ ವಸತಿ ಸಚಿವರಾಗಿ ಕೆಲಸ ಮಾಡಿದ್ದರು. ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕರ ನಡುವೆ ಪೈಪೋಟಿ ಇರುತ್ತದೆ. ಆದರೆ ಅಂಬರೀಶ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಹೊಂದಿದ್ದ 'ಕುಚಿಕು' ಸ್ನೇಹ ಇಂದಿಗೂ ಸ್ಯಾಂಡಲ್ವುಡ್ನಲ್ಲಿ ಮಾದರಿ.













Click it and Unblock the Notifications