ಗಜ ಚಂಡಮಾರುತ ರೌದ್ರಾವತಾರಕ್ಕೆ ತಮಿಳುನಾಡಿನಲ್ಲಿ 23 ಮಂದಿ ಬಲಿ
ಚೆನ್ನೈ, ನವೆಂಬರ್ 17: ತಮಿಳುನಾಡಿನಲ್ಲಿ ಗಜ ಚಂಡಮಾರುತ ತನ್ನ ರೌದ್ರಾವತಾರವನ್ನು ಪ್ರದರ್ಶಿಸಿದ್ದು 23 ಮಂದಿಯನ್ನು ಬಲಿ ಪಡೆದಿದೆ.
ಶುಕ್ರವಾರ ಬೆಳಗಿನ ಜಾವವೇ ತಮಿಳುನಾಡು ಮತ್ತು ಪುದುಚೆರಿ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು ಭಾರಿ ಮಳೆ ಸುರಿದಿದ್ದು, ಶುಕ್ರವಾರದ ಸಂಜೆ ಹೊತ್ತಿಗೆ 23 ಜನರು ಮೃತಪಟ್ಟಿದ್ದರು. ತಮಿಳುನಾಡು ಭಾಗಗಳಲ್ಲಿ ಪ್ರಬಲವಾಗಿರುವ ಗಜ ಚಂಡಮಾರುತ ತೀವ್ರತೆ ರಾಜ್ಯಕ್ಕೆ ತಟ್ಟಿಲ್ಲ ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿದೆ.
ನಾಗಪಟ್ಟಣಂ, ಕಡಲೂರು, ತಾಂಜಾವೂರು ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿದೆ, ಆರು ಜಿಲ್ಲೆಗಳ ಅರ್ಧಕರ್ಧ ಪಟ್ಟಣಗಳು ಕತ್ತಲಲ್ಲಿ ಮುಳುಗಿವೆ.

ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುವ ಚಂಡಮಾರುತ
ಗಜ ಚಂಡಮಾರುತವು ಗಂಟೆಗೆ 120 ಕಿ,ಮೀ ವೇಗದಲ್ಲಿ ಚಲಿಸುತ್ತದೆ. ನಾಗಪಟ್ಟಣಂ ಮತ್ತು ವೇದಾರಣ್ಯಂ ಮಧ್ಯದ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ನಾಗಪಟ್ಟಣಂ, ಕಡಲೂರು, ಪುದುಕೊಟ್ಟೈ, ಕರೈಕಲ್, ರಾಮನಾಥಪುರಂ, ತಿರುವಾರೂರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ.

80 ಸಾವಿರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ
ತಗ್ಗು ಹಾಗೂ ಕರಾವಳಿ ಪ್ರದೇಶದಲ್ಲಿರುವ 80 ಸಾವಿರಕ್ಕೂ ಹಚ್ಚು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 471 ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಮಾಹಿತಿ ಪಡೆದ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಕೆ ಪಳನಿಸ್ವಾ ಅವರಿಗೆ ಶುಕ್ರವಾರ ಕರೆ ಮಾಡಿ, ಹಾನಿಯ ಮಾಹಿತಿ ಪಡೆದರು. ಮತ್ತು ಕೇಂದ್ರದಿಂದ ಅಗತ್ಯ ನೆರವಿನ ಭರವಸೆಯನ್ನೂ ಕೂಡ ನೀಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ, ಆದರೆ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಪಳನಿಸ್ವಾಮಿ ದೂರಿದ್ದಾರೆ.

173 ದೋಣಿಗಳು ಅತಂತ್ರ
ಮೀನುಗಾರಿಕೆಗೆ ತೆರಳಿದ್ದ 173 ಯಾಂತ್ರೀಕೃತ ದೋಣಿಗಳು ಶ್ರೀಲಂಕಾದ ಕಡಲು ತೀರದಲ್ಲಿ ಸಿಲುಕಿವೆ, ಮೀನುಗಾರಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಗಜ ಚಂಡಮಾರುತದಿಂದ ಎಲ್ಲೆಲ್ಲಿ ಹಾನಿ
ನಾಗಪಟ್ಟಣಂ ಜಿಲ್ಲೆಯ ವೇಲಂಕಣಿ ಚರ್ಚ್ ನಲ್ಲಿರುವ ಯೇಸುಕ್ರಿಸ್ತನ ಪ್ರತಿಮೆಗೆ ಹಾನಿಯಾಗಿದೆ. ಮುಂದಿನ 24 ಗಂಟೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications