Get Updates
Get notified of breaking news, exclusive insights, and must-see stories!

ಚೆನ್ನೈನಲ್ಲಿ ಮಳೆ ಹುಟ್ಟು ಹಾಕಿದ ಪರಿಸ್ಥಿತಿ ನಿಭಾಯಿಸಲು 689 ಮೋಟಾರ್ ಪಂಪ್, 50 ದೋಣಿಗಳು ಸಜ್ಜು

ಚೆನ್ನೈ, ನವೆಂಬರ್ 18: ವರುಣನ ಅಬ್ಬರಕ್ಕೆ ಇಡೀ ಚೆನ್ನೈ ನಗರವೇ ತತ್ತರಿಸಿ ಹೋಗಿದೆ. ಬುಧವಾರ ಸಂಜೆಯಿಂದ ಮತ್ತೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದ್ದು, ಪರಿಸ್ಥಿತಿ ನಿಭಾಯಿಸಲು ಮಹಾನಗರ ಪಾಲಿಕೆಯು ಸಜ್ಜುಗೊಂಡಿದೆ.

"ಚೆನ್ನೈನಲ್ಲಿ ಜಲಾವೃತಗೊಳ್ಳುವ ತಗ್ಗು ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಮೋಟಾರ್ ಪಂಪ್‌ಗಳನ್ನು ಇರಿಸಲಾಗಿದೆ. ಒಟ್ಟು 689 ಮೋಟಾರ್ ಪಂಪ್‌ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲು ಅಣಿಗೊಳಿಸಲಾಗಿದ್ದು, ಈ ಪೈಕಿ 448 ಚೆನ್ನೈ ಮಹಾನಗರ ಪಾಲಿಕೆಗೆ ಸೇರಿದ್ದವು ಆಗಿವೆ. ಉಳಿದ 199 ಮೋಟಾರ್ ಪಂಪ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ಇದರ ಜೊತೆಗೆ 37 ಮೋಟಾರ್ ಪಂಪ್‌ಗಳನ್ನು ಇತರೆ ಅಸೋಸಿಯೇಷನ್ ವತಿಯಿಂದ ಪಡೆದು ಕಾರ್ಯಾಚರಣೆ ನಡೆಸಲಾಗುತ್ತದೆ," ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

689 ಮೋಟಾರ್ ಪಂಪ್‌ಗಳ ಪೈಕಿ 22 ಮೋಟಾರ್ ಪಂಪ್‌ಗಳು 100 ಹಾರ್ಸ್ ಪವರ್ ಸಾಮರ್ಥ್ಯವನ್ನು ಹೊಂದಿವೆ. 50 ಮೋಟಾರ್ ಪಂಪ್‌ಗಳು 50 ಹಾರ್ಸ್ ಪವರ್ ಸಾಮರ್ಥ್ಯವನ್ನು ಹೊಂದಿದ್ದು, ವೇಗವಾಗಿ ನೀರನ್ನು ತೆರವುಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chennai Heavy Rain: 50 boats, 689 Motor Pumps Kept Ready to Face Next Situation

ಚೆನ್ನೈನಲ್ಲಿ ತ್ಯಾಜ್ಯ ತೆರವು ಕಾರ್ಯಾಚರಣೆ:

"ನಿರ್ಬಂಧಿತ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ತೆಗೆದುಹಾಕುವ ಕೆಲಸವೂ ನಡೆಯುತ್ತಿದ್ದು, ನಗರದ ವಿವಿಧೆಡೆ ಒಟ್ಟು 5700 ಮೆಟ್ರಿಕ್ ಟನ್ ಕಸವನ್ನು ಪ್ರತಿದಿನ ತೆಗೆಯಲಾಗುತ್ತಿದೆ. ಇದಲ್ಲದೆ, ಎಲ್ಲಾ ಹೂಳು ಹಿಡಿಯುವ ಹೊಂಡಗಳು ಮತ್ತು ಮಳೆನೀರು ಚರಂಡಿಗಳನ್ನು ನಿರ್ಮೂಲನೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಲಚೇರಿ ಪ್ರದೇಶದಲ್ಲಿ ಮಳೆ ಆತಂಕ:

ಚೆನ್ನೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವೇಲಚೇರಿಯಂತಹ ಬಹುತೇಕ ರಸ್ತೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣದಲ್ಲಿ ಇಳಿಮುಖವಾಗಿದೆ. ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲೇ ಎರಡನೇ ಬಾರಿಯ ಮಳೆಯು ನಗರಕ್ಕೆ ಹೊಸ ಸವಾಲನ್ನು ಹಾಕುವಂತಿದೆ.

ಬುಧವಾರ ಸಂಜೆಯಿಂದ ಸುರಿದ ಮಳೆಯ ನಂತರ ನಗರದ ಪಾರಿ ರಸ್ತೆ, ಮೊಗಪ್ಪೈರ್‌ನ ತಿರುವಳ್ಳುವರ್ ಸಲೈ ಮತ್ತು ಅಣ್ಣಾನಗರದ ಮೆಟ್ರೋ ನಿಲ್ದಾಣದ ಹೊರಗಿನ ಸಣ್ಣ ರಸ್ತೆಗಳು ಜಲಾವೃತಗೊಂಡಿದ್ದು, ತಾತ್ಕಾಲಿಕವಾಗಿ ನೀರು ನಿಂತಿದ್ದ ದೃಶ್ಯ ಕಂಡು ಬಂತು. ಈ ಕುರಿತು ಯಾವುದೇ ರೀತಿಯ ದೂರುಗಳು ಬಂದರೆ ತಕ್ಷಣ ನೀರು ತೆರವುಗೊಳಿಸುವ ಕಾಮಗಾರಿ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ದೋಣಿಗಳ ಬಳಕೆ:

"ನಾವು ಸಹ ಮೀನುಗಾರಿಕೆ ಇಲಾಖೆಯೊಂದಿಗೆ ಸಮನ್ವಯದಲ್ಲಿದ್ದೇವೆ. ಚೆನ್ನೈನ ತಗ್ಗು ಪ್ರದೇಶಗಳಲ್ಲಿ ನಿಯೋಜಿಸಲು 50ಕ್ಕೂ ಹೆಚ್ಚು ದೋಣಿಗಳು ಸಿದ್ಧವಾಗಿವೆ. ಅಗತ್ಯವಿದ್ದಲ್ಲಿ ದೋಣಿಗಳು ಲಭ್ಯವಿರುತ್ತವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆನ್ನೈ ಪಾಲಿಕೆ ಆಯುಕ್ತ ಗಗನ್ ದೀಪ್ ಸಿಂಗ್ ಸಭೆ:

ಚೆನ್ನೈನಲ್ಲಿ ಮಳೆಯು ಸೃಷ್ಟಿಸಿದ ಪರಿಸ್ಥಿತಿಯ ಪರಿಶೀಲನೆ ಮತ್ತು ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ರಿಪನ್ ಬಿಲ್ಡಿಂಗ್ಸ್ ನಲ್ಲಿ ಮಹಾನಗರ ಪಾಲಿಕೆ ಆಯುಕ್ತ ಗಗನ್ ದೀಪ್ ಸಿಂಗ್ ಬೇಡಿ ಸಭೆ ನಡೆಸಿದರು. 100 ಅಡಿ ರಸ್ತೆಯಲ್ಲಿರುವ ಅಶೋಕ ಪಿಲ್ಲರ್‌ ಬಳಿಯ ಮೋರಿಗಳು ಮತ್ತು ಮಳೆನೀರು ಚರಂಡಿಗಳನ್ನು ಆಯುಕ್ತರು ಪರಿಶೀಲಿಸಿದರು.

ಚೆನ್ನೈನಲ್ಲಿ ಮಳೆಯ ಬಗ್ಗೆ ರೆಡ್ ಅಲರ್ಟ್ ಘೋಷಣೆ:

ಎರಡು ದಿನಗಳ ಕಾಲ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಸಂಬಂಧಿತ ಚಂಡಮಾರುತದ ಪರಿಚಲನೆಯೊಂದಿಗೆ ಕಡಿಮೆ ಒತ್ತಡದ ಪ್ರದೇಶವು ಬಂಗಾಳಕೊಲ್ಲಿಯಲ್ಲಿದೆ. ನ.18 ರ ವೇಳೆಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯನ್ನು ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಚೆನ್ನೈನಲ್ಲಿ ಭಾರೀ ಮಳೆಯ ಬಗ್ಗೆ ರೆಡ್ ಅಲರ್ಟ್ ಘೋಷಿಸಿದ್ದಾರೆ. ಚೆನ್ನೈ ಕಾರ್ಪೊರೇಷನ್‌ನಲ್ಲಿ ವಾರ್ ರೂಮ್ ಅನ್ನು ಸ್ಥಾಪಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+