ಕೂದಲು ಉದುರುವ ಸಮಸ್ಯೆಗೆ ಬೇಸತ್ತು ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ
ಮದುರೈ, ಜನವರಿ 2 : ಕೂದಲು ಉದುರುವ ಸಮಸ್ಯೆ ತಡೆಯುವುದಕ್ಕೆ ಆಗಲಿಲ್ಲ ಎಂಬ ಕಾರಣಕ್ಕೆ ಇಪ್ಪತ್ತೇಳು ವರ್ಷದ ಟೆಕ್ಕಿಯೊಬ್ಬರು ಮದುರೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಮಸ್ಯೆಯಿಂದ ಆತ ಬಹಳ ಬೇಸರಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಜೈಹಿಂದ್ ಪುರಂನ ಆರ್.ಮಿಥುನ್ ರಾಜ್ ಆತ್ಮಹತ್ಯೆ ಮಾಡಿಕೊಂಡವರು. ತಲೆ ಹೊಟ್ಟಿನ ಸಮಸ್ಯೆಯಿದ್ದ ಮಿಥುನ್ ಗೆ ವಿಪರೀತ ಕೂದಲು ಉದುರುತ್ತಿತ್ತು. ಹಲವು ಔಷಧೋಪಚಾರ ಮಾಡಿದ ನಂತರವೇ ಸಮಸ್ಯೆ ಪರಿಹಾರ ಆಗಿರಲಿಲ್ಲ.
ಚೆನ್ನೈನ ಇನ್ಫೋಸಿಸ್ ನಲ್ಲಿ ವೃತ್ತಿ ಆರಂಭಿಸಿದ್ದ ಮಿಥುನ್ ಕಳೆದ ವರ್ಷವಷ್ಟೇ ಬೆಂಗಳೂರಿನ ಐಟಿ ಕಂಪೆನಿಗೆ ಸೇರಿದ್ದರು. ಆತನ ತಂದೆ ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ತಾಯಿ ವಸಂತಿ ಮದುರೈನ ಜೈಹಿಂದ್ ಪುರಂನಲ್ಲಿ ವಾಸವಿದ್ದಾರೆ. ಮಗನಿಗೆ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಈ ಮಧ್ಯೆ ಮಿಥುನ್ ಗೆ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗಿತ್ತು.
ಹೈದರಾಬಾದ್: ಒಂದೇ ಕುಟುಂಬದ 7 ಜನ ಅನುಮಾನಾಸ್ಪದ ಸಾವು
ಕಳೆದ ಕೆಲವು ವಾರದಿಂದ ಮಿಥುನ್ ಖಿನ್ನತೆಗೊಳಗಾಗಿದ್ದರು. ತನ್ನ ಆತಂಕವನ್ನು ಆತ ತಾಯಿಯ ಮುಂದೆ ಕೂಡ ಹೇಳಿದ್ದರು. ಕಂಪೆನಿಗೆ ರಜಾ ಹಾಕಿದ್ದ ಮಿಥುನ್, ತಾಯಿಯು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.