ಟಿಟಿವಿ ದಿನಕರನ್ ಜತೆಗಿದ್ದ ಎಐಎಡಿಎಂಕೆ 18 ಶಾಸಕರು ಅನರ್ಹ
ಚೆನ್ನೈ, ಸೆಪ್ಟೆಂಬರ್ 18: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಪಲ್ಲಟವಾಗಿದೆ. ಟಿಟಿವಿ ದಿನಕರನ್ ಜತೆಗಿದ್ದ ಎಐಎಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸಲಾಗಿದೆ.
18 ಶಾಸಕರನ್ನು ಅನರ್ಹಗೊಳಿಸಿ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಕೆ ಧನಪಾಲ್ ಆದೇಶ ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಸದಸ್ಯರ ಪಕ್ಷಾಂತರ ವಿರೋಧಿ ಕಾಯ್ದೆ - 1986 ಅಡಿಯಲ್ಲಿ ಶಾಸಕರನ್ನು ಅವರು ಅನರ್ಹಗೊಳಿಸಿದ್ದಾರೆ. ಶಾಸಕರನ್ನು ಅನರ್ಹಗೊಳಿಸುವಂತೆ ಎಐಎಡಿಎಂಕೆ ಪಕ್ಷದ ಕಡೆಯಿಂದ ಸ್ಪೀಕರ್ ಗೆ ಮನವಿ ಮಾಡಲಾಗಿತ್ತು.
18 ಶಾಸಕರನ್ನು ಜತೆಗಿರಿಸಿಕೊಂಡಿದ್ದ ಶಶಿಕಲಾ ನಟರಾಜನ್ ಆಪ್ತ ಟಿಟಿವಿ ದಿನಕರನ್ ಸರಕಾರ ಉರುಳಿಸುವ ಬೆದರಿಕೆ ಹಾಕುತ್ತಾ ಬಂದಿದ್ದರು. ಎಡಪ್ಪಾಡಿ ಪಳನಿಸ್ವಾಮಿ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ಮೊರೆಯೂ ಹೋಗಿದ್ದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 117 ಶಾಸಕರ ಬೆಂಬಲ ಅಗತ್ಯವಾಗಿತ್ತು. ಈ ಹಿಂದೆ ಎಐಎಡಿಎಂಕೆ ಬಳಿ 134 ಶಾಸಕರಿದ್ದರು. ಆದರೆ, ಇದೀಗ 18 ಶಾಸಕರು ಅನರ್ಹವಾಗಿರುವುದರಿಂದ ಜತೆಗೆ ಜಯಲಲಿತಾ ನಿಧನದಿಂದ ತೆರವಾಗಿರುವ ಒಂದು ಸ್ಥಾನ ಸೇರಿ ಒಟ್ಟು 19 ಸ್ಥಾನಗಳು ತೆರವಾಗಿದ್ದು ವಿಧಾನಸಭೆಯ ಸಂಖ್ಯಾಬಲ 215ಕ್ಕೆ ಕುಸಿದಿದೆ.
ಹೀಗಾಗಿ ಬಹುಮತಕ್ಕೆ ಕೇವಲ 108 ಶಾಸಕರು ಅಗತ್ಯವಾಗಿದೆ. ಸದ್ಯ ಎಐಎಡಿಎಂಕೆ ಬಳಿ ಅನರ್ಹಗೊಂಡ ಶಾಸಕರು ಹೊರತುಪಡಿಸಿ 116 (ಸ್ಪೀಕರ್ ಸೇರಿ) ಶಾಸಕರಿದ್ದಾರೆ. ಹೀಗಾಗಿ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿ ಅಬಾಧಿತವಾಗಿದೆ.