ಹರಿಯಾಣದಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಮೇಲೆ ಜಲಫಿರಂಗಿ
ಚಂಡೀಘರ್, ಅಕ್ಟೋಬರ್ 2: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಿವಾಸದ ಎದುರಿಗೆ ಶನಿವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು ರಾತ್ರಿಯಿಡೀ ಸಿಎಂ ನಿವಾಸದ ಎದುರಿನಲ್ಲೇ ಜಾಗರಣೆ ಮಾಡುವ ಎಚ್ಚರಿಕೆ ನೀಡುತ್ತಿದ್ದಾರೆ.
ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ನಿಂತ ಪ್ರತಿಭಟನಾನಿರತ ರೈತರು ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಅತಿಹೆಚ್ಚು ಸಂಖ್ಯೆಯಲ್ಲಿ ಸೇರಿದ ರೈತರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಈ ವೇಳೆ ತಪ್ಪಿಸಿಕೊಳ್ಳುವುದಕ್ಕೆ ಕೆಲವು ರೈತರು ತಮ್ಮ ವಾಹನಗಳನ್ನು ಏರಲು ಶುರು ಮಾಡಿದರು, ಸ್ಥಳದಲ್ಲಿ ಅಶ್ರುವಾಯು ವಾಹನಗಳನ್ನು ಸಹ ನಿಯೋಜಿಸಲಾಗಿತ್ತು.
ಹರಿಯಾಣದ ಹಲವು ಭಾಗಗಳಲ್ಲಿ ಇರುವ ಧಾನ್ಯ ಮಾರುಕಟ್ಟೆಗಳಲ್ಲಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಹಲವು ಜಿಲ್ಲೆಗಳಲ್ಲಿ ಆಡಳಿತಾರೂಢ ಬಿಜೆಪಿ-ಜನನಾಯಕ್ ಜನತಾ ಪಕ್ಷದ ಮೈತ್ರಿಯ ಶಾಸಕರ ಮನೆಗಳ ಎದುರಿಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
|
ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ
ಹರಿಯಾಣದ ಜಜ್ಜಾರ್ನಲ್ಲಿ ಉಪ ಮುಖ್ಯಮಂತ್ರಿ ದುಷ್ಯಂತ ಚೌತಾಲಾ ಕಾರ್ಯಕ್ರಮದ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಹಂತದಲ್ಲಿ ಶುಕ್ರವಾರ ಪೊಲೀಸರು ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಸಂಘರ್ಷ ನಡೆಯಿತು. ರೈತರನ್ನು ತಡೆಯಲು ಜಲಫಿರಂಗಿ ಪ್ರಯೋಗಿಸಲಾಗಿತ್ತು. ತದನಂತರದಲ್ಲಿ ನಡದ ನಾಟಕೀಯ ಬೆಳವಣಿಗೆಯಲ್ಲಿ ಪುರುಷರು ಮತ್ತು ಮಹಿಳೆಯರು ಎನ್ನದೇ ಪೊಲೀಸ್ ಬ್ಯಾರಿಕೇಡ್ ಅನ್ನು ತಳ್ಳಿ ನುಗ್ಗಲು ಪ್ರಯತ್ನಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಡಿಸಿಎಂ ದುಷ್ಯಂತ್ ಚಾತಾಲಾ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಯಿತು.

ಹರಿಯಾಣದಲ್ಲಿ ಎರಡನೇ ಬಾರಿ ನಡೆದ ಸಂಘರ್ಷ
ಹರಿಯಾಣದಲ್ಲಿ ಪೊಲೀಸರು ಮತ್ತು ರೈತರ ನಡುವೆ ನಡೆಯುತ್ತಿರುವ ಸಂಘರ್ಷ ಇದೇ ಮೊದಲೇನೂ ಅಲ್ಲ. ಶುಕ್ರವಾರ ನಡೆದ ಸಂಘರ್ಷ ಎರಡೇ ಬಾರಿ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಲ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕ್ರಮದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ರೈತರ ಮೇಲೆ ಲಾಠಿಚಾರ್ಜ್ ನಡೆಸಿ ಜಲಫಿರಂಗಿ ಪ್ರಯೋಗಿಸಿದ್ದರು. ಪೊಲೀಸರು ಮತ್ತು ರೈತರ ನಡುವೆ ನಡೆದ ಸಂಘರ್ಷದಲ್ಲಿ 10 ಮಂದಿ ಪ್ರತಿಭಟನಾನಿರತ ರೈತರು ಗಾಯಗೊಂಡಿದ್ದರು.

"ರೈತರ ತಲೆ ಒಡೆಯಿರಿ" ಎಂದು ಕರೆ ನೀಡಿದ್ದ ಅಧಿಕಾರಿ
ಈ ಹಿಂದೆ ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ, "ಬ್ಯಾರಿಕೇಡ್ ಹಾಕಿರುವ ಪ್ರದೇಶದಿಂದ ಒಬ್ಬರೇ ಒಬ್ಬ ಪ್ರತಿಭಟನಾನಿರತ ರೈತರು ಒಳಗೆ ಬರುವಂತಿಲ್ಲ. ಇದು ತುಂಬಾ ಸರಳ ಮತ್ತು ಸ್ಪಷ್ಟವಾದ ಸಂದೇಶವಾಗಿದೆ. ಅಲ್ಲಿಗೆ ತಲುಪಲು ಯಾರೊಬ್ಬರಿಗೂ ಅನುಮತಿ ಅಥವಾ ಅವಕಾಶ ನೀಡಬಾರದು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಗಡಿಯನ್ನು ದಾಟಿ ಪ್ರವೇಶಿಸಿದರೆ ನಿಮ್ಮ ಲಾಠಿಗಳನ್ನು ಕೈಗೆತ್ತಿಕೊಳ್ಳಿ ಹಾಗೂ ಅವರಿಗೆ ಬಲವಾಗಿ ಹೊಡೆಯಿರಿ. ಇದು ಬಹಳ ಸ್ಪಷ್ಟವಾಗಿದ್ದು, ಯಾವುದೇ ನಿರ್ದೇಶನಕ್ಕಾಗಿ ಎದುರು ನೋಡುವ ಅಗತ್ಯವಿಲ್ಲ. ಅವರ ಮೇಲೆ ಬಲವಾಗಿ ಹೊಡೆಯಿರಿ. ಒಂದು ವೇಳೆ ನಾನು ಇಲ್ಲಿ ಪ್ರತಿಭಟನಾನಿರತರನ್ನು ನೋಡಿದರೆ, ಅವರ ತಲೆಯನ್ನು ಒಡೆದುಕೊಂಡಿರಬೇಕು. ಅವರ ತಲೆಯನ್ನು ಒಡೆಯುವಷ್ಟು ಬಲವಾಗಿ ನೀವು ಹೊಡೆಯಬೇಕು," ಎಂದು ಸಿನ್ಹಾ ಹೇಳಿಕೆ ನೀಡಿದರೆ ಪೊಲೀಸ್ ಸಿಬ್ಬಂದಿ ಅದಕ್ಕೆ ಸರಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರೈತರ ಹೋರಾಟದ ಪರಿ ಮತ್ತು ಕೃಷಿ ಕಾಯ್ದೆಗಳು
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಕಳೆದ 2020ರ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications