ಇದೀಗ ಹೊಸ ಟ್ರೆಂಡ್, ಚೆಂಡು ಹೂ ಜೊತೆ ಪ್ರವಾಸಿಗರ ಸೆಲ್ಫಿ!
ಚಾಮರಾಜನಗರ, ಆಗಸ್ಟ್ 8: ಇತ್ತೀಚೆಗೆ ಗುಂಡ್ಲುಪೇಟೆ ಬಳಿಯ ಬೇಗೂರಿನಲ್ಲಿ ಸೂರ್ಯಕಾಂತಿ ಬೆಳೆದಿದ್ದ ರೈತನೊಬ್ಬ ಹೂಗಳ ನಡುವೆ ನಿಂತು ಸೆಲ್ಫಿ ತೆಗೆಯಿಸಿಕೊಳ್ಳುವವರಿಗೆ ಶುಲ್ಕ ವಿಧಿಸಿ ಒಂದಷ್ಟು ಕಾಸು ಮಾಡುತ್ತಿದ್ದದ್ದು ಸುದ್ದಿಯಾಗಿತ್ತು.
ಸೂರ್ಯಕಾಂತಿಯ ಈ ತೋಟದಲ್ಲಿ ಸೆಲ್ಫಿ ತಗೊಳಕ್ಕೆ ಜಸ್ಟ್ 20 ರುಪೀಸ್
ಪ್ರವಾಸಿಗರಿಗೂ ಕೂಡ ಸುಂದರ ಹೂಗಳ ಲೋಕದಲ್ಲಿ ವಿಹರಿಸುತ್ತಾ ಸೆಲ್ಫಿ ತೆಗೆದುಕೊಳ್ಳುವುದು ಇಷ್ಟವಾಗುವುದರಿಂದ ಹತ್ತೋ ಇಪ್ಪತ್ತೋ ನೀಡಲು ಹಿಂದೇಟು ಹಾಕುತ್ತಿರಲಿಲ್ಲ.
ಅವತ್ತು ಸೂರ್ಯಕಾಂತಿ ಹೂ ಬೆಳೆದಿದ್ದ ರೈತ ಸೆಲ್ಫಿಗೆ ಶುಲ್ಕ ವಿಧಿಸಿ ಹಣ ಸಂಪಾದಿಸಿದ್ದನ್ನು ನೋಡಿದ ಚೆಂಡು ಹೂವು ಬೆಳೆದ ಜಮೀನಿನ ಮಾಲೀಕರು ಕೂಡ ಅದೇ ಹಾದಿ ಹಿಡಿದಿರುವುದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮದ್ದೂರು, ಚನ್ನಮಲ್ಲೀಪುರ ಗ್ರಾಮಗಳಲ್ಲಿ ಕಂಡುಬರುತ್ತಿದೆ.
ಕಣ್ಣು ಹಾಯಿಸುವ ಉದ್ದಕ್ಕೂ ಹಳದಿ ಹೂವು
ರಾಷ್ಟ್ರೀಯ ಹೆದ್ದಾರಿ 766ರ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮದ್ದೂರು, ಚನ್ನಮಲ್ಲೀಪುರ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಚೆಂಡುಮಲ್ಲಿಗೆಯನ್ನು ಬೆಳೆದಿದ್ದಾರೆ. ಅವು ಈಗ ಹೂವು ಬಿಟ್ಟಿವೆ. ಕಣ್ಣು ಹಾಯಿಸುವ ಉದ್ದಕ್ಕೂ ಹಳದಿ ಬಣ್ಣದಿಂದ ಸುಂದರವಾಗಿ ಕಂಗೊಳಿಸುತ್ತಿವೆ.
ಈ ಸುಂದರ ದೃಶ್ಯವನ್ನು ಕಂಡ ವಾಹನಗಳಲ್ಲಿ ತೆರಳುವ ಪ್ರವಾಸಿಗರು ವಾಹನವನ್ನು ನಿಲ್ಲಿಸಿ ಸೆಲ್ಫಿ ಅಥವಾ ಸಾಮೂಹಿಕ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಹಾತೊರೆಯುತ್ತಾರೆ.
ಪ್ರವಾಸಿಗರು ಮೊದಲಿನಂತೆ ಜಮೀನಿನ ಮಧ್ಯೆ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡದ ರೈತರು, ಇಂತಿಷ್ಟು ಶುಲ್ಕ ಕೇಳುತ್ತಾರೆ. ಒಂದು ವೇಳೆ ಅವರು ಹೇಳಿದ ಹಣವನ್ನು ನೀಡಿದರೆ ತಮ್ಮ ಜಮೀನಿನೊಳಗೆ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ. ಸದ್ಯ 10 ರಿಂದ 50 ರುಪಾಯಿವರೆಗೂ ಶುಲ್ಕ ವಿಧಿಸುತ್ತಿದ್ದಾರೆ.
ನಿತ್ಯವೂ ಸಾವಿರಾರು ಪ್ರವಾಸಿಗರು
ಈ ಹೆದ್ದಾರಿ ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವುದರಿಂದ ನಿತ್ಯವೂ ಸಾವಿರಾರು ಪ್ರವಾಸಿಗರು ವಾಹನಗಳಲ್ಲಿ ಸಂಚರಿಸುತ್ತಾರೆ. ಅದರಲ್ಲೂ ದೂರದಿಂದ ಬರುವ ಯುವಕ, ಯುವತಿಯರಂತೂ ಜಮೀನು ತುಂಬಾ ಓಡಾಡಿ ತಮಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ.
ಇದೀಗ ಈ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಭೂತಾಯಿಯುಟ್ಟ ಸೀರೆಗೆ ಚಿನ್ನದ ಝರಿಯಿಟ್ಟಂತೆ ಕಾಣುವ ಹಳದಿ ಬಣ್ಣದ ಚೆಂಡು ಹೂವುಗಳು, ಅದರೊಳಗೆ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆದುಕೊಳ್ಳುವ, ವೀಡಿಯೊ ಮಾಡುವ ಯುವಕ, ಯುವತಿಯರು, ಕುಟುಂಬದ ಸದಸ್ಯರು, ಮಕ್ಕಳು ಕಂಡುಬರುತ್ತಾರೆ.
ಸದ್ಯಕ್ಕೆ ಜಮೀನಿನಲ್ಲಿ ಹೂವು ಅರಳಿದ್ದು ಅದು ಕೊಯ್ಲು ಮಾಡುವವರೆಗೂ ಸೌಂದರ್ಯ ಸೂಸುತ್ತಲೇ ಇರುತ್ತವೆ. ಹೀಗಾಗಿ ರೈತರಿಗೆ ಸದ್ಯಕ್ಕೆ ಒಂದಷ್ಟು ಆದಾಯ ಬರುವುದಂತೂ ಸತ್ಯ.