ಕೊಳ್ಳೇಗಾಲ: KSRTC ಬಸ್ ಡಿಕ್ಕಿಯಾಗಿ ಗರ್ಭಿಣಿ ಸಾವು
ಚಾಮರಾಜನಗರ, ಆಗಸ್ಟ್, 07: ಸಾರಿಗೆ ( KSRTC) ಬಸ್ ಡಿಕ್ಕಿಯಾಗಿ ಗರ್ಭಿಣಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಬುಧವಾರ (ಆಗಸ್ಟ್ 07) ಸಂಜೆ ನಡೆದಿದೆ. ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ನಮಿತಾ (22) ಮೃತ ದುರ್ದೈವಿ. ಇವರು 3 ತಿಂಗಳ ಗರ್ಭಿಣಿಯಾಗಿದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗೆ ಬಂದಿದ್ದರು. ರಸ್ತೆ ದಾಟುವಾಗ ಅತಿವೇಗದಿಂದ ಬಂದ ಬಸ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳುದುಬಂದಿದೆ.
ಇನ್ನು ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಹಾಗೂ ಮೃತ ಯುವತಿಯ ಸಂಬಂಧಿಕರು ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಬಸ್ ಚಾಲಕರು ಯಾವುದೇ ಜಾಗರುಕತೆ ಇಲ್ಲದೇ ಅತಿವೇಗವಾಗಿ ಬಸ್ ಚಲಾಯಿಸುತ್ತಾರೆ. ಈ ರೀತಿ ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸುತ್ತಿವೆ. ಬ್ಯಾರಿಕೇಡ್ ಇಲ್ಲವೆ, ಹಂಪ್ಸ್ ಅಳವಡಿಸುವಂತೆ ನಾಲ್ಕು ತಿಂಗಳಗಳಿಂದ ಪೊಲೀಸ್ ಇಲಾಖೆ ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದರು.

ಕೊಳ್ಳೇಗಾಲ ಬಸ್ ಡಿಪೋ ವ್ಯವಸ್ಥಾಪಕ ಶಂಕರ್ ಘಟನಾ ಸ್ಥಳಕ್ಕೆ ಆಗಮಿಸಿ ಯುವತಿಯ ಸಾವಿಗೆ ಸಂತಾಪ ಸೂಚಿಸಿ ಪರಿಹಾರದ ಹಣವಾಗಿ 25,000 ರೂಪಾಯಿ ಅಂತ್ಯಸಂಸ್ಕಾರದ ಹಣ ನೀಡಿದರು. ಚಾರ್ಜ್ ಶೀಟ್ ಆದ ಬಳಿಕ 25,000 ರೂಪಾಯಿ ನೀಡಲಾಗುವುದು.
ಅನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಮತ್ತೊಂದೆಡೆ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಮಾಡುತ್ತಿದ್ದವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಕಾನ್ಸ್ಟೇಬಲ್ ಮೇಲೆ ಹಲ್ಲೆ: ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಿಎಂಟಿಸಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಯನ್ನು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಲ್ಲಿ ನಡೆದಿದೆ.
ಮಹೇಶ್ ಕುಮಾರ್(45) ಬಂಧಿತ ವ್ಯಕ್ತಿಯಾಗಿದ್ದು, ಯಳಂದೂರು ಠಾಣೆಯ ಅನ್ಸರ್ ಪಾಷಾ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಮಹದೇಶ್ವರ ಜಾತ್ರೆ ಹಿನ್ನೆಲೆ ಯಳಂದೂರು ಬಸ್ ನಿಲ್ದಾಣದಲ್ಲಿ ಅನ್ಸರ್ ಪಾಷಾ ಅವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಕುಡಿದು ವ್ಯಕ್ತಿಯೊಬ್ಬರು ಗಲಾಟೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆ ಸ್ಥಳಕ್ಕೆ ತೆರಳಿ ಮಹೇಶ್ ಅವರನ್ನು ಅನ್ಸರ್ ಪಾಷಾ ವಿಚಾರಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ, ಯಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಹಲ್ಲೆಗೊಳಗಾದ ಕಾನ್ಸ್ಟೇಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.












Click it and Unblock the Notifications