ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಮುನಿಸು ಬಿಜೆಪಿಗೆ ವರದಾನವಾಗುತ್ತಾ?
ಚಾಮರಾಜನಗರ, ಏಪ್ರಿಲ್ 19: ಕಳೆದ ವರ್ಷ ನಡೆದ ಉಪಚುನಾವಣೆ ವೇಳೆ ಇಡೀ ರಾಜ್ಯದಾದ್ಯಂತ ಗಮನಸೆಳೆದಿತ್ತು. ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಹೃದಯಾಘಾತದಿಂದ ಮೃತಪಟ್ಟ ಹಿನ್ನಲೆಯಲ್ಲಿ ಅವರ ಪತ್ನಿ ಗೀತಾಮಹದೇವಪ್ರಸಾದ್ ಅವರು ಕಣಕ್ಕಿಳಿದಿದ್ದರು. ಅವರ ಪರವಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಮತ್ತು ಇಡೀ ಸರ್ಕಾರವೇ ನಿಂತಿದ್ದರಿಂದ ಗೆಲುವು ಅನಾಯಸವಾಗಿತ್ತು.
ಸೋಮಣ್ಣ vs ನಿರಂಜನ್ ಕುಮಾರ್! ಗುಂಡ್ಲುಪೇಟೆ ಬಿಜೆಪಿಯಲ್ಲಿ ಜಂಗಿಕುಸ್ತಿ!
ಇದೀಗ ಮತ್ತೆ ಚುನಾವಣೆ ಬಂದಿದೆ. ಈ ಬಾರಿಯೂ ಗೀತಾ ಮಹದೇವಪ್ರಸಾದ್ ಅದೇ ಹಳೆಯ ಸ್ಪರ್ಧಿ ಬಿಜೆಪಿಯ ಸಿ.ಎಸ್.ನಿರಂಜನ್ ಕುಮಾರ್ ವಿರುದ್ಧ ಸೆಣಸಾಡಲೇ ಬೇಕಾಗಿದೆ. ಈ ಬಾರಿ ಗೀತಾ ಮಹದೇವಪ್ರಸಾದ್ ತಮ್ಮ ಸ್ವಂತ ಬಲದಿಂದ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಒಂದೆರಡು ಬಾರಿ ರಾಜ್ಯ ಮುಖಂಡರು ಕ್ಷೇತ್ರಕ್ಕೆ ಬರಬಹುದು. ಒಂದಿಷ್ಟು ಪ್ರಚಾರ ನಡೆಸಬಹುದು ಅಷ್ಟೆ. ಉಳಿದಂತೆ ಇಲ್ಲಿ ಗೀತಾ ಮಹದೇವಪ್ರಸಾದ್ ಅವರೇ ಮತದಾರರ ಮನಸೆಳೆದು ಮತಪಡೆಯಬೇಕಾಗಿದೆ. ಮೊದಲ ಬಾರಿಗೆ ಚುನಾವಣೆ ಎದುರಿಸಿ, ಸಚಿವೆಯಾಗಿಯೂ ಅಧಿಕಾರ ಅನುಭವಿಸಿದ ಅವರನ್ನು ಈ ಬಾರಿ ಕ್ಷೇತ್ರದ ಜನ ಆರಿಸುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ.
ಕಾಂಗ್ರೆಸ್ ನಲ್ಲಿ ಶೀತಲ ಸಮರ
ಈಗಾಗಲೇ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಶೀತಲ ಸಮರ ಆರಂಭವಾಗಿದೆ. ಎಚ್.ಎಸ್.ಮಹದೇವಪ್ರಸಾದ್ ನಂತರದ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಕಾರಣ ಉಪಚುನಾವಣೆಯಲ್ಲಿ ಜಯಗಳಿಸಿದ ಡಾ.ಗೀತಾ ಮಹದೇವಪ್ರಸಾದ್ ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದರೆ, ಇದೀಗ ಅವರ ಪುತ್ರ ಗಣೇಶ್ ಪ್ರಸಾದ್ ಕಾರ್ಯಕರ್ತರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳತೊಡಗಿದ್ದಾರೆ. ಇದರಿಂದ ಇತರ ನಾಯಕರ ಆಟ ಅಲ್ಲಿ ನಡೆಯದಂತಾಗಿದೆ. ಇದು ಒಂದಷ್ಟು ಮುಖಂಡರಿಗೆ ಇರಿಸುಮುರಿಸು ತಂದಿದೆ.
ಚಾಮರಾಜನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು
ಕುಟುಂಬ ರಾಜಕಾರಣದ ಬಗ್ಗೆ ಅಸಮಾಧಾನ
ಪಕ್ಷಕ್ಕಾಗಿ ದುಡಿದ ತಮ್ಮನ್ನು ಮೂಲೆಗುಂಪು ಮಾಡಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಅಸಮಾಧಾನವೂ ಇದೆ. ಮೂಲಗಳ ಪ್ರಕಾರ ವಿ.ಸೋಮಣ್ಣ ಅವರು ಕ್ಷೇತ್ರದಿಂದ ಸ್ಪರ್ಧಿಸಿದ್ದೇ ಆದರೆ ಒಂದಷ್ಟು ಮುಖಂಡರು ಬಿಜೆಪಿಯತ್ತ ಮುಖ ಮಾಡುವ ಆಲೋಚನೆಯಲ್ಲಿದ್ದರಂತೆ. ಆದರೆ ಸೋಮಣ್ಣ ಅವರು ಸ್ಪರ್ಧಿಸಲು ಕ್ಷೇತ್ರದ ಬಿಜೆಪಿಯಲ್ಲಿಯೇ ವಿರೋಧವಿದ್ದುದರಿಂದ ಅದು ಸಾಧ್ಯವಾಗಲಿಲ್ಲ.
ಬಿಜೆಪಿಯತ್ತ ಒಲವು
ಈಗಾಗಲೇ ಒಂದಷ್ಟು ಮುಖಂಡರು ಬಿಜೆಪಿಗೆ ಸೇರುವ ತವಕದಲ್ಲಿದ್ದರೆ ಅವರಲ್ಲಿ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುತ್ರ ಎಚ್.ಎನ್.ನಟೇಶ್, ಪುರಸಭಾಧ್ಯಕ್ಷ ಪಿ.ಗಿರೀಶ್ ಹಾಗೂ ಸುಮಾರು 12 ಜನ ಸದಸ್ಯರು ಬಿಜೆಪಿಯತ್ತ ಮುಖಮಾಡಲಿದ್ದಾರೆ ಎನ್ನಲಾಗುತ್ತಿದೆ. ಅವರ ಮನವೊಲಿಸುವ ಪ್ರಯತ್ನದಲ್ಲಿ ಗೀತಾಮಹದೇವಪ್ರಸಾದ್ ಇದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಮೇಲಿಂದ ಮೇಲೆ ಸೋಲನ್ನು ಅನುಭವಿಸುತ್ತಾ ಹೆಚ್.ಎಸ್.ಮಹದೇವಪ್ರಸಾದ್ ಅವರಿಗೆ ಸ್ಪರ್ಧೆ ನೀಡಿದವರು. ಈ ಬಾರಿ ಗೀತಾಮಹದೇವಪ್ರಸಾದ್ ಅವರಿಗೆ ಸ್ಪರ್ಧೆ ನೀಡಲು ತಯಾರಾಗಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಸೋತರೂ ಧೃತಿಗೆಡದೆ ಅಲ್ಲಿಂದ ಇಲ್ಲಿವರೆಗೆ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದಾರೆ. ಗ್ರಾಮ ವಾಸ್ತವ್ಯ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳ ಮೂಲಕ ಮತದಾರರ ಬಾಗಿಲು ತಟ್ಟಿದ್ದಾರೆ.
ಕಾಂಗ್ರೆಸ್ ಮನಸ್ತಾಪ
ಸೋಲಿನ ಅನುಕಂಪ, ಕಾಂಗ್ರೆಸ್ ನಲ್ಲಿನ ಮನಸ್ತಾಪ, ಕ್ಷೇತ್ರದ ಮತದಾರರೊಂದಿಗಿನ ಒಡನಾಟ ಗೆಲುವಿಗೆ ಸಹಕಾರವಾಗುತ್ತದೆ ಎನ್ನುವುದು ಅವರ ನಿರೀಕ್ಷೆಯಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಡುವುದಂತು ಸತ್ಯ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಒಂದಷ್ಟು ಬೆಳವಣಿಗೆಗಳು ನಡೆಯಲಿದ್ದು ಅದು ಯಾರಿಗೆ ಅನುಕೂಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.