ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!
ಚಾಮರಾಜನಗರ, ಜೂನ್ 7: ಈಗಾಗಲೇ ಜಿಲ್ಲೆಯಾದ್ಯಂತ ಮಳೆ ಸುರಿದ ಕಾರಣ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿಕೊಂಡಿದೆ. ಆದರೆ ಹನೂರು ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ನೀರು ಹರಿದು ಬರುವ ಮೂಲವೇ ಮುಚ್ಚಿಹೋಗಿದ್ದು ಅದನ್ನು ದುರಸ್ತಿಗೊಳಿಸದ ಕಾರಣದಿಂದ ಕೆರೆಗಳು ತುಂಬುತ್ತಿಲ್ಲ.
ಹನೂರು ತಾಲೂಕಿನಲ್ಲಿರುವ ಕೆರೆಗಳು ಈ ಬಾರಿಯ ಬೇಸಿಗೆಯಲ್ಲಿ ಬತ್ತಿಹೋಗಿ ಜನಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ತದನಂತರ ಮೇ ತಿಂಗಳ ಕೊನೆಯಲ್ಲಿ ಮಳೆ ಬಂದಿದ್ದರಿಂದ ಒಂದಷ್ಟು ಕೆರೆಗಳಲ್ಲಿ ನೀರು ಸಂಗ್ರಹವಾಗಿತ್ತು.[ಬಂಡೀಪುರದಲ್ಲಿ ಕಾಡಾನೆಗಳ ಪುಂಡಾಟ ತಡೆಗೆ ಬ್ಯಾರಿಕೇಡ್!]
ಬೇಸಿಗೆಯಲ್ಲಿ ಹೂಳೆತ್ತಿದ ಕಾರಣದಿಂದ ಕೆಲವೊಂದು ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬಂದರೆ ಇನ್ನಷ್ಟು ನೀರು ಸಂಗ್ರಹವಾಗುವುದರಿಂದ ಕೃಷಿಕರಿಗೂ ಅನುಕೂಲವಾಗಿದೆ. ಆದರೆ ಕಾಮಗೆರೆಯಲ್ಲಿ ಇರುವ ಕೆರೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಲ್ಲದೆ, ಜಲಮೂಲಗಳನ್ನೇ ಮುಚ್ಚಿಬಿಟ್ಟಿರುವುದರಿಂದ ಮಳೆ ನೀರು ಹರಿದು ಕೆರೆಯನ್ನು ಸೇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಕಾಮಗೆರೆ ಗ್ರಾಮದ ಪಶು ಆಸ್ಪತ್ರೆಯ ಹಿಂಭಾಗ ಎರಡು ಕೆರೆಗಳಿದ್ದು, ಈ ಕೆರೆಗಳಿಗೆ ನೀರು ಹರಿದು ಬರಲು ಇರುವ ಕಾಲುವೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿರುವುದರಿಂದ ಇಲ್ಲಿ ಸಾಕಷ್ಟು ಮಳೆಯಾದರೂ ಕೆರೆ ಮಾತ್ರ ತುಂಬಿಲ್ಲ.[ಗುಂಡ್ಲುಪೇಟೆ: ಬರಿದಾದ ಕೆರೆಗಳಲ್ಲೀಗ ಜೀವಜಲ]
ಗುಂಡಾಲ್ ಜಲಾಶಯದ ಬಲದಂಡೆ ಕಾಲುವೆಯಿಂದ ಹರಿದು ಬರುವ ನೀರಿಗೆ ಕಾಮಗೆರೆ ಹೋಲಿಕ್ರಾಸ್ ಅಸ್ಪತ್ರೆಯ ಹಿಂಭಾಗ ಕಿರು ಕಾಲುವೆಯ ಸಂಪರ್ಕ ಮಾಡಲಾಗಿದ್ದು, ಈ ಕಾಲುವೆ ಸುಮಾರು ಒಂದು ಕಿ.ಮೀ. ಇದ್ದು ಗ್ರಾಮದ ಬೀದಿಯ ಒಳಗಡೆ ಹಾದು ಹೋಗುತ್ತದೆ. ಹೀಗಾಗಿ ಕಾಲುವೆಯುದ್ದಕ್ಕೂ ಜಮೀನು, ಮನೆಗಳು ಇರುವುದರಿಂದ ಕೆಲವರು ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ನೀರು ಸಾರಾಗವಾಗಿ ಹರಿದು ಕೆರೆಗೆ ಬರುತ್ತಿಲ್ಲ.
ಮಾಜಿ ಶಾಸಕಿ ಪರಿಮಳ ನಾಗಪ್ಪರವರ ಅವಧಿಯಲ್ಲಿ ಈ ಕಾಲುವೆಯನ್ನು ದುರಸ್ತಿ ಮಾಡಲಾಗಿತ್ತಾದರೂ ನಂತರದ ದಿನಗಳಲ್ಲಿ ಇದರತ್ತ ಗಮನಹರಿಸದ ಕಾರಣದಿಂದಾಗಿ ಕಾಲುವೆ ದುಸ್ಥಿತಿಗೀಡಾಗಿದೆ. ಇನ್ನು ಮುಂದೆಯಾದರೂ ಈ ಕೆರೆಗಳತ್ತ ಗಮನಹರಿಸಿ ಮಳೆಗಾಲದಲ್ಲಿ ನೀರು ಶೇಖರಣೆಯಾಗುವಂತೆ ನೋಡಿಕೊಂಡರೆ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ತಡೆಯಲು ಸಾಧ್ಯವಿದೆ.