ಬಂಡೀಪುರದಲ್ಲಿ ಕಾಡಾನೆಗಳ ಪುಂಡಾಟ ತಡೆಗೆ ಬ್ಯಾರಿಕೇಡ್!
ಗುಂಡ್ಲುಪೇಟೆ ಸುತ್ತಲಿನ ಪ್ರದೇಶಗಳಲ್ಲಿ ಆನೆ ಹಾವಳಿ ತಡೆಗಟ್ಟಲು ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.
ಚಾಮರಾಜನಗರ, ಜೂನ್ 6: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಕಾಡಂಚಿನ ಜನ ಇದುವರೆಗೆ ಕಾಡಾನೆಗಳ ಭಯದಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದ ದುರವಸ್ಥೆ ದೂರಾಗಿದೆ. ಇದೀಗ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಯಿಂದ ಬ್ಯಾರಿಕೇಡ್ ಅಳವಡಿಸುವ ಮೂಲಕ ಕಾಡಿನಿಂದ ನಾಡಿನತ್ತ ನುಗ್ಗುತ್ತಿದ್ದ ಕಾಡಾನೆಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ.
ಬಂಡೀಪುರದ ಓಂಕಾರ್ ವಲಯದಲ್ಲಿ ಅರಣ್ಯ ಇಲಾಖೆ ಈಗಾಗಲೇ ಸುಮಾರು 10.5 ಕಿಲೋ ಮೀಟರ್ ಉದ್ದ ರೈಲ್ವೇ ಕಂಬಿಯನ್ನು ಅಳವಡಿಸಿದ್ದು, ಆ ಮೂಲಕ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುವ ಯತ್ನವನ್ನು ಮಾಡಲಾಗಿದೆ. ಇದು ಕಾಡಂಚಿನ ರೈತರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಿದೆ.[ಎಲುಬಿನ ಹಂದರದಂತಾಗಿದ್ದ ಬಂಡೀಪುರದ ಆನೆ, ನಿಶ್ಶಕ್ತಿಯಿಂದ ಸಾವು]
ಈ ವ್ಯಾಪ್ತಿಯಲ್ಲಿನ ಹೆಚ್ಚಿನ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಕಷ್ಟಪಟ್ಟು ಕೃಷಿ ಮಾಡಿದರೂ ಫಸಲು ಬರುವ ವೇಳೆಗೆ ಕಾಡಾನೆಗಳು ನುಗ್ಗಿ ಫಸಲನ್ನು ಧ್ವಂಸ ಮಾಡುತ್ತಿದ್ದವು. ಇದರಿಂದ ರೈತರು ತೊಂದರೆಗೀಡಾಗುತ್ತಿದ್ದರು. ಆಗಾಗ್ಗೆ ವನ್ಯಪ್ರಾಣಿ ಮತ್ತು ಮಾನವರ ನಡುವೆ ಸಂಘರ್ಷವೂ ಏರ್ಪಡುತ್ತಿತ್ತು. ಈಗ ರೈಲ್ವೆ ಕಂಬಿಯ ಬ್ಯಾರಿಕೇಡ್ ನಿರ್ಮಿಸಿದ್ದರಿಂದ ಕಾಡಾನೆ ಮತ್ತು ಮಾನವನ ಸಂಘರ್ಷಕ್ಕೆ ತಡೆ ಬೀಳಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.[ಆರಡಿ ಎತ್ತರದ ಬ್ಯಾರಿಕೇಡ್ ದಾಟಿದ ಜಂಪಿಂಗ್ ಸ್ಟಾರ್ ಜಂಬೋ!]
ಬಂಡೀಪುರದ ಓಂಕಾರ್ ಅರಣ್ಯ ವಲಯದಿಂದಲೇ ಕಾಡಾನೆಗಳು ಹೆಚ್ಚಾಗಿ ಹೊರ ಬರುತ್ತಿದ್ದವಲ್ಲದೆ, ಎಲ್ಲೆಂದರಲ್ಲಿ ಓಡಾಡುತ್ತಾ ನಂಜನಗೂಡು, ಮೈಸೂರು ಜಿಲ್ಲೆಯತ್ತ ಧಾಂಗುಡಿಯಿಟ್ಟು ರೈತರ ಬೆಳೆಯನ್ನೆಲ್ಲ ತುಳಿದು, ತಿಂದು ನಾಶ ಮಾಡುತ್ತಿದ್ದವು. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿತ್ತು.
ಇದನ್ನೆಲ್ಲ ಮನಗಂಡ ಅರಣ್ಯ ಇಲಾಖೆ ಕಾಡಾನೆಗಳು ಅರಣ್ಯದಿಂದ ಹೊರ ಹೋಗದಂತೆ ತಡೆಯುವ ಸಲುವಾಗಿ ಕಾಡಂಚಿನಲ್ಲಿ ಕಂದಕ, ಸೋಲಾರ್ ಬೇಲಿಯನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೆಳೆ ನಾಶದ ಬಾಬ್ತು ಸುಮಾರು 40 ಲಕ್ಷ ರೂ.ಗಳನ್ನು ಅರಣ್ಯ ಇಲಾಖೆ ವಾರ್ಷಿಕವಾಗಿ ವಿತರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.[ರಾಂಪುರ ಕಾಡಿನಲ್ಲಿ ಬವಣೆಯ ಬದುಕು ನಡೆಸುತ್ತಿರುವ ಕಾವಡಿಗಳು]
ಇದೀಗ ಇದಕ್ಕೆಲ್ಲ ಇತಿಶ್ರೀ ಹಾಡುವ ಸಲುವಾಗಿ 10.5 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಈ ಹಿಂದೆ ಅರಣ್ಯ ಇಲಾಖೆ ಆನೆಗಳು ನಾಡಿನತ್ತ ದಾಟುವ ಸ್ಥಳಗಳಲ್ಲಿ ಸಿಮೆಂಟ್ ಫಿಲ್ಲರ್ಗಳನ್ನು ಅಳವಡಿಸಿದ್ದರೂ ಅವುಗಳನ್ನು ಕೆಡವಿ ಹೊರಹೋಗುತ್ತಿದ್ದವು. ಹೀಗಿರುವಾಗ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣದ ಹೊಸ ಪ್ರಯತ್ನದಿಂದ ಆನೆಗಳು ಅರಣ್ಯದಿಂದ ಹೊರ ಹೋಗದೆ ಉಳಿಯುತ್ತವೆಯೋ ಅಥವಾ ಅದನ್ನು ಕಿತ್ತೆಸೆದು ಹೊರ ಹೋಗುವ ಹೊಸ ತಂತ್ರಗಳನ್ನು ಕಂಡು ಹಿಡಿಯುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.
ಒಂದು ವೇಳೆ ಇಲ್ಲಿ ಮಾಡಿರುವ ಯೋಜನೆ ಯಶಸ್ವಿಯಾದರೆ ಮುಂದೆ ಬೇರೆಡೆಗೂ ಇದನ್ನು ವಿಸ್ತರಿಸುವ ಸಾಧ್ಯತೆಯಿದೆ.
ಈ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ರೈಲ್ವೆ ಕಂಬಿ ಅಳವಡಿಕೆಯಿಂದ ಕಾಡಾನೆಗಳ ಹಾವಳಿಗೆ ತಡೆ ಬಿದ್ದರೆ ಅವರು ನೆಮ್ಮದಿಯಾಗಿ ಕೃಷಿ ಮಾಡಲು ಸಾಧ್ಯವಾಗಬಹುದೇನೋ?