ಎಲುಬಿನ ಹಂದರದಂತಾಗಿದ್ದ ಬಂಡೀಪುರದ ಆನೆ, ನಿಶ್ಶಕ್ತಿಯಿಂದ ಸಾವು
ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆಯಲ್ಲಿ ನಡೆದಿದೆ.
ಚಾಮರಾಜನಗರ, ಮೇ 29: ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆಯಲ್ಲಿ ನಡೆದಿದೆ.
ಈ ಆನೆಯ ಸಾವಿಗೆ ಮೇವು ಹಾಗೂ ನೀರಿನ ಕೊರತೆಯೇ ಕಾರಣ ಎನ್ನಲಾಗಿದೆ. ಸುಮಾರು 30 ವರ್ಷದ ಹೆಣ್ಣಾನೆ ಮೇ.27ರಂದು ಮೂಲೆಹೊಳೆ ವಲಯದಲ್ಲಿ ಅಸ್ವಸ್ಥಗೊಂಡು ಮೇಲೇಳಲಾಗದೆ ಮಲಗಿತ್ತು. ಕಳೆದ ಮೂರು ದಿನಗಳಿಂದ ಯಾವುದೇ ಆಹಾರ ಸೇವಿಸದ ಕಾರಣ ಸಂಪೂರ್ಣ ನಿತ್ರಾಣವಾಗಿತ್ತು.[ಬಂಡೀಪುರದಲ್ಲಿ ಆನೆ ಗಣತಿಗೆ ಸ್ವಯಂಸೇವಕರ ಸಾಥ್]

ಹೊಟ್ಟೆಯಲ್ಲಿ ಉಂಟಾಗಿರುವ ಹುಣ್ಣಿನಿಂದ ಆನೆಯು ಆಹಾರ ಸೇವಿಸಲಾಗದೆ ಅಸ್ವಸ್ಥವಾಗಿತ್ತು ಎನ್ನಲಾಗಿದೆ. ಹೀಗಾಗಿ ನಂತರ ರಾಂಪುರ ಆನೆಶಿಬಿರದಿಂದ ಸಾಕಾನೆಗಳನ್ನು ಕರೆಸಿ ಇವುಗಳ ನೆರವಿನಿಂದ ಆನೆಯನ್ನು ಮೇಲೆತ್ತಲು ಪ್ರಯತ್ನಿಸಿದರೂ ಯಾವುದೇ ಫಲಕಾರಿಯಾಗಲಿಲ್ಲ.
ಇದಕ್ಕೆ ಶಕ್ತಿ ಬರಲು ವೈದ್ಯರಾದ ಡಾ.ನಾಗರಾಜು ಅವರು ಗ್ಲೂಕೋಸ್ ಕಟ್ಟಿ ಕಬ್ಬು, ಬೆಲ್ಲ ಹಾಗೂ ಪೌಷ್ಟಿಕ ಆಹಾರವನ್ನು ನೀಡಿದ್ದರು. ಇದರಿಂದ ಚೇತರಿಸಿದಂತೆ ಕಂಡು ಬಂದಿದ್ದ ಆನೆ ಮೇಲೇಳಲು ಪ್ರಯತ್ನಿಸಿತಾದರೂ ಸಾಧ್ಯವಾಗಿರಲಿಲ್ಲ. ಈ ನಡುವೆ ಚೇತರಿಸಿಕೊಳ್ಳುತ್ತದೆ ಎಂದು ನಂಬಿದ್ದ ಅಧಿಕಾರಿಗಳಿಗೆ, ಆನೆ ಮತ್ತಷ್ಟು ಅಸ್ವಸ್ಥಗೊಂಡಿರುವುದು ಆತಂಕ ತಂದಿಟ್ಟಿದೆ. ಈ ನಡುವೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಮೇ.29ರಂದು ಬೆಳಿಗ್ಗೆ ಸಾವನ್ನಪ್ಪಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂಡೀಪುರ ಉಪವಿಭಾಗದ ಎಸಿಎಫ್ ಅಂಥೋನಿ ಮರಿಯಪ್ಪ ಹಾಗೂ ಹೆಡಿಯಾಲ ವಿಭಾಗದ ಎಸಿಎಫ್ ಕೆ.ಪರಮೇಶ್ ತೆರಳಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.












Click it and Unblock the Notifications