ಗುಂಡ್ಲುಪೇಟೆ: ಬರಿದಾದ ಕೆರೆಗಳಲ್ಲೀಗ ಜೀವಜಲ
ಬಂಡೀಪುರ ಅಭಯಾರಣ್ಯದಲ್ಲಿಯೂ ಮಳೆ ಅಭಾವದ ಬಿಸಿ ತಾಕಿತ್ತು. ಅರಣ್ಯದ ಬಹುತೇಕ ಕೆರೆಕಟ್ಟೆಗಳು ಖಾಲಿಯಾಗಿ ಪ್ರತಿನಿತ್ಯ ನೀರಿಗಾಗಿ ಪ್ರಾಣಿಗಳು ಪರಿತಪಿಸುವಂತಾಗಿತ್ತು. ಇದೀಗ ಉತ್ತಮ ಮಳೆಯಾಗಿರುವುದರಿಂದ ಕೆರೆಗಳು ತುಂಬಿವೆ.
ಗುಂಡ್ಲುಪೇಟೆಯಲ್ಲಿ ಯಾವುದೇ ನದಿ ಮೂಲ ಇಲ್ಲದೆ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡಬೇಕಾದ ಅನಿವಾರ್ಯತೆ ಮೊದಲಿನಿಂದಲೂ ಇದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದರು. ಕುಡಿಯುವ ನೀರಿಗೂ ಪರದಾಡುವಂತಾಗಿತ್ತು. ಅದರಲ್ಲೂ ಈ ಬಾರಿ ತಟ್ಟಿದ ತೀವ್ರ ಬರ ಜಾನುವಾರುಗಳನ್ನೇ ಮಾರುವಂತೆ ಮಾಡಿತ್ತು.
ಇನ್ನು ಬಂಡೀಪುರ ಅಭಯಾರಣ್ಯದಲ್ಲಿಯೂ ಮಳೆ ಅಭಾವದ ಬಿಸಿ ತಾಕಿತ್ತು. ಅರಣ್ಯದ ಬಹುತೇಕ ಕೆರೆಕಟ್ಟೆಗಳು ಖಾಲಿಯಾಗಿ ಪ್ರತಿನಿತ್ಯ ನೀರಿಗಾಗಿ ಪ್ರಾಣಿಗಳು ಪರಿತಪಿಸುವಂತಾಗಿತ್ತು.

ರೈತರು ಮಳೆ ಇಲ್ಲದೆ ಬೆಳೆ ಬಾರದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗ 5 ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದ ಮತ್ತು ಮೂರು ಸಚಿವರಾಗಿದ್ದ ದಿವಂಗತ ಮಹದೇವಪ್ರಸಾದ್ ಬಳಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯ ಮಾಡಿದ್ದರು.
ಬಿಜೆಪಿ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಮರಾಜನಗರ ಜಿಲ್ಲೆಯ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ನಂತರ ಗುಂಡ್ಲುಪೇಟೆ ಕೆರೆಗಳಿಗೂ ನೀರು ತುಂಬಿಸಲು ಮಹದೇವಪ್ರಸಾದ್ ಒತ್ತಡ ತಂದಿದ್ದರು. ಆದರೆ ಆ ಹೊತ್ತಿಗೆ ಸರ್ಕಾರದ ಅವಧಿ ಮುಗಿದ ಕಾರಣ ಸಾಧ್ಯವಾಗಿರಲಿಲ್ಲ.
ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮುಂದುವರೆಸಿದ ಫಲವಾಗಿ ತಾಲೂಕಿನ 3 ಕೆರೆಗಳಾದ ಹುತ್ತೂರು, ತೆರಕಣಾಂಬಿ, ಶ್ಯಾನಡ್ರಳ್ಳಿ ಕೆರೆಗಳಿಗೆ ನೀರು ತುಂಬಿಸಿದ್ದರು. ಉಳಿದ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದ್ದರು. ಅಷ್ಟರಲ್ಲೇ ಅವರು ನಿಧನರಾಗಿದ್ದರಿಂದ ಅದು ನೆನೆಗುದಿಗೆ ಬಿದ್ದಿತ್ತು.
ಈ ಬಾರಿ ಏನಾಗುತ್ತೋ ಎಂದು ಭಯಗೊಂಡಿರುವಾಗಲೇ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿ ಇದುವರೆಗೆ ನೀರು ಕಾಣದ ಕೆರೆಗಳಲ್ಲೆಲ್ಲ ನೀರು ಕಾಣಿಸಿದೆ. ಇದರಿಂದ ಸದ್ಯ ಎಲ್ಲರೂ ನೆಮ್ಮದಿಯಿಂದ ದಿನ ಕಳೆಯುವಂತಾಗಿದೆ. ರೈತರ ಮುಖದಲ್ಲಿ ಮಂದಹಾಸ ಮಿನುಗಿದೆ. ಸದ್ಯ ತಾಲೂಕಿನ 24 ಕೆರೆಗಳಲ್ಲಿ ನೀರು ಕಾಣಿಸಿದೆ ಹೀಗಾಗಿ ಜನ ನೆಮ್ಮದಿಯಾಗಿದ್ದಾರೆ.












Click it and Unblock the Notifications