ಚಾಮರಾಜನಗರದಲ್ಲಿ ಕಾಂಗ್ರೆಸ್ ಬಸ್ ಯಾತ್ರೆ: ಸಿದ್ದರಾಮಯ್ಯಗೆ ಕಾಯದೇ ಡಿ.ಕೆ.ಶಿ ಯಾತ್ರೆ ಆರಂಭಿಸಿದ್ದೇಕೆ?
ಚಾಮಾರಾಜನಗರದಲ್ಲಿ ಕಾಂಗ್ರೆಸ್ನಿಂದ ಬಸ್ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಸಿದ್ದರಾಮಯ್ಯ ಬರುವುದಕ್ಕೂ ಮುಂಚೆಯೇ ಡಿ.ಕೆ.ಶಿವಕುಮಾರ್ ಯಾತ್ರೆ ಆರಂಭಿಸಿರುವುದರ ಹಿಂದಿರುವ ಉದ್ದೇಶವೇನು ಎಂಬುದನ್ನು ತಿಳಿಯಿರಿ.
ಚಾಮರಾಜನಗರ, ಜನವರಿ, 26: ಸಿದ್ದರಾಮಯ್ಯ ಅವರನ್ನು ಕಾಯದೇ ಡಿ.ಕೆ.ಶಿವಕುಮಾರ್ ಬಸ್ ಯಾತ್ರೆ ಆರಂಭಿಸಿದ ಘಟನೆ ಚಾಮರಾಜನಗರದಲ್ಲಿ ನಡೆಯಿತು.
ಆದರೆ, ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಬರುವುದು ಒಂದು ಮುಕ್ಕಾಲು ತಾಸು ತಡವಾದ್ದರಿಂದ ಡಿಕೆಶಿ, ಸುರ್ಜೇವಾಲ, ಆರ್.ಧ್ರುವನಾರಾಯಣ್ ಹಾಗೂ ಇನ್ನಿತರ ನಾಯಕರು ಬಸ್ ಯಾತ್ರೆ ಆರಂಭಿಸಿ ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸಿ ಬಸ್ ಯಾತ್ರೆ ಮೂಲಕ ವೇದಿಕೆ ತಲುಪಿದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಂದು ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಪೂಜೆ ಸಲ್ಲಿಸಿ ರೋಡ್ ಶೋ ನಡೆಸಬೇಕಿತ್ತು. ಆದರೆ ಸಿದ್ದರಾಮಯ್ಯ ಹೆಲಿಕಾಪ್ಟರ್ನಲ್ಲಿ ಬರುವುದು ಒಂದು ಮುಕ್ಕಾಲು ತಡವಾಗಿದ್ದರಿಂದ ಡಿ.ಕೆ. ಶಿವಕುಮಾರ್, ಸುರ್ಜೇವಾಲ, ಆರ್.ಧ್ರುವನಾರಾಯಣ್ ಹಾಗೂ ಇನ್ನಿತರ ನಾಯಕರು ಬಸ್ ಯಾತ್ರೆ ಆರಂಭಿಸಿ ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸಿ ಬಸ್ ಯಾತ್ರೆ ಮೂಲಕ ವೇದಿಕೆ ತಲುಪಿದರು. ಅಲ್ಲದೇ ಪೂಜೆ ವೇಳೆ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಟರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದರು ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಗಂಟಲಿನಿಂದ ಮಾತನಾಡುತ್ತಾರೆ, ಹೃದಯದಿಂದ ಅಲ್ಲ: ಸಚಿವ ಸೋಮಣ್ಣ
ಬಿಜೆಪಿಯವರಿಗೆ ಸೋಲಿನ ಭಯ
ಇವರು ಪೂಜೆ ಸಲ್ಲಿಸಿ ತೆರಳುತ್ತಿದ್ದಂತೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಸಿದ್ದರಾಮಯ್ಯ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ವೇದಿಕೆಗೆ ನೇರವಾಗಿ ಬಂದರು. ಸಿದ್ದರಾಮಯ್ಯ ಅವರೊಟ್ಟಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಕೂಡ ಇದ್ದರು. ಇನ್ನು ಬಿಜೆಪಿಯವರು ಮತ್ತೇ ಸರ್ಕಾರ ರಚಿಸುವುದು ಹಗಲುಗನಸಾಗಿದೆ. ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಧಾಕರ್ ವಿರುದ್ಧ ಸಿದ್ದು ವಾಗ್ದಾಳಿ
ಇನ್ನು, ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ 36 ಮಂದಿ ಆಮ್ಲಜನಕ ಇಲ್ಲದೇ ಅಸುನೀಗಿದ್ದನ್ನು ಮುಚ್ಚಿಹಾಕಿದ್ದಾರೆ. ಸರ್ಕಾರ ಇರುವುದು ಯಾರದ್ದು, 36 ಮಂದಿ ಸಾವಿಗೆ ಯಾರು ಕಾರಣ? ಸುಧಾಕರ್ ಆರೋಗ್ಯ ಮಂತ್ರಿಯಾಗಿ ಯಾಕೆ ಇದ್ದಾರೆ? ಅವನು ನೇಣು ಹಾಕಿಕೊಳ್ಳುವುದು ಬೇಡ, ಎಲ್ಲಾದರ ಬಗ್ಗೆ ತನಿಖೆ ಮಾಡಲಿ ಆಗ ಗೊತ್ತಾಗಲಿದೆ. ಹಾಗೆಯೇ ತನಿಖೆ ಮಾಡಲು ನಾವೇನೂ ಅಧಿಕಾರದಲ್ಲಿದ್ದೀವಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಭರವಸೆ ಈಡೇರಿಸದಿದ್ದರೆ ನಿವೃತ್ತಿ
ನಾವು ಕೊಟ್ಟಿರುವ ಭರವಸೆ ಈಡೇರಿಸದಿದ್ದರೇ ರಾಜಕೀಯ ನಿವೃತ್ತಿಯಾಗಿಬಿಡುತ್ತೇವೆ ಎಂದು ಕೆ.ಪಿ.ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಾವು ಕೊಟ್ಟಿರುವ ಭರವಸೆ ಈಡೇರಿಸಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಾವೇನಾದರೂ ಈಡೇರಿಸದಿದ್ದರೇ ರಾಜಕೀಯ ನಿವೃತ್ತಿಯಾಗುತ್ತೇವೆ. 200 ಯೂನಿಟ್ ವಿದ್ಯುತ್ ಉಚಿತ- ಪ್ರತಿ ಯಜಮಾನಿಗೆ 2,000 ಸಾವಿರ ರೂಪಾಯಿ ಖಚಿತ ಎಂದು ಡಿ.ಕೆ. ಶಿವಕುಮಾರ್ ಪುನರುಚ್ಛಿಸಿದರು. ಇನ್ನು ಟಿಕೆಟ್ ಘೋಷಣೆಯಾದರೇ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಬೇರೆ ಬೇರೆಯಾಗುತ್ತಾರೆ ಎಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ದೂರನೂ ಇಲ್ಲಾ ಹತ್ರನೂ ಇಲ್ಲ. ನಾವೆಲ್ಲಾ ಒಂದೇ ಕುಟುಂಬದವರಂತೆ ಇದ್ದೇವೆ ಎಂದು ತಿರುಗೇಟು ಕೊಟ್ಟರು.
ಇನ್ನು, ಪ್ರಜಾಧ್ವನಿ 3 ತಾಸು ತಡವಾಗಿ ಆರಂಭವಾದರೂ ಕಾಂಗ್ರೆಸ್ ಕಾರ್ಯಕರ್ತರು ನೆಚ್ಚಿನ ನಾಯಕರಿಗಾಗಿ ಕಾದು ಕುಳಿತಿದ್ದರು. ಅಂದಾಜು, 20-30 ಸಾವಿರ ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.