ಗುಂಡ್ಲುಪೇಟೆ: ಅಂತ್ಯಕ್ರಿಯೆ ನಡೆಸುವ ವೇಳೆ ಹೆಜ್ಜೇನು ದಾಳಿ: 42 ಮಂದಿಗೆ ಗಾಯ, 19 ಮಂದಿ ಆಸ್ಪತ್ರೆಗೆ ದಾಖಲು
ಚಾಮರಾಜನಗರ, ಜುಲೈ, 07: ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಹೆಜ್ಜೆನು ದಾಳಿ ನಡೆಸಿ 42 ಮಂದಿಗೆ ಕಚ್ಚಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ.
ಬಸವಾಪುರ ಗ್ರಾಮದ ಮಹಾದೇವಯ್ಯ (65) ಎಂಬವರು ವಯೋಸಹಜ ಕಾರಣದಿಂದ ಶುಕ್ರವಾರ (ಜುಲೈ 06) ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆ ನಡೆಸುವಾಗ ಬೆಂಕಿ ಹಾಕಿದ್ದ ವೇಳೆಗೆ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿದೆ.

42 ಮಂದಿ ಮೇಲೆ ಹೆಜ್ಜೆನು ದಾಳಿ ನಡೆಸಿದ್ದು, ಇದರಲ್ಲಿ 19 ಮಂದಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಜ್ಜೇನು ಕಡಿತಕ್ಕೋಳಗಾದವರ ಮುಖ, ಕೈ ಊದಿಕೊಂಡಿದ್ದು, ಆಸ್ಪತ್ರೆಗೆ ಡಿಎಚ್ಒ ಡಾ.ಚಿದಂಬರ, ಟಿಎಚ್ಒ ಡಾ.ಅಲೀಂ ಪಾಷಾ ಭೇಟಿ ನೀಡಿ ಚಿಕಿತ್ಸೆಗೊಳಗಾದವರ ಆರೋಗ್ಯ ವಿಚಾರಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಚಿರತೆ ಪ್ರತ್ಯಕ್ಷ: ಚಿರತೆ ಪ್ರತ್ಯಕ್ಷವಾಗಿ ಜನರು, ವಿದ್ಯಾರ್ಥಿಗಳು ಆತಂಕಕ್ಕೀಡಾದ ಘಟನೆ ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಸೇತುವೆ ಬಳಿ ನಡೆದಿದೆ.
ಮುಡಿಗುಂಡ ಸೇತುವೆ ಸಮೀಪದ ಶಂಕನಪುರ ತೆರಳುವ ರಸ್ತೆ ರೇಷ್ಮೆ ಇಲಾಖೆ ವಸತಿಗೃಹಗಳ ಬಳಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಆರ್ಎಫ್ಒ ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಕಾಣಿಸಿಕೊಂಡ ಪ್ರದೇಶಕ್ಕೆ ರೇಷ್ಮೆ ಇಲಾಖೆ ವಸತಿಗೃಹದ ನಿವಾಸಿಗಳು ಹಾಗೂ ಅಕ್ಕಪಕ್ಕದಲ್ಲಿ ಇರುವ ಐಟಿಐ ಕಾಲೇಜು, ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ಸಂಜೆ ವೇಳೆ ಯಾರು ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ
ರೇಷ್ಮೆ ವಸತಿ ಗೃಹದ ಶಂಕನಪುರಕ್ಕೆ ತೆರಳುವ ರಸ್ತೆಯ ತಿರುವಿನಲ್ಲಿ ಚಿರತೆ ಕುಳಿತಿರುವುದನ್ನು ಮಾರುಕಟ್ಟೆಗೆ ರೇಷ್ಮೆ ತೆಗೆದುಕೊಂಡು ಹೋಗುವ ರೈತರ ನೋಡಿ ಆ ರಸ್ತೆಯಲ್ಲಿ ಬರುತ್ತಿದ್ದ ಮುಡಿಗುಂಡ ನಿವಾಸಿಗಳಾದ ಸಂಜಯ್ ಕುಮಾರ್ ಮತ್ತು ಚಂದ್ರು ಎಂಬುವರಿಗೆ ಇಲ್ಲಿ ಚಿರತೆ ಇದೆ ಎಂದು ಹೇಳಿ ಅವರು ವಾಪಸ್ ಹೋದರು.
ಈ ವೇಳೆ ಸಂಜಯ್ ಮತ್ತು ಚಂದ್ರು ಹೋಗಿ ನೋಡಿದಾಗ ಚಿರತೆ ರಸ್ತೆ ದಾಟಿ ಕಬ್ಬಿನ ಗದ್ದೆಗೆ ತೆರಳಿರುವುದನ್ನು ಕಂಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಐಟಿಐ ಕಾಲೇಜು, ಆದರ್ಶ ಶಾಲೆ ಇದ್ದು, ವಿದ್ಯಾರ್ಥಿಗಳಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಚಿರತೆ ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.












Click it and Unblock the Notifications