ಗುಂಡ್ಲುಪೇಟೆ ಚುನಾವಣೆ ಮುಗೀತು, ರೈತರಿಗಿನ್ನು ಭೂತಾಯಿಯೇ ಗತಿ!
ಯಾರು ಗೆದ್ದರೂ, ಯಾರು ಸೋತರೂ ಅನ್ನ ನೀಡುವ ಭೂತಾಯಿ ಮಾತ್ರವೇ ನಮ್ಮನ್ನು ಕಾಪಾಡುವವಳು ಎಂಬಂತೆ ಚುನಾವಣೆ ಮುಗಿಯುತ್ತಿದ್ದಂತೆಯೇ ಆ ಗುಂಗಿನಿಂದ ಹೊರಬಂದ ಗುಂಡ್ಲುಪೇಟೆ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಗುಂಡ್ಲುಪೇಟೆ, ಏಪ್ರಿಲ್ 12: ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾದಾಗಿನಿಂದ ಅದರ ಗುಂಗಿನಲ್ಲೇ ಇದ್ದ ಹಳ್ಳಿಗಳ ರೈತರು, ಏಪ್ರಿಲ್ 9 ರಂದು ಚುನಾವಣೆ ಮುಗಿಯುತ್ತಿದ್ದಂತೆಯೇ ನಿರಾಳರಾಗಿ ಜಮೀನಿನತ್ತ ಮುಖ ಮಾಡಿದ್ದಾರೆ.
ಯಾರು ಗೆದ್ದರೂ, ಯಾರು ಸೋತರೂ ಅನ್ನ ನೀಡುವ ಭೂತಾಯಿ ಮಾತ್ರವೇ ನಮ್ಮನ್ನು ಕಾಪಾಡುವವಳು ಎಂಬಂತೆ ಬಿರುಬಿಸಿಲಿನಲ್ಲೂ, ಕೃಷಿ ಚಟುವಟಿಕೆಯಲ್ಲಿ ನಿರತರಾಗಿ ರೈತರು ಬೆವರು ಸುರಿಸುತ್ತಿದ್ದಾರೆ. [ಉಪಚುನಾವಣೆ ಮುಗೀತು, ಲೆಕ್ಕಾಚಾರ ಶುರುವಾಯ್ತು!]
ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿರುವುದರಿಂದ ರೈತರು ಕೊಂಚ ನೆಮ್ಮದಿಯಿಂದಿದ್ದಾರೆ. ಈ ನಡುವೆ ಹೆಚ್ಚಿನ ಜನರು ಕಳೆದೊಂದು ತಿಂಗಳಿಂದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ಓಡಾಡಿ ಒಂದಷ್ಟು ದುಡಿದವರು. ಇದೀಗ ಚುನಾವಣೆ ಮುಗಿದಿದ್ದರಿಂದ ಜಮೀನಿನತ್ತ ಮುಖ ಮಾಡಿದ್ದಾರೆ. ಮತ್ತೂ ಕೆಲವರು ಏಪ್ರಿಲ್ 13 ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಎತ್ತುಗಳಿಗಿಂತ ಟ್ರ್ಯಾಕ್ಟರ್ ನಲ್ಲಿ ಕೃಷಿ ಚಟುವಟಿಕೆ ನಡೆಸುವವರು ಹೆಚ್ಚಾಗಿದ್ದಾರೆ. ಬರದಿಂದ ತತ್ತರಿಸಿದ ಹಲವರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದರಿಂದ ಕೃಷಿ ಕೆಲಸಕ್ಕೂ ಜಾನುವಾರುಗಳಿಲ್ಲ. ಹೀಗಾಗಿ ಮಳೆ ಬಂದು ಕೃಷಿ ಮಾಡುವಂತಾದರೆ ಮತ್ತೆ ಜಾನುವಾರುಗಳನ್ನು ಖರೀದಿ ಮಾಡಬೇಕಾದ ಸ್ಥಿತಿ ಬಂದೊದಗಿದೆ. [ಬಿಸಿಲಿಗೂ ಬತ್ತದ ಉತ್ಸಾಹ, ಗುಂಡ್ಲುಪೇಟೆಯಲ್ಲಿ ಶೇಕಡಾ 75 ಮತದಾನ]
ಈಗಾಗಲೇ ತಾಲೂಕಿನ ಹಂಗಳ, ಬೇಗೂರು, ತೆರಕಣಾಂಬಿ ಮೊದಲಾದ ಕಡೆ ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಜೋಳ, ಸೂರ್ಯಕಾಂತಿಯನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಅಲಸಂದೆ, ಕಡಲೆಕಾಯಿ ಕೃಷಿಗೆ ಜಮೀನನ್ನು ಹದಗೊಳಿಸುತ್ತಿದ್ದಾರೆ.
ಈ ಬಾರಿಯಾದರೂ ಉತ್ತಮ ಮಳೆಯಾಗಿ ಬೆಳೆ ಬೆಳೆಯುವಂತಾಗಲಿ ಎಂದು ರೈತರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಯಾವುದೋ ಪಕ್ಷದ ಕಾರ್ಯಕರ್ತರಾಗಿ ನೆಚ್ಚಿನ ನಾಯಕರ ಗೆಲುವಿಗಾಗಿ ಶ್ರಮಿಸಿದ ಜನರು, ಮತ್ತೀಗ ಉಳುವ ಯೋಗಿಯಾಗಿ ತಮ್ಮ ಸ್ವಸ್ಥಾನಕ್ಕೆ ಮರಳಿದ್ದಾರೆ!