ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆ
ಬೀದರ್, ಮಾರ್ಚ್ 30; ಮಾಜಿ ಸಚಿವ, ಜೆಡಿಎಸ್ ನಾಯಕ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆಗೊಂಡರು. 2018ರ ವಿಧಾನಸಭೆ ಚುನಾವಣೆ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.
ಮಂಗಳವಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಪರ ಚುನಾವಣೆ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉಪಸ್ಥಿತರಿದ್ದರು.

ಬಸವ ಕಲ್ಯಾಣದಲ್ಲಿ ನಡೆದ ಈ ಪ್ರಚಾರ ಸಭೆಯಲ್ಲಿಯೇ ಮಾಜಿ ಸಚಿವ, ಜೆಡಿಎಸ್ ನಾಯಕ ಪಿಜಿಆರ್ ಸಿಂಧ್ಯಾ ಅವರು ಕಾಂಗ್ರೆಸ್ಸಿಗೆ ಸೇರ್ಪಡೆ ಆದರು. 2018ರ ಚುನಾವಣೆಯಲ್ಲಿ ಸಿಂಧ್ಯಾ ಅವರು ಬಸವಕಲ್ಯಾಣದಿಂದಲೇ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಬಸವ ಕಲ್ಯಾಣ ಉಪ ಚುನಾವಣೆ ಸಂದರ್ಭದಲ್ಲಿಯೇ ಪಿಜಿಆರ್ ಸಿಂಧ್ಯಾ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಏಪ್ರಿಲ್ 17ರಂದು ನಡೆಯುವ ಉಪ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಯಸ್ರಬ್ ಅಲಿ ಖಾದ್ರಿ ಅಭ್ಯರ್ಥಿಯಾಗಿದ್ದಾರೆ.
2018ರ ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ 31,414 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಚುನಾವಣೆ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರು, "ರಾಜಕಾರಣದಿಂದ ದೂರವಿದ್ದೇನೆ. ಜನರ ಅಪೇಕ್ಷೆಯಂತೆ ರಾಜಕೀಯದಲ್ಲಿ ಸಕ್ರಿಯನಾಗುತ್ತೇನೆ. 2021ರಿಂದ ರಾಜಕೀಯದಲ್ಲಿ ಸಕ್ರಿಯಗೊಳ್ಳುತ್ತೇನೆ" ಎಂದುದ ಹೇಳಿದ್ದರು.












Click it and Unblock the Notifications