ಭಾರತೀಯ ಹಾಕಿಯ ಬದಲಾವಣೆಯ ಹರಿಕಾರ ನವೀನ್ ಪಟ್ನಾಯಕ್
ಒಡಿಶಾದಲ್ಲಿ ರಾಷ್ಟ್ರೀಯ ಕ್ರೀಡೆ ಹಾಕಿ ಕ್ರೀಡೆಗೆ ಅಗತ್ಯವಿರುವ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಒದಗಿಸಿ ಭಾರತದ ಹಾಕಿ ಸ್ವರ್ಣಕಾಲಕ್ಕೆ ಮತ್ತೆ ಮುನ್ನುಡಿ ಬರೆದವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್.
ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಕಳೆದ ಐದು ದಶಕಗಳ್ಲಲೇ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದ ಐತಿಹಾಸಿಕ ಸಾಧನೆ ಮಾಡಿವೆ.
ಇವೆಲ್ಲವೂ ಆರಂಭವಾಗಿರುವುದು 2018ರಲ್ಲಿ ಅಂದು ಸಹಾರಾ ಇಂಡಿಯಾದಿಂದ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡದ ಪ್ರಾಯೋಜಕತ್ವವನ್ನು ವಹಿಸಿದ ಒಡಿಶಾ, ಬೇರೆ ಯಾವ ರಾಜ್ಯವೂ ಯೋಚಿಸದ ರೀತಿಯಲ್ಲಿ ರಾಷ್ಟ್ರೀಯ ಕ್ರೀಡೆಗೆ ಉತ್ತೇಜನ ನೀಡಿತ್ತು.

ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕಳೆದ ಕೆಲವು ವರ್ಷಗಳಲ್ಲಿ ಹಾಕಿ ಕ್ರೀಡೆಗೆ ನೀಡಿರುವ ಬೆಂಬಲ ನಿಜಕ್ಕೂ ಮೆಚ್ಚುವಂತಹದ್ದಾಗಿದೆ.
ಹಾಗಾಗಿ ಒಲಂಪಿಕ್ಸ್ನಲ್ಲಿ ಭಾರತದ ಹಾಕಿ ಕ್ರೀಡೆಯ ಶ್ರೇಯಸ್ಸು ಒಡಿಶಾ ಮುಖ್ಯಮಂತ್ರಿ ಹಾಗೂ ಅವರ ಸರ್ಕಾರಕ್ಕೂ ಸಲ್ಲಬೇಕು.
ಪುರುಷರ ಹಾಕಿ ತಂಡದ ಉಪನಾಯಕ ಬೀರೇಂದ್ರ ಲಾಕ್ರಾ, ಮಹಿಳಾ ತಂಡದಲ್ಲಿ ದೀಪ್ ಗ್ರೇಸ್ ಎಕ್ಕಾ ಸೇರಿದಂತೆ ಪ್ರಮುಖ ಆಟಗಾರರು ಒಡಿಶಾ ಮೂಲದವರಾಗಿದ್ದಾರೆ. ಆ ಮೂಲಕ ದೇಶದ ಹಾಕಿ ಕ್ರೀಡೆಯಲ್ಲಿ ಒಡಿಶಾ ಮಹತ್ತರ ಪಾತ್ರ ವಹಿಸುತ್ತಿದೆ.
ಮುಂದಿನ ಐದು ವರ್ಷಗಳಲ್ಲಿ ಅಂದಾಜು 150 ಕೋಟಿ ರೂಪಾಯಿಗಳಿಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಡಿಶಾ ಸರ್ಕಾರವು ಹಾಕಿ ಇಂಡಿಯಾ ಜತೆ ಸೇರಿಕೊಂಡು ಭುವನೇಶ್ವರದಲ್ಲಿ ಪ್ರಮುಖ ಟೂರ್ನಿಗಳನ್ನು ಆಯೋಜಿಸುವ ಮೂಲಕ ಮತ್ತೆ ಹಾಕಿಯಲ್ಲಿ ವಿಶ್ವದ ಗಮನ ಸೆಳೆಯಿತು. ಇದರಲ್ಲಿ ಪುರುಷರ ವಿಶ್ವಕಪ್, ವಿಶ್ವ ಲೀಗ್, ಪ್ರೊ-ಲೀಗ್, ಒಲಿಂಪಿಕ್ ಅರ್ಹತಾ ಪಂದ್ಯಾವಳಿಗಳು ಸೇರಿವೆ.
ಹಾಕಿ ಕ್ರೀಡೆಗಳಯಲ್ಲಿ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಅದರಲ್ಲೂ ಪಂಜಾಬ್ನ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಅಲ್ಲದೆ ಭಾರತ ತಂಡಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದೆ. ಹಾಗಿರುವಾಗ ಒಡಿಶಾ ಆರ್ಥಿಕವಾಗಿ ಸದೃಢವಾಗಿರದಿದ್ದರೂ ದೇಶದ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಒಡಿಶಾ ಸರ್ಕಾರ ಕೈಗೊಂಡಿರುವ ಕ್ರಮವು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದು ಭಾರತದ ಪುರುಷರ ಹಾಗೂ ಮಹಿಳಾ ತಂಡವು ಒಲಿಂಪಿಕ್ಸ್ನಲ್ಲಿ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದಾಗ ಅಭಿನಂದಿಸಿದ ಮುಂಚೂಣಿಯ ಗಣ್ಯರ ಸಾಲಿನಲ್ಲಿ ಒಡಿಶಾ ಮುಖ್ಯಮಂತ್ರಿ ಓರ್ವರಾಗಿದ್ದಾರೆ. ಅಲ್ಲದೆ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಯಶಸ್ಸು ತರಲಿ ಎಂದು ಆಶಿಸಿದ್ದಾರೆ.
ಮೂರು ಫೀಲ್ಡ್ ಗೋಲ್ಗಳ ಮೂಲಕ ಮಿಂಚಿನ ಪ್ರದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್ ಕಾಳಗದಲ್ಲಿ ಬ್ರಿಟನ್ಗೆ ಸೋಲಿನ ಬರೆಯೆಳೆದು ಸೆಮಿಫೈನಲ್ಗೆ ದಾಪುಗಾಲಿಟ್ಟಿದೆ.
ಪಂದ್ಯದಲ್ಲಿ ಎದುರಾಳಿಯ ಗೋಲ್ಗಳಿಕೆಯ ಪ್ರಯತ್ನಗಳನ್ನು ತಡೆದು ನಿಲ್ಲಿಸಿದ್ದ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಜಯದ ರೂವಾರಿ ಎನಿಸಿದರು. ಭಾರತದ ಪರ ದಿಲ್ಪ್ರೀತ್ ಸಿಂಗ್, ಗುರುಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಗೋಲ್ ಬಾರಿಸಿ 3-1 ಭರ್ಜರಿ ಜಯ ತಂದುಕೊಟ್ಟರು. ಪಂದ್ಯದಲ್ಲಿ ಭಾರತಕ್ಕೆ ಒಮ್ಮೆಯೂ ಪೆನಾಲ್ಟಿ ಕಾರ್ನರ್ ಅವಕಾಶ ಸಿಗಲಿಲ್ಲ. ಜೊತೆಗೆ ಪಂದ್ಯದಲ್ಲಿ ಚೆಂಡಿನ ಮೇಲಿನ ನಿಯಂತ್ರಣ ಶೇ. 54ರಷ್ಟು ಬ್ರಿಟನ್ ಕೈಲಿತ್ತಾದರೂ, ಭಾರತದ ಭದ್ರ ಡಿಫೆನ್ಸ್ ಅದ್ಭುತ ಕೆಲಸ ನಿಭಾಯಿಸಿತು.
1980ರ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿಲ್ಲ. ಈ ಬಾರಿ ಇತಿಹಾಸ ಬರೆಯುವ ಸುವರ್ಣಾವಕಾಶ ಮನ್ಪ್ರೀತ್ ಸಾರಥ್ಯದ ಟೀಮ್ ಇಂಡಿಯಾ ಪಡೆದಿದೆ. ಅಂದಹಾಗೆ ಲೀಗ್ ಹಂತದಲ್ಲಿ ಭಾರತ ತಂಡ 2ನೇ ಸ್ಥಾನದೊಂದಿಗೆ ನಾಕ್ಔಟ್ ಹಂತಕ್ಕೆ ಕಾಲಿಟ್ಟಿತ್ತು.
ಪಂದ್ಯದ ಆರಂಭದಿಂದಲೂ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದ್ದ ಮನ್ಪ್ರೀತ್ ಸಿಂಗ್ ಸಾರಥ್ಯದ ಟೀಮ್ ಇಂಡಿಯಾ ಪ್ರಥಮ ಕ್ವಾರ್ಟರ್ನಲ್ಲೇ ಗೋಲ್ ಖಾತೆ ತೆರೆಯಿತು. 7ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಭಾರತ ತಂಡದ ಸ್ಟ್ರೈಕರ್ ದಿಲ್ಪ್ರೀತ್ ಸಿಂಗ್ 1-0 ಅಂತರದ ಮುನ್ನಡೆ ತಂದುಕೊಟ್ಟರು.
ಮೊದಲ ಕ್ವಾರ್ಟರ್ನಲ್ಲಿ ಸಿಕ್ಕ ಗೋಲ್ನಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ ತಂಡ ಎರಡನೇ ಕ್ವಾರ್ಟರ್ ಆರಂಭವಾದ ಒಂದೇ ನಿಮಿಷದಲ್ಲಿ ತನ್ನ ಮುನ್ನಡೆಯನ್ನು 2-0ಗೆ ವಿಸ್ತರಿಸಿಕೊಂಡಿತು. ಸ್ಟಾರ್ ಆಟಗಾರ ಗುರುಜಂತ್ ಸಿಂಗ್ 16ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ಮೂಲಕ ತಂಡದ ಮುನ್ನಡೆ ಹೆಚ್ಚಿಸಿದರು.
ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ತಂಡ ಗೋಲ್ ಕೀಪರ್ ಎದುರಾಳಿ ತಂಡದ ಎಲ್ಲ ಪ್ರಯತ್ನಗಳನ್ನು ತಡೆದು ನಿಲ್ಲಿಸಿದರು. ಆದರೆ, ಮೂರನೇ ಕ್ವಾರ್ಟರ್ ಅಂತ್ಯದ ಹೊತ್ತಿಗೆ ಸಿಕ್ಕ ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇಂಗ್ಲೆಂಡ್ ಮೊದಲ ಗೋಲ್ ಗಳಿಸಿತು. ತಂತ್ರಗಾರಿಕೆ ಬದಲಾಯಿಸಿ ತನ್ನ ಮೂರನೇ ಪ್ರಯತ್ನದಲ್ಲಿ ಚೆಂಡನ್ನು ಸ್ಯಾಮ್ ವಾರ್ಡ್ (45ನೇ ನಿ.) ಗೋಲ್ ಪೆಟ್ಟಿಗೆ ಸೇರಿಸಿದರು.












Click it and Unblock the Notifications