Just in: ಮಧ್ಯಪ್ರದೇಶದ ಮೂವರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲು
ಭೋಪಾಲ್, ಆಗಸ್ಟ್ 21: ಮಧ್ಯಪ್ರದೇಶದಲ್ಲಿ ಕುಟುಂಬವೊಂದು ವೃದ್ಧರೊಬ್ಬರನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಬೇಕಾಯಿತು ಎಂಬುದನ್ನು ವಿಡಿಯೋ ಮಾಡಿ, ಸುದ್ದಿ ಮಾಡಿದ್ದ ಕೆಲವೇ ದಿನಗಳಲ್ಲಿ, ಮೂವರು ಸ್ಥಳೀಯ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ವರದಿ ಮಾಡಿದ ಮೂವರು ಸ್ಥಳೀಯ ಪತ್ರಕರ್ತರ ವಿರುದ್ಧ ವಂಚನೆ, ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ ಹಲವಾರು ಅಂಶಗಳಲ್ಲಿ ಪತ್ರಕರ್ತರ ವರದಿ "ಸುಳ್ಳು ಮತ್ತು ಆಧಾರರಹಿತ" ಎಂದು ಹೇಳಿದರೆ, ವಿಡಿಯೋದಲ್ಲಿರುವ ಕುಟುಂಬವು ತಮ್ಮ ನೋವು ನಿಜ ಮತ್ತು ವರದಿ ಸರಿಯಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ವಾಹಿನಿಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಾದ ಕುಂಜಬಿಹಾರಿ ಕೌರವ್, ಎನ್ಕೆ ಭತೇಲೆ ಮತ್ತು ಅನಿಲ್ ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ನಕಲಿ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಿಂಡ್ನ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಚೌಹಾಣ್ ಹೇಳಿದ್ದಾರೆ.
ದಾಬೋಹ್ ಪಟ್ಟಣದ ಬಳಿಯ ಮರ್ಪುರ ಗ್ರಾಮದ ಗ್ಯಾರಸ್ ಪ್ರಸಾದ್ ವಿಶ್ವಕರ್ಮ ಅವರನ್ನು ಅವರ ಮಗ ಹರಿಕೃಷ್ಣ ವಿಶ್ವಕರ್ಮ ಅವರು ತಳ್ಳುವ ಗಾಡಿಯಲ್ಲಿ 5 ಕಿಮೀ ದೂರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂಬ ವರದಿಯನ್ನು ವಿಡಿಯೋ ಮತ್ತು ಫೋಟೋಗಳ ಸಹಿತ ಪತ್ರಕರ್ತರು ಶುಕ್ರವಾರ ಪೋಸ್ಟ್ ಮಾಡಿದ್ದಾರೆ. ಯಾವುದೇ ಆಂಬ್ಯುಲೆನ್ಸ್ ಬಂದಿಲ್ಲ ಮತ್ತು ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಸಿಗುತ್ತಿಲ್ಲ ಎಂದು ಹೇಳಿದ್ದರು.
ಘಟನೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರ, ಲಹಾರ್, ಪ್ರಭಾರಿ ಡಾ.ರಾಜೀವ್ ಕೌರವ್ ಪೊಲೀಸರಿಗೆ ದೂರು ಸಲ್ಲಿಸಿದ್ದು, "ತನಿಖೆಯಲ್ಲಿ ಕುಟುಂಬವು ಯಾವುದೇ ಆಂಬ್ಯುಲೆನ್ಸ್ ಅನ್ನು ಸಂಪರ್ಕಿಸದಿರುವುದು ಕಂಡುಬಂದಿದೆ. ಕುಟುಂಬವು ಸರಕಾರದ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.
ಇತ್ತ, ದೂರವಾಣಿ ಕರೆ ಮಾಡಿದರೂ ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ 5 ಕಿ. ಮೀ. ದೂರ ತಳ್ಳಿಕೊಂಡು ತಳ್ಳುವ ಗಾಡಿಯನ್ನು ಬಳಸಬೇಕಾಯಿತು ಎಂದು ಸಂತ್ರಸ್ತ ವ್ಯಕ್ತಿಯ ಪುತ್ರ ಹರಿಕೃಷ್ಣ ಮತ್ತು ಪುತ್ರಿ ಪುಷ್ಪಾ ತಿಳಿಸಿದ್ದಾರೆ.
ಇದುವರೆಗೆ ಯಾರ ಬಂಧನವೂ ಆಗಿಲ್ಲ. ಮೂವರು ಪತ್ರಕರ್ತರು "ನಾವು ಸತ್ಯವನ್ನು ಮಾತ್ರ ತೋರಿಸಿದ್ದೇವೆ" ಎಂದು ಹೇಳಿದ್ದು, ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications