ಮಧ್ಯಪ್ರದೇಶದಲ್ಲಿ ಕಮಲ ಮುದುಡಿದರೇನಂತೆ, ಇನ್ನೊಂದು ಕಮಲ ಅರಳಿತಲ್ಲವೇ!
ಬಹುಷ: ಮಧ್ಯಪ್ರದೇಶದ ಚುನಾವಣೆಯನ್ನು ಗೆಲ್ಲಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಷ್ಟು ಕಷ್ಟ ಪಟ್ಟಿದ್ದರೋ, ಅಷ್ಟೇ ಕಷ್ಟವನ್ನು ಮುಖ್ಯಮಂತ್ರಿಯನ್ನಾಗಿ ಯಾರನ್ನು ಫೈನಲ್ ಮಾಡಬೇಕು ಎನ್ನುವುದಕ್ಕೆ ಪಟ್ಟಿರಬಹುದೋ ಏನೋ?
ಮಧ್ಯಪ್ರದೇಶವಾಗಲಿ, ರಾಜಸ್ಥಾನವಾಗಲಿ ಮುಖ್ಯಮಂತ್ರಿ ರೇಸ್ ನಲ್ಲಿದ್ದ ಎಲ್ಲಾ ನಾಲ್ವರು ಗಾಂಧಿ ಕುಟುಂಬದ ನಿಷ್ಟರು ಮತ್ತು ಆಪ್ತರು. ಆದರೆ, ರಾಹುಲ್ ಗಾಂಧಿ ಆಯ್ಕೆ ಒಂದು ಸೋನಿಯಾ ಗಾಂಧಿ ಆಯ್ಕೆ ಇನ್ನೊಂದು ಆಗಿರುವದರಿಂದಲೇ, ಕಮಲ್ ನಾಥ್ ಸಿಎಂ ಘೋಷಣೆ ತಡವಾಗಿದ್ದು ಎನ್ನುವ ಮಾಹಿತಿಯಿದೆ.
ಒಲಿದು ಬಂದ ಉಪಮುಖ್ಯಮಂತ್ರಿ ಹುದ್ದೆಗೆ ಒಲ್ಲೆ ಎಂದ ಮಾಧವರಾವ್ ಸಿಂದಿಯಾ ಪುತ್ರ ಜ್ಯೋತಿರಾದಿತ್ಯ, 'ಇದು ರೇಸ್ ಅಲ್ಲ, ಇದು ಕುರ್ಚಿಗಾಗಿ ನಡೆಯುವ ಕುಸ್ತಿಯೂ ಅಲ್ಲ, ನಾವಿಲ್ಲಿ ಇರುವುದು ಮಧ್ಯಪ್ರದೇಶದ ಜನರ ಸೇವೆಗಾಗಿ' ಎಂದು ರಾಹುಲ್ ಭೇಟಿಯ ನಂತರ, ಮಾಧ್ಯಮದವರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ, ಒಂದು ಕಮಲ (ಬಿಜೆಪಿ ಚಿಹ್ನೆ) ಹೋದರೇನಂತೆ, ಇನ್ನೊಂದು ಕಮಲ (ಕಮಲ್ ನಾಥ್) ಬಂತಲ್ಲವೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿದೆ.
ಮಧ್ಯಪ್ರದೇಶದಲ್ಲಿ ಮೂರು ಅವಧಿಯಲ್ಲಿದ್ದ ಬಿಜೆಪಿ ಆಡಳಿತ, ಕಾಂಗ್ರೆಸ್ ಪ್ರಯಾಸದ ಗೆಲುವು ಕಾಣುವ ಮೂಲಕ ಮುಕ್ತಾಯಗೊಂಡಿತ್ತು. ಈ ಚುನಾವಣೆಯ ಫಲಿತಾಂಶವನ್ನು ಅಲ್ಲಿನ ಮತದಾರರು, ' ಏಕ್ ಕಮಲ್ ಗಯಾ, ದೂಸ್ರಾ ಕಮಲ್ ಆಗಯಾ' ಎಂದು ವಿಶ್ಲೇಷಿಸುತ್ತಿದ್ದಾರೆ.
ಒಂಬತ್ತು ಬಾರಿ ಸಂಸದರಾಗಿರುವ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿದಾಗ, ಇಂದಿರಾ ಗಾಂಧಿಯ ಮೂರನೇ ಮಗ ಕಮಲ್ ನಾಥ್ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಿಂದಿನ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಖುದ್ದು, ಇಂದಿರಾ ಗಾಂಧಿಯೇ, ಕಮಲ್ ನಾಥ್ ನನ್ನ ಮೂರನೇ ಮಗ ಎಂದು ಹೇಳಿದ್ದರಂತೆ.












Click it and Unblock the Notifications