ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಆಯೋಗದ ಎರಡೆರಡು ನೋಟಿಸ್
ಭೋಪಾಲ್, ಏಪ್ರಿಲ್ 21: ಬಿಜೆಪಿ ಅಭ್ಯರ್ಥಿ, ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಚುನಾವಣಾ ಆಯೋಗದಿಂದ ಎರಡನೇ ನೋಟಿಸ್ ಜಾರಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ಅಧಿಕಾರಿ ಹೇಮಂತ್ ಕರ್ಕರೆಯವರು ನನ್ನ ಶಾಪದಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರ ಬಗ್ಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಈಗ ರಾಮಮಂದಿರ ನಿರ್ಮಾಣ ಕುರಿತಂತೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ.
ಪ್ರಗ್ಯಾ ಸಿಂಗ್ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ಸಹಾಯಕ ಚುನಾವಣಾಧಿಕಾರಿಯಿಂದ (ಎಆರ್ಒ) ವರದಿಯನ್ನು ಪಡೆಯಲಾಗಿದ್ದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದಾದರೂ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯಾದರೆ, ಆ ಸಮಾರಂಭದ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಎರಡು ನೋಟಿಸ್ ಗೂ ಉತ್ತರಿಸಲು ಒಂದು ದಿನದ ಗಡುವು ನೀಡಲಾಗಿದೆ ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸುದಾಮ್ ಖಡ್ ಹೇಳಿದರು.
ಎಆರ್ಒ ವರದಿಯನ್ನು ಚುನಾವಣಾ ಆಯೋಗಕ್ಕೆ ಕಳಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆಲವು ಷರತ್ತುಗಳನ್ನು ವಿಧಿಸಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು.
ಆ ಷರತ್ತಿನ ಅನ್ವಯ ಯಾವುದೇ ವ್ಯಕ್ತಿಯನ್ನು ದೂಷಿಸುವ, ಅವರ ತೇಜೋವಧೆ ಮಾಡುವ ಮಾತುಗಳನ್ನು ಕಾರ್ಯಕ್ರಮದಲ್ಲಿ ಆಡುವಂತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೇಮಂತ್ ಕರ್ಕರೆಯವರಿಗೆ ನಾನು ಶಾಪಕೊಟ್ಟಿದ್ದೆ
ಶುಕ್ರವಾರದಂದು ಭೋಪಾಲ್ನಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡುತ್ತ, ನನ್ನನ್ನು ಸುಳ್ಳು ಆರೋಪದಡಿ ಬಂಧಿಸಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಹೇಮಂತ್ ಕರ್ಕರೆಯವರಿಗೆ ನಾನು ಶಾಪಕೊಟ್ಟಿದ್ದೆ. ಅದರಿಂದ ಅವರು ಮೃತರಾದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕ್ಷಮೆಯಾಚಿಸಿದ್ದ ಸಾಧ್ವಿ ಸಿಂಗ್
ದೇಶದ ಶತ್ರುಗಳು ಇದರಿಂದ ಲಾಭ ಪಡೆಯಬಹುದು ಎಂದೆನಿಸುತ್ತಿದೆ. ಹೀಗಾಗಿ, ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಹಾಗೂ ನೋವಿನಿಂದ ಕ್ಷಮೆಯಾಚಿಸುತ್ತಿದ್ದೇನೆ ಅವರು(ಹೇಮಂತ್ ಕರ್ಕರೆ) ಭಯೋತ್ಪಾದಕನ ಗುಂಡೇಟಿಗೆ ಬಲಿಯಾದರು. ಅವರು ಹುತಾತ್ಮರಾದರು ಎಂದು ಹೇಳಿದರು.ದೇಶದೆಲ್ಲೆಡೆ ಈ ಹೇಳಿಕೆ ವಿರುದ್ಧ ಟೀಕೆ ಕೇಳಿ ಬಂದಿತ್ತು. ಬಿಜೆಪಿ ಕೂಡ ಪ್ರಗ್ಯಾ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದ ಸ್ಪಷ್ಟಪಡಿಸಿತ್ತು.
|
ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ
2008ರ ಸೆಪ್ಟೆಂಬರ್ 29ರಂದು ನಡೆದ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಸತ್ತು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಹಿಂದೂ ಭಯೋತ್ಪಾದನಾ ಸಂಘಟನೆ ಈ ದಾಳಿ ನಡೆಸಿದೆ ಎಂದು ಆರೋಪಿಸಿದ್ದ ಮಹಾರಾಷ್ಟ್ರ ಎಟಿಎಸ್, ಸಾಧ್ವಿ ಮತ್ತು ಇತರರನ್ನು ಬಂಧಿಸಿತ್ತು. 2016ರ ಮೇ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಾಧ್ವಿಗೆ ಕ್ಲೀನ್ ಚಿಟ್ ನೀಡಿತ್ತು.

ಮುಂಬೈ ದಾಳಿಯಲ್ಲಿ ಹೇಮಂತ್ ಕರ್ಕರೆ ಹುತಾತ್ಮ
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ ಅವರು 2008ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು. ಅವರೊಂದಿಗೆ ಇನ್ನಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಮೃತಪಟ್ಟಿದ್ದರು.
ಹೇಮಂತ್ ಕರ್ಕರೆ ಅವರ ತನಿಖೆಯ ಕಾರಣದಿಂದಲೇ ಸಾಧ್ವಿ ಪ್ರಗ್ಯಾ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು.












Click it and Unblock the Notifications