ಕ್ವಾಟರ್ ಏರಿಸಿದರೂ ಟೈಟ್ ಆಗುತ್ತಿಲ್ಲ: ಗೃಹ ಸಚಿವರಿಗೆ ಕುಡಕನ ಪತ್ರ
ಭೋಪಾಲ್, ಮೇ 8: ಒಳಗಿರುವ ಪರಮಾತ್ಮ ಆಡಿಸುವ ಆಟ, ಸಾರಾಯಿ ಅಂಗಡಿಯೇ ನನಗೆ ಈ ದೇಶದ ರಾಜಧಾನಿ ಎನ್ನುವಂತೆ ಕುಡಿದ ಮತ್ತಿನಲ್ಲಿ ಮದ್ಯವ್ಯಸನಿ ನಿರ್ಭೀತಿಯಿಂದ ಏನನ್ನೂ ಬೇಕಾದರೂ ಮಾಡುತ್ತಾನೆ ಎನ್ನುವುದಕ್ಕೆ ಉದಾಹರಣೆಯೊಂದು ಮಧ್ಯ ಪ್ರದೇಶದ ಉಜ್ಜೈನಿಯಿಂದ ವರದಿಯಾಗಿದೆ.
ಒಂದು ಕ್ವಾಟರ್ ಏರಿಸಿದರೂ ಮತ್ತೇರುತ್ತಿಲ್ಲ ಎಂದು ಕುಡುಕನೊಬ್ಬ ನೇರವಾಗಿ ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದಿದ್ದಾನೆ. ಆದರೆ, ಪತ್ರದ ಒಟ್ಟಾರೆ ಸಾರಾಂಶವೇನಂದರೆ, ಗುತ್ತಿಗೆದಾರರು ಎಣ್ಣೆಗೆ ನೀರು ಬೆರೆಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವುದು.
ಓದಲು ವಿಚಿತ್ರವೆನಿಸಿದರೂ, ಮದ್ಯದಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ, ರಾಜ್ಯದ ಆದಾಯಕ್ಕೆ ತೊಂದರೆಯಾಗುತ್ತಿದೆ ಎನ್ನುವ ಸತ್ಯವನ್ನು ಕುಡುಕ ಪತ್ರದ ಮೂಲಕ ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರಿಗೆ ಬರೆದಿದ್ದಾನೆ.

ಕಳೆದ ಇಪ್ಪತ್ತು ವರ್ಷಗಳಿಂದ ಮದ್ಯ ಸೇವಿಸುತ್ತಿದ್ದೇನೆ, ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಮಾಡುವುದು ಹೆಚ್ಚಾಗುತ್ತಿದೆ. ಮದ್ಯದ ಗುತ್ತಿಗೆದಾರರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಲೋಕೇಂದ್ರ ಸೋಥಿಯಾ ಎನ್ನುವ ವ್ಯಕ್ತಿ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾನೆ.
ನನ್ನ ಪತ್ರವನ್ನು ಅರ್ಜಿ ಎಂದು ಸ್ವೀಕರಿಸಿ, ಇದರ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ, ಗ್ರಾಹಕರ ನ್ಯಾಯಾಲಯದ ಮೊರೆ ಹೋಗುವುದಾಗಿ ಸೋಥಿಯಾ ಎಚ್ಚರಿಕೆಯನ್ನು ನೀಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ನಿಮ್ಮ ಅರ್ಜಿಯನ್ನು ಲಘುವಾಗಿ ಪರಿಗಣಿಸಿಲ್ಲ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವ ಭರವಸೆಯನ್ನು ನೀಡಿದ್ದಾರೆ.

ಕುಡುಕನೊಬ್ಬನನ್ನು ಕಲಬೆರೆಕೆಯ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದರೆ, ಇನ್ನೊಂದು ಕಡೆ, ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಭೋಪಾಲ್ ನಗರದ ಮದ್ಯದಂಗಡಿಯೊಂದಕ್ಕೆ ಕಲ್ಲುತೂರಿ ಆಕ್ರೋಶ ಹೊರಹಾಕಿದ್ದರು. "ಇಂತಹ ಅಂಗಡಿಗಳಿಂದ ಕೂಲಿ ಕಾರ್ಮಿಕರ ಹಣ ಪೋಲಾಗುತ್ತದೆ, ಮಹಿಳೆಯರ ಜೀವನ ಹಾಳಾಗುತ್ತದೆ. ಸರಕಾರದ ನೀತಿಗೆ ವಿರುದ್ಧವಾಗಿ ಮದ್ಯದಂಗಡಿ ಇರುವುದರಿಂದ ಇಲ್ಲಿನ ನಿವಾಸಿಗಳು, ಮಹಿಳೆಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ"ಎಂದು ಉಮಾ ಭಾರತಿ ಹೇಳಿದ್ದರು.












Click it and Unblock the Notifications