ರಫೇಲ್ ಜಪ ಮಾಡುತ್ತಿರುವ ರಾಹುಲ್ ಬಗ್ಗೆ ಕಾಂಗ್ರೆಸ್ ನಲ್ಲೇ ಬೇಸರ!
ಭೋಪಾಲ್, ನವೆಂಬರ್ 14: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿರುಸಿನ ಪ್ರಚಾರವೇನೋ ನಡೆಯುತ್ತಿದೆ. ದಿನೇ ದಿನೇ rally ಗಳಲ್ಲಿ ಭಾಗವಹಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ ಸ್ವತಃ ಕಾಂಗ್ರೆಸ್ಸಿಗರಿಗೇ ಇಷ್ಟವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಯಾವಾಗಲೂ ರಫೇಲ್ ಡೀಲ್, ಸಿಬಿಐ, ಆರ್ ಬಿಐ ಎನ್ನುವ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಎಷ್ಟರ ಮಟ್ಟಿಗೆ ಲಾಭವಾದೀತು ಎಂಬುದು ಸ್ಥಳೀಯ ಕಾಂಗ್ರೆಸ್ಸಿಗರ ಪ್ರಶ್ನೆ.
ಯಾವುದೇ ರಾಜ್ಯಗಳ ಜನರ ವಿಶ್ವಾಸಗಳಿಸಬೇಕಾದರೆ ಆಯಾ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು, ಅದನ್ನು ಈಡೇರಿಸುವ ಭರವಸೆ ನೀಡಬೇಕು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮುಂತಾದ ರಾಜ್ಯಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವ್ಯಾವುದರ ಬಗ್ಗೆಯೂ ಮಾತನಾಡದೆ, ಕೇವಲ ಕೇಂದ್ರವನ್ನು ಹಳಿಯುವ ರಾಹುಲ್ ಅವರ ಭಾಷಣ ಸ್ವತಃ ಕಾಂಗ್ರೆಸ್ಸಿಗರಿಗೂ ಇಷ್ಟವಾಗುತ್ತಿಲ್ಲ!

ರಾಜ್ಯದಲ್ಲೇ ಹಾಸಿ ಹೊದೆಯುವಷ್ಟು ಸಮಸ್ಯೆ!
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ರಾಜ್ಯಗಳಲ್ಲಿ ರೈತರ ಸ್ಥಿತಿ ಉತ್ತಮವಾಗಿಲ್ಲ, ಬಡತನ, ನಿರುದ್ಯೋಗವಿದೆ. ಇಲ್ಲಿನ ಬಿಜೆಪಿ ಸರ್ಕಾರಗಳ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಆದರೆ ಇದ್ಯಾವುದರ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡುತ್ತಿಲ್ಲ. ಕೇವಲ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿ, rally ಯ ಸಂದರ್ಭದಲ್ಲೇ ಸ್ಥಳೀಯ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿದರೆ, ಜನರಿಗೆ ವಿಶ್ವಾಸ ಮೂಡುವುದು ಹೇಗೆ?

ಪ್ರಣಾಳಿಕೆಯಲ್ಲಿ ಭರಪೂರ ವಿಶ್ವಾಸ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆಯ ಪಟ್ಟಿ ಬಿಜೆಪಿಗಿಂತ ಹೆಚ್ಚಿದೆ. ರೈತರ ಸಾಲ ಮನ್ನಾ, ಜಾತಿ-ಉಪಜಾತಿ ಆಧಾರದ ಮೇಲೆ ಜನರಿಗೆ ಸೌಲಭ್ಯ ನೀಡುವುದು, ಅವರಿಗೆ ಉದ್ಯೋಗಾವಕಾಶ, ಬಡತನ ನಿರ್ಮೂಲನೆ ಇತ್ಯಾದಿ ಹಲವು ಉದ್ದೇಶಗಳನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಆದರೆ ಪಕ್ಷದ ಅಧ್ಯಕ್ಷರ ಮಾತುಗಳು ಮಾತ್ರ ಈ ಯಾವುದೇ ಭರವಸೆಗಳನ್ನೂ ಕೇಂದ್ರೀಕರಿಸದೆ, ಮೋದಿ ಸರ್ಕಾರದ ಲೋಪ ಕೆದಕುವುದರಲ್ಲಿಯೇ ಮುಗಿದುಹೋಗುತ್ತಿರುವುದು ವಿಷಾದ!

ಋಣಾತ್ಮಕ ಪ್ರಚಾರ ಅಪಾಯ
ಈಗಾಗಲೇ ದೇಶದಲ್ಲಿ ನಡೆದ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುಣ್ಣುವುದಕ್ಕೆ ಈ ಋಣಾತ್ಮಕ ಪ್ರಚಾರವೂ ಒಂದು ಪ್ರಮುಖ ಕಾರಣ. ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಸೋಲು, ಕರ್ನಾಟಕ ಚುನಾವಣೆಯ ಸೋಲುಗಳನ್ನು ಅವಲೋಕಿಸಿದರೆ ಈ ರಾಜ್ಯಗಳಲ್ಲೂ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ತನ್ನ ಸಾಧನೆಗಳ ಬಗ್ಗೆ, ಅಭಿವೃದ್ಧಿಗೆ ಸಂಬಂಧಿಸಿದ ಗುರಿಯ ಬಗ್ಗೆ ಮಾತನಾಡುವ ಬದಲು ಮೋದಿ ಸರ್ಕಾರ ಹುಳುಕುಗಳನ್ನೇ ಹೆಕ್ಕಿ ತೆಗೆದಿದೆ. ಇದೀಗ ಈ ಐದು ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ಸಿಗೆ ಇದೇ ಅಪಾಯ ತಂದೊಡ್ಡಬಹುದು ಎಂಬುದು ಪಕ್ಷದ ಕೆಲ ನಾಯಕರ ಆತಂಕ.

ಎಲ್ಲಿ, ಯಾವಾಗ ಚುನಾವಣೆ?
ಛತ್ತೀಸ್ ಗಢ: ನವೆಂಬರ್ 12 ಮತ್ತು 20 (ಒಟ್ಟು ಕ್ಷೇತ್ರ: 90)
ಮಧ್ಯಪ್ರದೇಶ, ಮಿಜೋರಾಂ: ನವೆಂಬರ್ 28 (ಒಟ್ಟು ಕ್ಷೇತ್ರ: 230, 40)
ರಾಜಸ್ಥಾನ, ತೆಲಂಗಾಣ: ಡಿಸೆಂಬರ್ 07 (ಒಟ್ಟು ಕ್ಷೇತ್ರ: 200, 119)
ಫಲಿತಾಂಶ: ಡಿಸೆಂಬರ್ 11












Click it and Unblock the Notifications