ಯಶವಂತಪುರ ಸಿ.ವಿ.ರಾಮನ್ ರಸ್ತೆ ಬಂದ್: ಪರ್ಯಾಯ ಮಾರ್ಗ ಹೀಗಿದೆ ನೋಡಿ
ಬೆಂಗಳೂರು, ಸೆಪ್ಟಂಬರ್ 28: ಬಿಬಿಎಂಪಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಕಾರಣಕ್ಕೆ ಯಶವಂತಪುರದ ಸರ್ ಸಿ.ವಿ. ರಾಮನ್ ರಸ್ತೆಯಲ್ಲಿ ಒಂದು ತಿಂಗಳ ಕಾಲ ಸಂಚಾರ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಯಶವಂತಪುರದ ಸರ್ ಸಿ.ವಿ.ರಾಮನ್ ರಸ್ತೆಯ ಒಂದು ಬದಿಯಲ್ಲಿ ವೈಟ್ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯ ಒಂದು ಭಾಗವನ್ನು ಸೆಪ್ಟೆಂಬರ್ 27ರ ಮಂಗಳವಾರದಿಂದ ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಈ ರಸ್ತೆಯಲ್ಲಿ ಬಂದ್ ಮಾಡಲಾಗಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಯಶವಂತಪುರ ಸಂಚಾರ ಪೊಲೀಸರು ರಸ್ತೆ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಒಂದು ತಿಂಗಳ ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಸವಾರರು ತಮ್ಮ ನಿಗದಿತ ಸ್ಥಳ ತಲುಪಲು ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಪರ್ಯಾಯ ಮಾರ್ಗ ಯಾವವು?
ಮತ್ತಿಕೆರೆ ಬಿಇಎಲ್ ಯಶವಂತಪುರ ಕಡೆಯಿಂದ ವೃತ್ತದ ಕಡೆಗೆ ಹೋಗುವ ವಾಹನಗಳು (ಲಘು ವಾಹನಗಳಿಗೆ ಮಾತ್ರ) ಯಶವಂತಪುರ ವೃತ್ತ-ಪ್ರವೇಶ ರಸ್ತೆ ಮೂಲಕ ಹೋಗಿ ಎಚ್ಎಂಟಿ ಮುಖ್ಯ ರಸ್ತೆಯಲ್ಲಿ ಎಡ ತಿರುವು ತೆಗೆದುಕೊಳ್ಳಬೇಕು. ಇನ್ನು ಭಾರಿ ವಾಹನಗಳು ಮತ್ತು ಬಿಎಂಟಿಸಿ ಬಸ್ಗಳು ಮಾತ್ರ ಯಶವಂತಪುರ ವೃತ್ತದಲ್ಲಿ ಎಡ ತಿರುವು ಪಡೆದು ಯಶವಂತಪುರ ಬಜಾರ್ ಮಾರ್ಗವಾಗಿ ಬಾಂಬೆ ಡೈಯಿಂಗ್ ರಸ್ತೆ, ಎಚ್ಎಂಟಿ ಮುಖ್ಯ ರಸ್ತೆಗೆ ಎಡ ತಿರುವು ಪಡೆದುಕೊಳ್ಳಬೇಕು.
ಬಿಇಎಲ್ ಸರ್ಕಲ್ನಿಂದ ಯಶವಂತಪುರಕ್ಕೆ ಬರುವ ವಾಹನಗಳು ಯು ಟರ್ನ್ ಪಡೆದು ಬಾಂಬೆ ಡೈಯಿಂಗ್ ಆರ್ಟಿಒ ಕಚೇರಿ ಮಾರ್ಗವಾಗಿ ಯಶವಂತಪುರ ವೃತ್ತಕ್ಕೆ ಸಾಗಬೇಕಿದೆ. ಇನ್ನೂ ತುಮಕೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ತುಮಕೂರು ರಸ್ತೆ, ಆರ್ಎಂಸಿ ಯಾರ್ಡ್ನಿಂದ ಮಾರಪ್ಪನಪಾಳ್ಯ ಹೂವಿನ ಮಾರುಕಟ್ಟೆ, ಸೋಪ್ ಫ್ಯಾಕ್ಟರಿ ವೃತ್ತ ಹಾದು ನವರಂಗದ ಮೂಲಕ ರಾಜ್ಕುಮಾರ್ ರಸ್ತೆ ಅನುಸರಿಸಿ ತೆರಳಬೇಕಿದೆ.
ಅದೇ ರೀತಿ ಯಶವಂತಪುರ ವೃತ್ತದಿಂದ ಮೇಖ್ರಿ ವೃತ್ತಕ್ಕೆ ಹೋಗುವ ವಾಹನಗಳು ಯಶವಂತಪುರ ವೃತ್ತದಿಂದ ರಸ್ತೆ ಮೂಲಕ ಡಿಸಿಪಿ ಕಚೇರಿ ಬಿಎಚ್ಇಎಲ್ ಜಂಕ್ಷನ್ನಲ್ಲಿ ಸರ್ವಿಸ್ ರಸ್ತೆಗೆ ಇಳಿದು ಮುಂದೆ ಸಾಗಿ ಎಡ ತಿರುವ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.