ಎಮ್ಇಎಸ್ ಬ್ಯಾನ್ಗೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ
ಬೆಂಗಳೂರು ಡಿಸೆಂಬರ್ 31: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಮ್ಇಎಸ್) ನಿಷೇಧ ಮಾಡುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ನಗರದ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ಎಂಇಎಸ್ ನಿಷೇಧ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಎಮ್ಇಎಸ್ ಪುಂಡರ ವರ್ತನೆಯನ್ನು ಖಂಡಿಸಿ ಕರ್ನಾಟಕ ಬಂದ್ಗೆ ಕರೆ ನೀಡಲು ವಾಟಾಳ್ ಮುಂದಾಗಿದ್ದರು. ಆದರೆ ಸಿಎಂ ಬಸವರಾಜ್ ಬೊಮ್ಮಾಯಿ ಮಧ್ಯಸ್ಥಿಕೆಯಿಂದಾಗಿ ಕರ್ನಾಟಕ ಬಂದ್ ಕೈಬಿಡಲಾಗಿದೆ. ಇಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕನ್ನಡ ಪರ ಹೋರಾಟಗಾರರು, ಕರವೇ ಕಾರ್ಯಕರ್ತರು ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತೀ ಬಾರಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ವಾಟಾಳ್ ನಾಗರಾಜ್ ಈ ಬಾರಿ ಆಟೋದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಜೊತೆಗೆ ಎಮ್ಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿದರು. ಪುಂಡರು ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು, ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿದ್ದರು. ರಾಜ್ಯದಲ್ಲಿ ಎಮ್ಇಎಸ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಹೇರಲಾಗಿತ್ತು.
ಆದರೆ, ಎಮ್ಇಎಸ್ ಅನ್ನು ರಾಜ್ಯದಲ್ಲಿ ವೋಟ್ ಬ್ಯಾಂಕ್ ಮಾಡಿಕೊಂಡ ಜನಪ್ರತಿನಿಧಿಗಳು ಅದನ್ನು ಬ್ಯಾನ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ತಿಳಿಸಿದ್ದಾರೆ.
ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ರಾಡ್ನಿಂದ ಹೊಡೆದು ಭಗ್ನಗೊಳಿಸಿದ್ದಾರೆ. ಮೂರ್ತಿಯನ್ನು ಹೊಡೆದು ಭಗ್ನಗೊಳಿಸುತ್ತಿರುವ ಶಬ್ದ ಕೇಳಿದಾಗ ಸ್ಥಳೀಯರು ಮನೆಯಿಂದ ಹೊರಗೆ ಬಂದಿದ್ದು, ಇದನ್ನು ಗಮನಿಸಿದ ದುಷ್ಕರ್ಮಿಗಳು ತಕ್ಷಣ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಶಿವಾಜಿ ಪ್ರತಿಮೆಗೆ ಮಸಿ ಬಳಿದು ವಿಡಿಯೊ ಮಾಡಿಕೊಂಡ ಆರೋಪಿಗಳು ಆ ವಿಡಿಯೊವನ್ನ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದರು. ಶೇರ್ ಆದ ವಿಡಿಯೊವನ್ನು ನವೀನ್ ಎಂಬಾತ ವೈರಲ್ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ಬೆನ್ನಲ್ಲೆ ಗಲಾಟೆ ಶುರುವಾಗಿತ್ತು. ಸದ್ಯ ನವೀನ್ ಸೇರಿ ಇತರೆ ಐದು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಯಾವುದೇ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.