ರಾಗೀಗುಡ್ಡದ ಹನುಮ ಜಯಂತಿ ಉತ್ಸವಕ್ಕೆ ಅದ್ದೂರಿ ಚಾಲನೆ
ಬೆಂಗಳೂರು, ಡಿ 12: ಜಯನಗರ ಒಂಬತ್ತನೇ ಬ್ಲಾಕ್ ನಲ್ಲಿರುವ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನ್ನೆರಡು ದಿನಗಳ ಕಾಲ ನಡೆಯುವ ಹನುಮಜ್ಜಯಂತಿ ಉತ್ಸವಕ್ಕೆ ಬುಧವಾರ (ಡಿ 12) ಸಂಜೆ ಅದ್ದೂರಿ ಚಾಲನೆ ದೊರಕಿದೆ.
ಡಿಸೆಂಬರ್ 12ರಿಂದ 23ನೇ ತಾರೀಕನವರೆಗೆ ಈ ಉತ್ಸವ ನಡೆಯಲಿದ್ದು, ಇದಾದ ನಂತರ ದೇವಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 30ರ ವರೆಗೆ ನಡೆಯಲಿದೆ. 23.12.2018ರ ವರೆಗೆ ನಡೆಯುವ ಪ್ರಮುಖ ಕಾರ್ಯಕ್ರಮಗಳಲ್ಲಿ ಡಿಸೆಂಬರ್ 20ರಂದು ನಡೆಯುವ ಹನುಮಜ್ಜಯಂತಿ ಕಾರ್ಯಕ್ರಮವೂ ಒಂದು.
ಬುಧವಾರ ನಡೆದ ಉದ್ಘಾಟನಾ ಕಾರ್ಯಕ್ರಮ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಗಳ ದಿವ್ಯಸಾನಿಧ್ಯದಲ್ಲಿ ನಡೆಯಿತು. ಅದಕ್ಕೂ ಮುನ್ನ, 9ನೇ ಬ್ಲಾಕ್ ಬಸ್ ನಿಲ್ದಾಣದಿಂದ ರಾಗೀಗುಡ್ಡ ದೇವಾಲಯದ ವರೆಗೆ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀಗಳನ್ನು ಕರೆದುಕೊಂಡು ಬರಲಾಯಿತು.

ಚೆಂಡೆ, ಶಾಲಾಮಕ್ಕಳ ಬ್ಯಾಂಡ್, ಕೋಲಾಟ, ಭಜನೆ, ಮಂತ್ರಘೋಷಗಳ ಮೂಲಕ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಐದು ಜನ ವಿದ್ವಾಂಸರನ್ನು ಸನ್ಮಾನಿಸಲಾಯಿತು.
ರಾಗೀಗುಡ್ಡ ದೇವಾಲಯ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, 'ಒನ್ ಇಂಡಿಯಾ' ಸಂಸ್ಥೆ ಹೊರತಂದ ದೇವಾಲಯದ ಸಾಕ್ಷ್ಯಚಿತ್ರಕ್ಕೆ (ಡಾಕ್ಯುಮೆಂಟರಿ) ಪೇಜಾವರ ಶ್ರೀಗಳು ಚಾಲನೆ ನೀಡಿದರು. ಸಾಕ್ಷ್ಯಚಿತ್ರದ ವಿಡಿಯೋ ಲಿಂಕ್

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಬೆಂಗಳೂರು ನಗರದ ಹೃದಯ ಭಾಗದಲ್ಲಿ ರಾಗೀಗುಡ್ಡ ಬೆಳೆದುಬಂದ ರೀತಿ ಅದ್ಭುತ. ಹಾಗೆಯೇ ಈ ದೇವಾಲಯ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ದೇವಾಲಯದ ಧರ್ಮದರ್ಶಿಗಳು, ಇನ್ನೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಎಲ್ಲರೂ ಭಗವಂತನ ಕೃಪೆ ಪಾತ್ರರಾಗಲಿ, ನಮ್ಮ ಹಿಂದೂ ಧರ್ಮ ಎತ್ತರಕ್ಕೆ ಬೆಳೆಯಲಿ ಎಂದು ಶ್ರೀಗಳು ಹೇಳಿದರು.












Click it and Unblock the Notifications