ಇಷ್ಟು ಕಡಿಮೆ ಟೈಮಲ್ಲಿ ಎಂ.ಜಿ ರೋಡ್ನಿಂದ ಬೆಳ್ಳಂದೂರಿಗೆ ಹೋಗಬಹುದಾ?
ಐಟಿ ಸಿಟಿ ಬೆಂಗಳೂರಿನಲ್ಲಿರುವ ಬೆಳ್ಳಂದೂರು ಪ್ರದೇಶವು ಹೆಚ್ಚು ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಪ್ರಮುಖವಾದುದು. ಈ ಭಾಗದಲ್ಲಿ ಹೆಚ್ಚು ಐಟಿ ಮಂದಿಯೇ ಇರುವುದರಿಂದ ಪೀಕ್ ಅವರ್ನಲ್ಲಿ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿರುತ್ತಾರೆ. ಇವರಿಗೆಲ್ಲ ಶೀಘ್ರವೇ ಟ್ರಾಫಿಕ್ನಿಂದ ಮುಕ್ತಿ ನೀಡುವ ಕೆಲಸಕ್ಕೆ ರಾಜ್ಯ ಸರ್ಕಾರ ವಿಶೇಷ ಕಾಳಜಿ ತೋರಿಸಿದೆ.
ಹೌದು, ಅಗರದಿಂದ ಸರ್ಜಾಪುರದವರೆಗೆ ರಸ್ತೆ ಅಗಲೀಕರಣಕ್ಕೆ ಭೂಮಿ ಹಸ್ತಾಂತರಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಮತ್ತೊಂದೆಡೆ ಎಂ.ಜಿ.ರಸ್ತೆಯಿಂದ ಬೆಳ್ಳಂದೂರಿಗೆ ಕೇವಲ ಐದರಿಂದ ಎಂಟು ನಿಮಿಷಗಳಲ್ಲಿ ತಲುಪಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಈಗಿನ ಟ್ರಾಫಿಕ್ ಅವಧಿಯಲ್ಲಿ ಈ ಪ್ರದೇಶ ತಲುಪಲು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗಿದೆ.

ಈ ಬಗ್ಗೆ ನಿನ್ನೆ ಮಾಹಿತಿ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಅಗರದಿಂದ ಸರ್ಜಾಪುರದವರೆಗಿನ ರಸ್ತೆ ಅಗಲೀಕರಣಕ್ಕಾಗಿ 12.34 ಎಕರೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ಇದು ಎಂ.ಜಿ.ರಸ್ತೆಯಿಂದ ಬೆಳ್ಳಂದೂರು ತಲುಪುವ ಪ್ರಯಾಣದ ಸಮಯವನ್ನು ಬಹುತೇಕ ತಗ್ಗಿಸಲಿದೆ ಎಂದು ಹೇಳಲಾಗುತ್ತಿದೆ.
ಟ್ರಾಫಿಕ್ ತಗ್ಗಿಸುವ ಉದ್ದೇಶದೊಂದಿಗೆ ಮಿಲಿಟರಿ ಜಾಗವನ್ನು ಬಿಬಿಎಂಪಿಗೆ ಪಡೆಯುವ ಕುರಿತು ಕೇಂದ್ರ ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದರು. ಅದರಂತೆ ಜಾಗ ನೀಡಲು ರಕ್ಷಣಾ ಇಲಾಖೆ ಒಪ್ಪಿದೆ. ಮೊದಲ 3.5 ಕಿ.ಮೀ.ಗೆ ₹35 ಕೋಟಿ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆದಿದ್ದೇವೆ. ರಕ್ಷಣಾ ಸಚಿವಾಲಯವು ಉಳಿದ 10.77 ಎಕರೆ ಭೂಮಿಯನ್ನು ಹಸ್ತಾಂತರಿಸಿದ ನಂತರ, ಇದು ನಗರದ ಕೇಂದ್ರ ಭಾಗದಿಂದ ಐಟಿ ಹಬ್ಗೆ ಸಂಚಾರ ಸುಗಮಗೊಳಿಸಲಿದೆ ಎಂದಿದ್ದಾರೆ.
ಈ ಯೋಜನೆಯಿಂದಾಗಿ ವಿಶೇಷವಾಗಿ ಬೆಂಗಳೂರು ಪೂರ್ವ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರು ಅಭಿವೃದ್ಧಿ ಸಚಿವನಾಗಿರುವ ನನಗೆ ಪೂರ್ವ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಕುರಿತು ಪ್ರತಿದಿನ ಎಂಟರಿಂದ ಹತ್ತು ಇಮೇಲ್ಗಳು ಬರುತ್ತಿದ್ದವು. ಹಾಗಾಗಿ ಇಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತು ಖುದ್ದು ನಾನೇ ಪರಿಶೀಲನೆ ನಡೆಸಿದ್ದೆ. ರಕ್ಷಣಾ ಸಚಿವಾಲಯದ ನೆರವಿನೊಂದಿಗೆ ರಸ್ತೆಯ ಅಗಲೀಕರಣ ಮಾಡಲಿದ್ದು, ಈ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದ್ದಾರೆ.

ಇದರ ಜೊತೆಗೆ ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕೂಡ ಕರೆದಿದ್ದೇನೆ. ಹೀಗಾಗಿ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರನ್ನು ಕರೆದು ಧನ್ಯವಾದ ಹೇಳಿದ್ದೇನೆ. ಬೆಂಗಳೂರಿನ ಮತ್ತೊಂದು ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಹೆಬ್ಬಾಳ ಕಡೆಗೂ 10 ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಹೆಬ್ಬಾಳ ಬಳಿಯ ಮಿಲಿಟರಿ ಡೈರಿ ಫಾರ್ಮ್ ಬಳಿ ಸುರಂಗ ಮಾರ್ಗಕ್ಕಾಗಿ ಎರಡು ಎಕರೆಗಾಗಿ ರಕ್ಷಣಾ ಇಲಾಖೆಗೆ ಸರ್ಕಾರ ಮನವಿ ಸಲ್ಲಿಸಿದೆ. ರಕ್ಷಣಾ ಭೂಮಿ ಹಸ್ತಾಂತರಕ್ಕೆ ಪ್ರತಿಯಾಗಿ ರಕ್ಷಣಾ ಸಚಿವಾಲಯವು ಕೆಲವು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಮನವಿ ಮಾಡಿದೆ. ನಾವು ಅವರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications