ಜನಸ್ನೇಹಿ ಟೋಯಿಂಗ್ ನಿಯಮ ರೂಪಗೊಂಡಿಲ್ಲ: ಬೆಂಗಳೂರಿನಲ್ಲಿ ಮತ್ತಷ್ಟು ದಿನ ಟೋಯಿಂಗ್ ಬಂದ್!
ಬೆಂಗಳೂರು, ಮಾ. 26: ನಗರದ ವಾಹನ ಸವಾರರನ್ನು ಕನಸಲ್ಲೂ ಕಾಡುತ್ತಿದ್ದ ಸಂಚಾರ ಪೊಲೀಸರ ಟೋಯಿಂಗ್ ಮತ್ತಷ್ಟು ಕಾಲ ಸ್ಥಗಿತಗೊಳ್ಳಲಿದೆ.
'ಸದ್ಯದ ಪರಿಸ್ಥಿತಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಮರು ಅರಂಭಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಅರ್. ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ದಿವ್ಯಾಂಗ ಮಹಿಳೆಗೆ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್ಐ ನಾರಾಯಣ್ ಬೂಟು ಕಾಲಿನಲ್ಲಿ ಒದ್ದ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಜಧಾನಿಯಲ್ಲಿ ಟೋಯಿಂಗ್ ಸ್ಥಗಿತಗೊಂಡಿತ್ತು. ಬೆಂಗಳೂರಿನ ರಸ್ತೆಗಳಿಗೆ ಇಳಿಯುತ್ತಿದ್ದ 110 ಕ್ಕೂ ಅಧಿಕ ಟೋಯಿಂಗ್ ವಾಹನಗಳು ಸ್ಥಗಿತಗೊಂಡಿದ್ದವು. ಟೋಯಿಂಗ್ ಕೆಲಸ ನಂಬಿಕೊಂಡಿದ್ದ ಸುಮಾರು ನಾಲ್ಕು ನೂರು ಕೆಲಸಗಾರರು ಇದೀಗ ಇತರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟೋಯಿಂಗ್ ವಾಹನ ಕಾರ್ಯಚರಣೆ ಸಂಪೂರ್ಣ ಸ್ಥಗಿತಗೊಂಡಿದೆ.

ಪಾರದರ್ಶಕ ನಿಯಮದಿಂದ ಲಾಸ್ ಗ್ಯಾರಂಟಿ
ರಾಜ್ಯದಲ್ಲಿ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಒಳಗೊಂಡಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಗೃಹ ಸಚಿವರು ಸಭೆ ನಡೆಸಿದ್ದರು. ಆದರೆ, ಘಟನೆ ನಡೆದು ಎರಡು ತಿಂಗಳು ಕಳೆದರೂ ಜನ ಸ್ನೇಹಿ ಟೋಯಿಂಗ್ ನಿಯಮ ಇನ್ನೂ ರೂಪಗೊಂಡಿಲ್ಲ. ಟೋಯಿಂಗ್ ಮಾಡುವ ವಾಹನಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಟೋಯಿಂಗ್ ವಾಹನಗಳಿಗೆ ಪಿಎಸ್ಐ ನೇಮಕ ಸೇರಿದಂತೆ ಅನೇಕ ಸಲಹೆಗಳು ಕೇಳಿ ಬಂದಿದ್ದವು. ಪಾರದರ್ಶಕವಾಗಿ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿದ್ದರು. ಸದ್ಯದ ಸ್ಥಿತಿಯಲ್ಲಿ ಪಾರದರ್ಶಕ ಟೋಯಿಂಗ್ ನಿಯಮ ಇನ್ನೂ ರೂಪಗೊಂಡಿಲ್ಲ. ಇಂತಹ ಪಾರದರ್ಶಕ ನಿಯಮಗಳನ್ನು ಒಪ್ಪಿ ಟೋಯಿಂಗ್ ವಾಹನ ಮಾಲೀಕರು ತಮ್ಮ ಟೋಯಿಂಗ್ ವಾಹನಗಳನ್ನು ಪೊಲೀಸ್ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡುವುದು ಅನುಮಾನ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಟೋಯಿಂಗ್ ಅರಂಭಿಸುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೋಯಿಂಗ್ ವಾಹನಗಳಿಗೆ ದಿನಕ್ಕೆ 12 ವಾಹನ ಟೋಯಿಂಗ್ ಮಾಡಿದ ಶುಲ್ಕ ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕು. ಸರಾಸರಿ ಅರು ಸಾವಿರ ರೂ. ದಿನಕ್ಕೆ ಆದಾಯ ಬರುತ್ತದೆ. ಆದರೆ, ಅರು ಸಾವಿರ ರೂಪಾಯಿ ಆದಾಯದಲ್ಲಿ ಟೋಯಿಂಗ್ ವಾಹನ ಚಾಲಕ, ನಾಲ್ವರು ಕೆಲಸಗಾರರು, ಇಂಧನ ವೆಚ್ಚ ಸರಿ ದೂಗಿಸಲು ಕಷ್ಟವಾಗುತ್ತದೆ. ಟೋಯಿಂಗ್ ವಾಹನ ಮಾಲೀಕರು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಮಾತುಗಳು ಟೋಯಿಂಗ್ ವಾಹನ ಮಾಲೀಕರಿಂದ ಹೊರ ಬರುತ್ತಿರುವ ಮಾತುಗಳು.

ಈ ಹಿಂದೆ ದಿನಕ್ಕೆ ಐವತ್ತು ವಾಹನ ಟೋಯಿಂಗ್ ಮಾಡಿದರೆ, ಕನಿಷ್ಠ 40 ವಾಹನಗಳಿಂದ ಅರ್ಧ ದಂಡ ಪಡೆದು ಟೋಯಿಂಗ್ ಆಗಿದ್ದ ವಾಹನ ಬಿಟ್ಟು ಕಳಿಸುತ್ತಿದ್ದರು. ಇದರಿಂದ ಟೋಯಿಂಗ್ ವಾಹನ ಮಾಲೀಕರ ಜೇಬು ತುಂಬುತ್ತಿತ್ತು. ಕೆಲಸಗಾರರ ವೇತನ, ವಾಹನ ಇಂಧನ ವೆಚ್ಚ, ಇತರೆ ಖರ್ಚು ವೆಚ್ಚ ಹೋಗಿ ಒಂದಷ್ಟು ಹಣ ಉಳಿಯುತ್ತಿತ್ತು. ಹೀಗಾಗಿ ಪ್ರಮುಖ ಠಾಣೆಗಳಿಗೆ ವಾಹನ ಹಾಕಿಸಿಕೊಳ್ಳಲು ಹಣ ಕೊಡಲು ಟೋಯಿಂಗ್ ವಾಹನ ಸಿಬ್ಬಂದಿ ಮುಂದಾಗುತ್ತಿದ್ದರು. ಅದರೆ, ಪಾರದರ್ಶಕ ನಿಯಮ ಜಾರಿಗೆ ತಂದಲ್ಲಿ, ಟೋಯಿಂಗ್ ವಾಹನ ಮಾಲೀಕರಿಗೆ ಏನೂ ಉಳಿಯುವುದಿಲ್ಲ. ಹೀಗಾಗಿ ಪಾರದರ್ಶಕ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜರಿಗೆ ತಂದರೂ ಟೋಯಿಂಗ್ ವಾಹನಗಳು ಬೀದಿಗೆ ಇಳಿಯುವುದು ಅನುಮಾನ.
ಪರಕಾಷ್ಠೆ ತಲುಪಿದ್ದ ಟೋಯಿಂಗ್:
ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವಿನ ಸಂಘರ್ಷ ಪರಕಾಷ್ಠೆ ತಲುಪಿತ್ತು. ನೋ ಪಾರ್ಕಿಂಗ್ ಮಾಡುವ ವಾಹನಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಟೋಯಿಂಗ್ ಸಿಬ್ಬಂದಿ ವಸೂಲಿ ಮಾಡುವುದನ್ನೇ ಕರಗತ ಮಾಡಿಕೊಂಡಿದ್ದರು. ರಶೀದಿ ಇಲ್ಲದೇ ಜನ ಅರ್ಧ ದಂಡ ಕಟ್ಟಿ ವಾಹನ ಬಿಡಿಸಿಕೊಂಡು ರೋಸಿ ಹೋಗಿದ್ದರು. ಕೆಲವೆಡೆಯಂತೂ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ವರದಿಯಾಗಿದ್ದವು.

ಟೋಯಿಂಗ್ ನಿಲ್ಲಿಸಿದ ಮಹಿಳೆ:
ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ದಿವ್ಯಾಂಗ ಮಹಿಳೆ ಸಂಚಾರ ಪೊಲೀಸ್ ಎಎಸ್ಐ ನಾರಾಯಣ್ ಎಂಬುವರಿಗೆ ಕಲ್ಲು ಹೊಡೆದಿದ್ದರು. ರಕ್ತ ಬಂದಿದ್ದರಿಂದ ರೊಚ್ಚಿಗೆದ್ದಿದ್ದ ಎಎಸ್ಐ ನಾರಾಯಣ್, ಸಾರ್ವಜನಿಕವಾಗಿ ಆ ದಿವ್ಯಾಂಗ ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ರಾಜಧಾನಿಯಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಟೋಯಿಂಗ್ ಬಂದ್ ಮಾಡಲಾಗಿದ್ದ, ಸದ್ಯದ ಸ್ಥಿತಿಯಲ್ಲಿ ಟೋಯಿಂಗ್ ಮರು ಅರಂಭವಾಗುವ ಯಾವ ಲಕ್ಷಣ ಗೋಚರಿಸುತ್ತಿಲ್ಲ.












Click it and Unblock the Notifications