ಮೈಲಾರ ಜಾತ್ರೆ ನಾಚಿಸುವ ಕಡಲೆಕಾಯಿ ಪರಿಷೆ: ಈ ಬಾರಿ ಕಡಲೆ ಕಮ್ಮಿ, ಬರೀ ಜನ..ಜನ
ಶತಮಾನಗಳ ಹಿಂದೆ ಆರಂಭವಾದ ಸಾಂಸ್ಕೃತಿಕ/ಜಾನಪದ ಸೊಗಡಿನ ಜಾತ್ರೆಯೊಂದು, ಸಿಲಿಕಾನ್ ಸಿಟಿಯಲ್ಲಿ, ಇಂದಿಗೂ ಈ ಮಟ್ಟಿನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದರೆ ಅದು ನಿಜಕ್ಕೂ ಶ್ಲಾಘನೀಯ.
ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದ ಬೆಂಗಳೂರಿನ ಜನಪ್ರಿಯ 'ಕಡಲೆಕಾಯಿ ಪರಿಷೆ", ಈಗ ಬಹುತೇಕ ಏಳರಿಂದ ಹತ್ತು ದಿನಗಳ ಕಾಲ ವಿಸ್ತರಿಸಿಕೊಂಡಿದೆ. ಲಕ್ಷಾಂತರ ಮಂದಿ, ಈ ಜಾತ್ರೆಯಲ್ಲಿ ಒಟ್ಟಾರೆಯಾಗಿ ಭಾಗವಹಿಸುತ್ತಾರೆ.
ನವೆಂಬರ್ 25ರಿಂದ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ
ಹಸಿ, ಬೇಯಿಸಿದ, ಹುರಿದ ಕಡಲೆಕಾಯಿ ಈ ಜಾತ್ರೆಯ ಪ್ರಧಾನ ಆಕರ್ಷಣೆ. ಆದರೆ, ಬಲೂನ್ ನಿಂದ ಹಿಡಿದು ಇಂಡೋಲಿನ್ ಸ್ಟೌವ್ ವರೆಗೆ, ಜೊತೆಗೆ, ಇಂತದ್ದು ಸಿಗುವುದಿಲ್ಲ ಎನ್ನುವ ಹಾಗೇ ಹಲವು ಬಗೆಯ ಖಾದ್ಯಗಳು, ಬಸವನಗುಡಿ ರಸ್ತೆಯಲ್ಲಿ ಮತ್ತು ಇಕ್ಕೆಲ ರಸ್ತೆಗಳಲ್ಲಿ ಹರಡಿಕೊಂಡು ಇರುತ್ತವೆ.
ಬಣ್ಣ ಬಣ್ಣದ ದೀಪಗಳು, ಚಿಣ್ಣರ ಕಣ್ ಸೆಳೆಯುವ ಬೊಂಬೆಗಳು, ಆಟಿಕೆಗಳು, ಜಯಂಟ್ ವ್ಹೀಲ್, ಡ್ರ್ಯಾಗನ್, ಕೊಲಂಬಸ್ ಆಟಗಳು, ರಂಗೋಲಿ ಐಟಂಗಳು, ಬೆಡ್ಸೀಟ್, ಕುಂಕುಮ ಬೊಟ್ಟುಗಳು, ಹಳ್ಳಿಕಡೆ ಹೆಚ್ಚಾಗಿ ಬಳಸುವ ವಸ್ತುಗಳು.. ಹೀಗೆ, ಇವೆಲ್ಲವನ್ನು ಶಿಸ್ತಾಗಿ ಜೋಡಿಸಿ ಇಟ್ಟಿರುವುದನ್ನು ನೋಡುವುದೇ ಒಂದು ಚೆಂದ.
ಬೆಂಗಳೂರಿನ ವಿವಿಧ ಕಡೆಯಿಂದ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಆಂಧ್ರ, ತಮಿಳುನಾಡು ಕಡೆಯಿಂದ ಬರುವ ವ್ಯಾಪಾರಸ್ಥರು, ಒಂದು ವಾರದ ಮುಂಚೆನೇ ಇಲ್ಲಿ ಟೆಂಟ್ ಹಾಕಿ, ಲಾಭನಷ್ಟದ ಲೆಕ್ಕಾಚಾರವನ್ನು ಅರಸಿಕೊಂಡು ಬಂದಿರುತ್ತಾರೆ. ಕಡಲೆಕಾಯಿ ಜೊತೆ ಮಂಡಕ್ಕಿ, ಬೆಲ್ಲದಚ್ಚುಗಳು, ಬೆಲ್ಲದುಂಡೆಗಳು, ತಿಪಟೂರಿನ ಕೊಬ್ಬರಿ ಚೂರು, ಖಾರಾ ಐಟಂಗಳನ್ನೂ ಇವರು ಹೊತ್ತು ತಂದಿರುತ್ತಾರೆ.
ಕಡಲೆಕಾಯಿ ಪರಿಷೆಗೆ ಧಾರ್ಮಿಕ ಹಿನ್ನಲೆಯೂ ಇದೆ. ಸಮೃದ್ಧವಾಗಿ ಬೆಳೆದು ನಿಂತ ಕಡಲೆಕಾಯಿ ಬೆಳೆಯನ್ನು ಬಸವ ಹಾಳು ಮಾಡುತ್ತಿತ್ತಂತೆ. ಇದರ ಉಪಟಳ ತಾಳದೆ ರೈತರು ಬಸವನನ್ನು ಅಟ್ಟಿಸಿಕೊಂಡು ಹೊರಟರು. ರೈತರಿಂದ ತಪ್ಪಿಸಿಕೊಂಡು ಬಂದ ಬಸವ ಸುಂಕೇನಹಳ್ಳಿ (ಈಗಿನ ಬಸವನಗುಡಿ) ಸಮೀಪದ ಬೆಟ್ಟ ಏರಿ ಕಲ್ಲಾಗಿಹೋದ.
ಇದನ್ನು ನೋಡಿದ ರೈತರು ಇದು ಸಾಮಾನ್ಯ ಬಸವನಲ್ಲ, ಶಿವನ ವಾಹನ ಎಂದು ನಂಬಿ, ತಮ್ಮ ತಪ್ಪಿಗಾಗಿ ರೈತರು ಪ್ರತಿವರ್ಷವೂ ಬೆಳೆದ ಕಡಲೆಕಾಯಿಯನ್ನು ಬಸವನಿಗೆ ಮೊದಲು ಅರ್ಪಿಸಿ ತಾವು ಮಾಡಿದ ತಪ್ಪನ್ನು ಮನ್ನಿಸು ಎಂದು ಬೇಡಿದರಂತೆ. ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡಿದರೆ, ಮುಂದಿನ ಬೆಳೆಗಳು ಚೆನ್ನಾಗಿ ಬರಲಿದೆ ಎನ್ನುವುದು ರೈತರ ನಂಬಿಕೆ.
ಬಿಸಾಕಿದ ಕಡಲೆಕಾಯಿ ಸಿಪ್ಪೆಯನ್ನು ರಾತ್ರಿ ವೇಳೆ ಕಲ್ಲಿನ ರೂಪದಲ್ಲಿ ಅದೃಶ್ಯನಾಗಿದ್ದ ಬಸವ ನಿಜ ರೂಪ ತಾಳಿ ತಿನ್ನುತ್ತಾನೆ ಎನ್ನುವ ನಂಬಿಕೆಯೂ ಇದೆ. ಇದನ್ನೆಲ್ಲಾ ನಂಬುವುದು ಬಿಡುವುದು, ಅವರವರ ವಿವೇಚನೆಗೆ ಬಿಟ್ಟ ವಿಚಾರ. ಅದೇನೇ ಇರಲಿ, ನಗರದ ಜಂಜಾಟದ ಬದುಕಿನಲ್ಲೂ ಹಳ್ಳಿಯ ಸೊಗಡನ್ನು ಸವಿಯಬೇಕು ಅಂತಿದ್ದರೆ ತಪ್ಪದೆ ಈ ಪರಿಷೆಗೆ ಹೋಗಲೇಬೇಕು.
ಅಂದ ಹಾಗೇ.. ಈ ಬಾರಿ ಪರಿಷೆಯ ಭಾನುವಾರದ (ನ 24) ಹಸಿ ಕಡಲೆಕಾಯಿ ಎರಡು ಸೇರಿನ ಬೆಲೆ ಐವತ್ತು. ಹುರಿದ ಕಡಲೆಕಾಯಿ ಎರಡು ಸೇರಿನ ಬೆಲೆ ಅರವತ್ತು, ಬೇಯಿಸಿದ ಕಡಲೆಕಾಯಿ ಬೆಲೆ ಸೇರೊಂದಕ್ಕೆ ಮೂವತ್ತು.