ಟಿಪ್ಪು ಸುಲ್ತಾನ್ ಪೋಸ್ಟರ್ ಹರಿದ ಪುನೀತ್ ಕೆರೆಹಳ್ಳಿ ಮತ್ತು ಇತರರು
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಪ್ರತಿಯೊಬ್ಬ ಭಾರತೀಯರು ಹೆಮ್ಮೆಯ ಪ್ರತೀಕವಾಗಿ ಅದ್ದೂರಿಯಾಗಿ ಆಚರಿಸಬೇಕು. ಆದರೆ ಕೆಲವು ಸಮಾಜ ಘಾತುಕ ಶಕ್ತಿಗಳು ಯಾವುದಾದರೂ ನೆಪವನ್ನು ತೆಗೆದು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ನಿರಂತರ ಯತ್ನವನ್ನು ಮಾಡುತ್ತಿರುತ್ತವೆ.
ಕಾಂಗ್ರೆಸ್ ಪಕ್ಷ ಹಾಕಿದ್ದ ಟಿಪ್ಪು ಸುಲ್ತಾನ್ ಫೋಸ್ಟರ್ ಗಳನ್ನು ಹರಿದು ಹಾಕುವ ಮೂಲಕ ಸಾಮರಸ್ಯಕ್ಕೆ ಕಿಚ್ಚು ಹಚ್ಚು ಕೆಲಸವನ್ನು ಮಾಡಲಾಗಿದೆ. ಶಿವಮೊಗ್ಗದ ಮಾಲ್ನಲ್ಲಿ ಒಬ್ಬಾತ ವೀರ್ ಸಾವರ್ಕರ್, ವಲ್ಲಬಾಯ್ ಫೋಟೋ ತೆಗೆಸಿ ಉದ್ಧಟತನ ತೋರಿದ್ದ. ಈಗ ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಪುನೀತ್ ಕೆರೆಹಳ್ಳಿ ಮತ್ತು ಇತರರು ದುಂಡಾವರ್ತನೆ ತೋರಿದ್ದಾರೆ.
ಸ್ವಾತಂತ್ರ್ಯ, ದೇಶ ಕುರಿತು ಡಿಕೆ ಶಿವಕುಮಾರ್ Rapid ಉತ್ತರ
ಕೆ. ಆರ್. ಸರ್ಕಲ್ನಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಪುನೀತ್ ಕೆರೆಹಳ್ಳಿ ಮತ್ತು ಇತರರು ಪುಂಡಾಟ ತೋರಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರಣ ಕಾಂಗ್ರೆಸ್ ಜಾಥಾ ಹಿನ್ನೆಲೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ನಾಯಕರ ಫೋಟೊ ಹಾಕಿದ್ದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಂಬೇಡ್ಕರ್ , ಇಂದಿರಾ ಗಾಂಧಿ, ನೆಹರು , ಟಿಪ್ಪು ಸುಲ್ತಾನ್ ಸೇರಿದಂತೆ ಹಲವಾರು ಹೋರಾಟಗಾರರ ಭಾವಚಿತ್ರ ಮುದ್ರಿಸಿ ಹಾಕಿದ್ದರು. ಟಿಪ್ಪು ಭಾವಚಿತ್ರವಿರುವ ಕಡೆ ನುಗ್ಗಿ, ಬ್ಯಾನರ್ ಹರಿದು ತುಳಿದ ಹಾಕಿರುವುದನ್ನು ನೋಡಿದ ದಾರಿಹೋಕರಿಂದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಹಿತಿ ಕೊಟ್ಟಿದ್ದಾರೆ.
ಸ್ವಾತಂತ್ರ ಅಮೃತ ಮಹೋತ್ಸವ ಬೆನ್ನಲ್ಲೇ ಈ ರೀತಿಯ ಕೋಮು ಸಂಘರ್ಷಕ್ಕೆ ಕಾರಣವಾಗುವ ಕೃತ್ಯವೆಸಗುವವರ ಮೇಲೆ ಕಠಿಣ ಕಾನೂನು ಕ್ರಮದ ಅನಿವಾರ್ಯವಿದೆ. ಪೊಲೀಸರು ಇಂಥಹ ಕಿಡಿಗೇಡಿಗಳ ಮೇಲೆ ಕಾನೂನು ಪ್ರಯೋಗ ಮಾಡದಿದ್ದರೇ ಮತ್ತಷ್ಟು ಪ್ರಚೋದನೆಯಾಗುವ ಸಾಧ್ಯತೆಯಿದೆ.
ಟಿಪ್ಪು ಸ್ವಾತಂತ್ರ್ಯ ಕೋಮು ವಿಚಾರ; ಟಿಪ್ಪು ಸುಲ್ತಾನ್ ಹೈದರ್ ಅಲಿಯ ಮಗನಾಗಿದ್ದು ಹೈದರ್ ಅಲಿ ಬಳಿಕ ಮೈಸೂರು ಸಂಸ್ಥಾನದ ಅಧಿಕಾರವನ್ನು ವಹಿಸಿಕೊಂಡಿದ್ದ. ಟಿಪ್ಪು ಕೊಡಗಿನಲ್ಲಿ ಹಿಂದೂಗಳ ವಿರುದ್ದ ಕೌರ್ಯವನ್ನು ಎಸಗಿದ್ದ, ಮತಾಂಧ ಅನ್ನೋದು ಬಿಜೆಪಿಗರ ವಾದವಾಗಿದ್ದು ಟಿಪ್ಪುವನ್ನು ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ.
ಇನ್ನು ಟಿಪ್ಪುವಿನ ಹೋರಾಟ , ಬ್ರಿಟಿಷರ ವಿರುದ್ದ ಸೆಣಸಿದ ರೀತಿ, ಮಕ್ಕಳನ್ನೇ ಒತ್ತೆಯಾಳಾಗಿಟ್ಟ ಪ್ರಸಂಗ ಇವೆಲ್ಲಾವನ್ನು ಹೋರಾಟ ಎನ್ನುವ ಮತ್ತೊಂದು ಗುಂಪು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುತ್ತಾರೆ. ಈ ವಿಚಾರದಲ್ಲಿ ನಿರಂತರವಾಗಿ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ.
ಆದರೆ ಬೆಂಗಳೂರಿನಲ್ಲಿ ಟಿಪ್ಪುವಿನ ಭಾವಚಿತ್ರವನ್ನು ಹರಿದು ಹಾಕುವ ಮೂಲಕ ಪುನೀತ್ ಕೆರೆಹಳ್ಳಿ ಮತ್ತು ಇತರರು ಕೋಮು ಭಾವನೆಯನ್ನು ಕೆರಳಿಸುವ ಕೆಲಸವನ್ನು ಮಾಡಿದ್ದಾರೆ. ಪೊಲೀಸರು ಇಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ ಸಮಾಜದಲ್ಲಿ ಕಲಹ ಉಂಟಾಗುವ ಸಾಧ್ಯತೆಗಳಿರುತ್ತವೆ.
ಟಿಪ್ಪು ಭಿತ್ತಿಚಿತ್ರಕ್ಕೆ ಹಾನಿ, ಡಿಕೆಶಿ ಹೇಳಿದ್ದೇನು?; ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬ್ಯಾನರ್ ಅನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿ ಟಿಪ್ಪು ಸುಲ್ತಾನ್ ಅರಮನೆ ಇದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದವರಿಗೆ ಗೌರವ ನೀಡುತ್ತಿದೆ. ಆದರೂ ಈ ರೀತಿ ಘಟನೆಗಳು ನಡೆಯುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಇದ್ದರೂ ಅದನ್ನು ಹರಿದಿದ್ದಾರೆ. ಈ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಕೃತ್ಯ ಯಾರು ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕೂಡಲೇ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇದೊಂದು ದೇಶದ ಪಾಲಿನ ಸಂಭ್ರಮದ ಸಂದರ್ಭ. ಈ ಸಮಯದಲ್ಲಿ ನಾವು ಶಾಂತಿ ಕಾಪಾಡಬೇಕು. ಕೆಲ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ನಾವು ವಿಚಲಿತರಾಗಬಾರದು ಎಂದು ತಿಳಿಸಿದ್ದಾರೆ.
ಟಿಪ್ಪು ಸ್ಮರಣೆ ಅಲ್ಪಸಂಖ್ಯಾತರ ಓಲೈಕೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಸ್ವಾತಂತ್ರ್ಯಕ್ಕಾಗಿ ಎಲ್ಲಾ ಸಮುದಾಯದವರೂ ಹೋರಾಟ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ವಿಚಾರ ಹೋರಾಟಗಾರರಲ್ಲಿ ಇತ್ತು, ಜಾತಿ ಧರ್ಮದ ವಿಚಾರ ಅಲ್ಲ" ಎಂದರು.