ಆನೆದಂತ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳ ಸೆರೆ
ಬೆಂಗಳೂರು,ನವೆಂಬರ್ 17: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಚಿತ್ತೂರು ಜಿಲ್ಲೆಯ ಗುಟ್ಟುಪಾಳ್ಯಂ ನಿವಾಸಿ ಲೋಕೇಶ್, ಮದನಪಲ್ಲಿಯ ಪೂಲಾಕುಟ್ಲಪುರ ನಿವಾಸಿ ಮಂಜುನಾಥ್ ಎನ್. ಶ್ರೀಹರಿಪುರ ನಿವಾಸಿ ಗೋವಿ ವಿ. ಎಂಬುವರು ಬಂಧನಕ್ಕೆ ಒಳಗಾದವರು. ಸೋಮವಾರ ಮಧ್ಯಾಹ್ನ ಹೆಬ್ಬಾಳದ ಗುಡ್ಡದಹಳ್ಳಿ ಟೆಂಪೋ ನಿಲ್ದಾಣ ಬಳಿ ಆನೆ ದಂತ ಮಾರಲು ಯತ್ನಿಸಿದ್ದರು.
110 ಕೆ.ಜಿ ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಶಿವ!
ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆನೆ ದಂತ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಸಮೀಪದ ಮರಳು ಲಾರಿ ಸ್ಟ್ಯಾಂಡ್ ಬಳಿ ಮೂರು ಆನೆ ದಂತ ಇಟ್ಟಿರುವ ಸಂಗತಿ ಬಾಯಿ ಬಿಟ್ಟಿದ್ದಾರೆ.
Recommended Video
ಆರೋಪಿಗಳೆಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಗೋಪಿ ಎಂಬಾತ ಲೋಕೇಶ್ಗೆ ಆನೆ ದಂತಗಳನ್ನು ನೀಡಿದ್ದಾನೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಟ್ಟರೆ ಕಮೀಷನ್ ನೀಡುವುದಾಗಿ ಹೇಳಿದ್ದು, ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ಆನೆ ದಂತಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.