ಕೂಲಿನಗರ ಬ್ರಿಡ್ಜ್ ಬಳಿ ದರೋಡೆಕೋರನ ಕಾಲಿಗೆ ಗುಂಡು
ಬೆಂಗಳೂರು, ಡಿಸೆಂಬರ್ 1: ಲಾರಿ ಚಾಲಕನಿಗೆ ಡ್ರಾಗರ್ ನಿಂದ ಇರಿದು ದರೋಡೆ ಮಾಡಿದ್ದ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ನಂದಿನಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಹತ್ತು ದಿನದಲ್ಲಿ ಹತ್ತಕ್ಕೂ ಹೆಚ್ಚು ಕಡೆ ದರೋಡೆ ಮಾಡಿದ್ದ ಈತನಿಗೆ ಮೊಬೈಲ್ ಟಾರ್ಗೆಟ್. ರೋಡ್ ನಲ್ಲಿ ಹೋಗುವರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ದೋಚುತ್ತಿದ್ದ. ಮಂಗಳವಾರ ಬೆಳಗ್ಗೆ ಲಗ್ಗೆರೆ ಕೂಲಿ ನಗರ ಬ್ರಿಡ್ಜ್ ಬಳಿ ಇರುವ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪಿಎಸ್ ಐ ಜೋಗಾನಂದ್ ಗುಂಡು ಹಾರಿಸಿ ಆರೋಪಿ ಅನ್ಬನ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಅಭಿಷೇಕ್ ಗಾಯಗೊಂಡಿದ್ದುಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳ ಹಿಂದೆ ನಂದಿನಿ ಬಡಾವಣೆ ಸಮೀಪ ಲಾರಿ ಚಾಲಕನಿಗೆ ಡ್ರಾಗರ್ ನಿಂದ ಇರಿದು ಮೂವತ್ತು ಸಾವಿರ ನಗದು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಚಾಲಕನ ತಲೆಗೆ ಗಂಭೀರ ಪೆಟ್ಟಾಗಿತ್ತು. ನಂದಿನಿ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಎರಡನೇ ಆರೋಪಿ ಅನ್ವರ್ ಎಂಬುವನ್ನು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಮೊದಲನೇ ಆರೋಪಿ ಅನ್ಬನ್ ಇರುವ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಕಾನ್ಸ್ಟೇಬಲ್ ಅಭಿಷೇಕ್ ಆರೋಪಿ ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆರೋಪಿಗೆ ಶರಣಾಗಲು ಪೊಲೀಸರು ಸೂಚಿಸಿದ್ರೂ ಪ್ರಯೋಜನ ಆಗಿಲ್ಲ. ದಾಳಿ ನಡೆಸಲು ಮುಂದಾದ ಆರೋಪಿ ಕಾಲಿಗೆ ಪಿಎಸ್ ಐ ಜೋಗಾನಂದ್ ಗುಂಡು ಹಾರಿಸಿದ್ದು, ಅದು ಕಾಲಿಗೆ ಬಿದ್ದಿದೆ. ಪೊಲೀಸ್ ಕಾನ್ಸ್ ಟೇಬಲ್ ಅಭಿಷೇಕ್ ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮೊಬೈಲ್ ದರೋಡೆ ಮಾಡುವುದೇ ಕಾಯಕ ಮಾಡಿಕೊಂಡಿರುವ ಅನ್ಬನ್ ಆರ್ಎಂಸಿ ಯಾರ್ಡ್ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಒಂದು ತಿಂಗಳ ಗಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ. ಈತನ ವಿರುದ್ಧ ಮಾಗಡಿ ರಸ್ತೆ , ಯಶವಂತಪುರ, ಮಹಾಲಕ್ಷ್ಮೀ ಬಡಾವಣೆ ನಂದಿನಿ ಬಡಾವಣೆ ಠಾಣೆಗಳಲ್ಲಿ ಹಲವು ಕೇಸು ದಾಖಲಾಗಿವೆ. ವಾರದ ಹಿಂದೆ ಲಾರಿ ಚಾಲಕನಿಗೆ ಇರಿದು ದರೋಡೆ ಮಾಡಿದ್ದ. ಹತ್ತು ದಿನದಲ್ಲಿ ಹತ್ತಕ್ಕೂಹೆಚ್ಚು ಕಡೆ ದರೋಡೆ ಮಾಡಿದ್ದ. ಲಾರಿ ಚಾಲಕನ ಬಳಿ ದರೋಡೆ ಮಾಡಿದ್ದ ಪ್ರಕರಣದ ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.