ಜಯನಗರದಲ್ಲಿ ಚುನಾವಣಾ ಅಕ್ರಮ ತಡೆಯುವಲ್ಲಿ ಆಯೋಗ ವಿಫಲ: ರವಿಕೃಷ್ಣಾ ರೆಡ್ಡಿ
Recommended Video
ಬೆಂಗಳೂರು, ಮೇ 29: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ವಿಫಲವಾಗಿದ್ದು, ತಾವೇ ಸ್ವತಃ ಅಕ್ರಮ ತಡೆಗಟ್ಟಲು ಕಾರ್ಯಕರ್ತರನ್ನು ನೇಮಕ ಮಾಡಿರುವುದಾಗಿ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ಕ್ಷೇತ್ರದಲ್ಲಿ ಶನಿವಾರ ಕುಕ್ಕರ್ ಹಾಗೂ ಸೀರೆಗಳನ್ನು ರಾಜಾರೋಷವಾಗಿ ಹಂಚಿಕೆ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಣ ಹಂಚಿಕೆ ಮಾಡಿದ್ದಾರೆ. ಇದನ್ನು ನೋಡಿ ಚುನಾವಣಾ ಆಯೋಗ ಕಂಡು ಕಾಣದಂತೆ ಕುಳಿತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೆ 2 ಸಾವಿರ ರೂ. ಸಂಬಳ ನೀಡಿ, ಅಕ್ರಮ ತಡೆಗಟ್ಟಲು ನೇಮಕ ಮಾಡಿಕೊಂಡಿರುವುದಾಗಿ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಜಯನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ನಾಮಪತ್ರ
ಚುನಾವಣೆಗಾಗಿ ಸಾರ್ವಜನಿಕರಿಂದ 15 ಲಕ್ಷ ರೂ. ದೇಣಿಗೆಯನ್ನು ನಿರೀಕ್ಷಿಸಲಾಗಿದೆ. ಈ ವರೆಗೆ 11 ಲಕ್ಷ ರೂ. ದೇಣಿಗೆ ಬಂದಿದೆ ಇನ್ನೂ 6 ಲಕ್ಷ ರೂ.ಗಳು ಸಾರ್ವಜನಿಕರಿಂದ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ಬರುವ ನಿರೀಕ್ಷೆ ಇದೆ. ಇಲ್ಲಿವರೆಗೆ 7.5 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇನೆ. ಈ ಕ್ಷೇತ್ರದಲ್ಲಿರುವ ಪ್ರಭಾವಿ ಅಭ್ಯರ್ಥಿಗಳನ್ನು ಜನರಿಂದಲೇ ಸೋಲಿಸಲು ಪ್ರಯತ್ನಿಸುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.